Friday, October 23, 2020

ಪಯಣ - 17

ಬಹುಷಃ ನನಗಾಗಿಯೇ ಎಂಬಂತೆ ಮೂರ್ನಾಲ್ಕು ಬಗೆಯ ರುಚಿಕಟ್ಟಾದ ಸಸ್ಯಾಹಾರಿ ಭಕ್ಷ್ಯಗಳನ್ನು ತಯಾರಿಸಿದ್ದ ಅವರು ನನ್ನ ಹೊಟ್ಟೆಯ ಕಟ್ಟೆ ಹೊಡೆಯುವಷ್ಟು ತಿನಿಸಿದರು. ನಂತರ ಅವರ ಮನೆಯ ಚಡಿಯ ಮೇಲೆ ಬಂದು ಕೂತು ಮಾತಿಗಿಳಿದು ನನ್ನ ಬಗೆಗೆ ಕೇಳಿ ತಿಳಿದುಕೊಂಡು ಈ ವಯಸ್ಸಿನಲ್ಲಿಯೇ ಅಧ್ಯಾತ್ಮದ ಬಗೆಗಿನ ನನ್ನ ಒಲವಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

'ಆದ್ರೆ ಬಾಯಿಜಾನ್ ಒಂದು ಪ್ರೆಶ್ನೆ..' ಎಂದು ನನ್ನ ಮುಖವೆನ್ನೇ ಅವರು ನೋಡತೊಡಗಿದರು. ಆ ನೋಟದಲ್ಲಿ ಒಂದು ಬಗೆಯ ದ್ವಂದ್ವ ಹಾಗು ಕೊಂಚ ಕಾಳಜಿಯೂ ತುಂಬಿಕೊಂಡಿತ್ತು.

'ನೀವ್ ಹುಡುಕಿಕೊಂಡು ಹೋಗ್ತಿರೋ ಆ ಭಗವಂತ ನಿಮ್ಗೆ ಖಂಡಿತವಾಗಿಯೂ ಸಿಗ್ತಾನ?' ಎಂದು ಕೇಳಿದರು.

ಕೊಂಚ ಮುಗುಳ್ ನಕ್ಕ ನಾನು 'ಭಾಯಿ, ನಾನು ಯಾವ ಭಗವಂತನನ್ನೂ ಹುಡುಕಿಕೊಂಡು ಹೋಗ್ತಾ ಇಲ್ಲ.. ಆತ ಇಲ್ಲಿ , ಅಲ್ಲಿ , ಎಲ್ಲೆಲ್ಲಿಯೂ ಇದ್ದಾನೆ. ಗುರುತು ಪರಿಚಯ ಇಲ್ಲದ ನನ್ನನ್ನು ನಿಮ್ಮ ಮನೆಗೆ ಕರೆದು ತಂದು ಸತ್ಕರಿಸಿದಿರಿ .. ಆತ ನಿಮ್ಮ ರೂಪದಲ್ಲೂ ಇದ್ದಾನೆ .. ಆದರೆ ನಾನು ಹೋಗ್ತಾ ಇರೋದು ಮನಸ್ಸು ಸೆಳೆದ ಕಡೆಗೆ .. ಆ ಅಪೂರ್ವ ಬೆಳಕಿನ ಬಳಿಗೆ '

'ಅಪೂರ್ವ ಬೆಳಕು..' ಎಂದು ಪುನಃ ಕೊಂಚ ದಿಗ್ಬ್ರಾಂತರಾದ ಅವರನ್ನು ಕಂಡು,

'ಜಾಸ್ತಿ ಯೋಚಿಸಬೇಡಿ .. ನಾನು ವಾಪಸ್ಸು ಬರುವಾಗ ಪುನಃ ನಿಮ್ಮಲಿಗೆ ಬಂದು ಅದರ ಬಗ್ಗೆ ವಿವರಿಸುತ್ತೀನಿ' ಎಂದೆ.

ಬೇರೇನು ಕೇಳದೆ ಅವರೂ ಸುಮ್ಮನಾದರು. ಕಲ್ಪನೆಗೂ ಮೀರಿದ ನಮ್ಮ ಸಂಭಾಷಣೆಗಳನ್ನು ತನ್ನ ಪುಟ್ಟ ಕಣ್ಣುಗಳನ್ನು ಅರಳಿಸಿ ಅಲಿ ನಮ್ಮನ್ನೇ ನೋಡತೊಡಗಿದ್ದ.

ನಂತರ ಕೊಂಚ ಲೋಕಾರೂಡಿಯ ಮಾತನಾಡಿ ನಾನು ಇನ್ನೇನು ಹೋರಡುತ್ತೀನಿ ಎಂದು ಹೇಳಿದಾಗ ಬಿಡದೆ ಇನ್ನೂ ಒಂದು ದಿನ ಅಲ್ಲಿಯೇ ಇರುವಂತೆ ಒತ್ತಾಯಿಸಿದರು. ಅಲ್ಲದೆ ಮಾರನೆ ದಿನ ಅವರೇ ನೆಡೆಸುವ ಮೋಟಾರು ರಿಪೇರಿ ಅಂಗಡಿಗೆ ಕರೆದುಕೊಂಡು ಹೋಗಿ ದೂಳುಗಟ್ಟಿದ ನನ್ನ ಗಾಡಿಯನ್ನು ಸಂಪೂರ್ಣವಾಗಿ ಸರ್ವಿಸ್ ಮಾಡಿ ಹಣಕೊಡಲು ಮುಂದಾದರೂ ತೆಗೆದುಕೊಳ್ಳದೆ ನನ್ನನ್ನು ತಬ್ಬಿಕೊಂಡು ಬೆನ್ನು ತಟ್ಟಿ ಅಲ್ಲಿಂದ ಬೀಳ್ಕೊಟ್ಟರು.

****



'ಒಹ್..' ಎಂದಷ್ಟೇ ಹೇಳಲು ಶಕ್ತನಾದ ಲೋಕೇಶ ಮುಂದೇನು ಕೇಳಬೇಕೆಂದು ತೋಚದೆ ಸುಮ್ಮನಾದ. ಮೊದಲ ಬಾರಿ ಎಂಬಂತೆ ಆದಿ ಖುಷಿಯ ಕುರಿತು ಲೊಕೇಶನ ಬಳಿ ಮನಸ್ಸು ಬಿಚ್ಚಿ ಮಾತನಾಡತೊಡಗಿದ. ತನ್ನ ಜೀವನದಲ್ಲಿ ಮೂಡಿದ ಕೆಲವೇ ಕೆಲವು ಸಂತೋಷದ ಕಿರಣಗಳಿಗೆ ಕಾರಣಳಾಗಿದ್ದ ಖುಷಿ ಬೇರೊಬ್ಬನನ್ನು ಇಷ್ಟಪಡುತ್ತಿರುವುದಾಗಿ ಹೇಳಿದಳಂತೆ. ಆಕೆಯ ಕುಟುಂಬ ತುಂಬಾನೇ ಆತ್ಮೀಯವಾಗಿ ಬಲ್ಲ ಆ ಹುಡುಗನ ಕುಟುಂಬವನ್ನು ನೋಡಿದರೆ ಮುಂದೆ ಯಾವುದೇ ವಿಘ್ನಗಳು ಎದುರು ಕಾಣುವುದಿಲ್ಲವಂತೆ. ಅದನ್ನು ಕೇಳಿದ ಆದಿಯ ಮನಸ್ಸು ಭಾರವಾಯಿತು. ಅಲ್ಲಿಯವರೆಗಿದ್ದ ಆತನ ಏಕೈಕ ನಂಬಿಕೆಯ ಕೋಟೆ ಛಿದ್ರವಾಯಿತು. ಎದೆ ವಿಪರೀತವಾಗಿ ನೋಯತೊಡಗಿತು. ಕೊನೆಗೆ ಆತ ಕಾಲೇಜಿನ ಕರಿಡಾರಿನ ನೆಲದ ಮೇಲೆಯೇ ಕುಸಿದುಬಿಟ್ಟ. ದುಃಖ ತುಂಬಿದ ಆತನ ಮನಸ್ಸು ಒಮ್ಮೆಲೇ ಅತ್ತುಬಿಡಬೇಕೆಂದು ಅವಣಿಸುತ್ತಿದ್ದರೂ ಆತ ತಡೆದುಕೊಂಡಿದ್ದ. ಕೂಡಲೇ ಲೊಕೇಶನನ್ನು ನೆನಪಿಸಿಕೊಂಡು ಆತನಿರುವಲ್ಲಿಗೆ ಬಂದು ಒಂದೇ ಸಮನೆ ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ. ತನ್ನ ಬಾಲ್ಯದಿಂದ ಇಂದಿನವರೆಗಿನ ಆಕೆಯ ಒಡನಾಟ, ಗೆಳೆತನ ಎಲ್ಲವನ್ನು ಆದಿ ವಿವರಿಸಿದ.

'ಇಷ್ಟೊಂದು ನಿನ್ನ ಹಚ್ಚ್ಕೊಂಡವಳು ಸಡನ್ ಆಗಿ ಬೇರೆಯವರ್ನ ಅದೇಗೆ ಇಷ್ಟ ಪಡ್ತಾಳೋ' ಲೋಕೇಶ ಕೇಳಿದ.

'ಅದ್ರಲ್ಲಿ ಏನ್ ತಪ್ಪಿದೆ ಲೋಕಿ? That's fine.. ಅವ್ಳು ಬೇರೆ ಯಾರನ್ನೂ ಇಷ್ಟ ಪಡ್ದಲೇ ಇರ್ಬಾರ್ದು ಅಂತ ಏನ್ ಇಲ್ವಲ್ಲ. Infact I respect her feelings towards someone.. let her be happy .. ಆದ್ರೆ..' ಎಂದ ಮರು ಸೆಕೆಂಡಿನಲ್ಲೇ ಮತ್ತೊಂದು ಸುತ್ತಿನ ಅಳುವನ್ನು ಶುರುಮಾಡಿದ.

ಲೋಕೇಶ ಆತನನ್ನೇ ತೀಕ್ಷ್ಣ ಕಣ್ಣುಗಳಿಂದ ನೋಡತೊಡಗಿದ.

**

ಆದರೆ ಅಂದಿನಿಂದ ಆದಿ ತೀರಾನೇ ಮಂಕಾದ. ಓಟ ಪಾಠಗಳೆಲ್ಲ ದೂರದ ಮಾತು ಪ್ರತಿನಿತ್ಯ ಕನಿಷ್ಠ ಒಂದು ಹೊತ್ತು ಊಟವನ್ನೂ ಮಾಡುವುದ ನಿಲ್ಲಿಸಿದ. ಆತನ ಅಮ್ಮನ ಫೋನುಗಳು ಒಂದರಿಂದೊಂದು ದಿನವಿಡಿ ಬಂದರೂ ಯಾವಾಗಲಾದರೊಮ್ಮೆಯಷ್ಟೇ ಆತ ಅವುಗಳಿಗೆ ಉತ್ತರಿಸತೊಡಗಿದ. ಪ್ರತಿದಿನ ಬೆಳಗ್ಗೆ ಲೋಕೇಶ ಆತನನ್ನು ರನ್ನಿಂಗ್ ಟ್ರ್ಯಾಕ್ ನಲ್ಲಿ ಓಡಿಸುವುದಕ್ಕೆ ಹಲವು ಬಗೆಯ ಹರಸಾಹಸ ಮಾಡಿದರೂ ಬೆಡ್ಡಿನಿಂದ ಒಂದಿಚೂ ಆತನನ್ನು ಕದಲಿಸಲಾಗುತ್ತಿರಲಿಲ್ಲ. ಕಾಲೇಜಿನ ಶಿಕ್ಷಕರೂ ಈಗ ಆದಿಯನ್ನು ವಿಚಾರಿಸತೊಡಗಿದರು. ಕೆಲವರು ಫೋನು ಮಾಡಲು ಪ್ರಯತ್ನಿಸಿದರೂ ಆತ ಉತ್ತರಿಸುತ್ತಿರಲಿಲ್ಲ.

ಲೋಕೇಶ ತನ್ನ ಕೈಲಾದ ಪ್ರಯತ್ನವನ್ನು ಮಾಡಿ ಸುಸ್ತಾದ. ಕೆಲವೊಮ್ಮೆ ಖುಷಿಗೆ ತಾನೇ ಖುದ್ದಾಗಿ ಫೋನಾಯಿಸಬೇಕೆಂಬ ಮನಸ್ಸಾದರೂ ಒಮ್ಮೆಯೂ ಮಾತನಾಡಿರದ ಆಕೆಯೊಟ್ಟಿಗೆ ಏನು ಮಾತಾಡಬೇಕೆಂದು ತೋಚದೆ ಸುಮ್ಮನಾಗುತ್ತಿದ್ದ. ಆದಿ ಗುರುತು ಹಿಡಿಯದಷ್ಟು ಸಣಕಲಾಗತೊಡಗಿದ. ಲೋಕೇಶ ಪ್ರತಿದಿನ ಆತನ ಕಾಲುಗಳಿಗೆ ಬಗೆಬಗೆಯ ಎಣ್ಣೆಗಳನ್ನು ತಿಕ್ಕುತ್ತಾ ಕನಿಷ್ಠ ಕಾಲಿನ ಸ್ನಾಯುಗಳಾದರೂ ಸಣಕಲಾಗದಿರಲಿ ಎಂದು ಪ್ರಯತ್ನಿಸತೊಡಗಿದ. ಅದೆಷ್ಟೇ ಒತ್ತಾಯ ಮಾಡಿದರು ಬಿಯರ್ ಅನ್ನು ಸಹ ಮುಟ್ಟುವುದನ್ನು ಬಿಟ್ಟುಬಿಟ್ಟ ಆದಿ. ಕೆಲವೊಮ್ಮೆ ಹಿಂದೂಸ್ತಾನಿ ಸಂಗೀತವನ್ನು ಹಾಕುವಂತೆ ಕೇಳಿದರೂ ಕೊಂಚ ಸಮಯದಲ್ಲೇ ಬೇಡವೆಂದು ನಿಲ್ಲಿಸಿಬಿಡುತ್ತಿದ್ದ. ವಸಂತಕಾಲವನ್ನು ಕಳೆದ ಮರದಂತೆ ಬರಡಾಯಿತು ಆದಿಯ ಮನಸ್ಸು. ತಾನೆಂದು ಅಂದುಕೊಂಡಿರದ, ಕೇವಲ ಕನಸ್ಸಿನಲ್ಲಿಯೇ ಮಾತ್ರ ಸಾಧ್ಯವಾಗಬಹುದಿದ್ದ ಖುಷಿಯ ಸಾಂಗತ್ಯ ಈ ಬಗೆಯಲ್ಲಿ ಮುರಿದುಬೀಳುತ್ತದೆ ಎಂದು ಬಹುಶಃ ಆತನಿಗೆ ತಿಳಿದಿರಲಿಲ್ಲ. ಹಸಿದ ಕರುವಿಗೆ ಅಮ್ಮನ ಘಂಟೆಯ ಸದ್ದಿನ ಮುದ್ದು ನಾದವಾಗಿದ್ದ, ಜ್ವಾಲಾಮುಖಿಯೇ ಎದುರಾದರೂ ಧೈರ್ಯದಿಂದ ಎದುರಿಸಬಲ್ಲ ಶಕ್ತಿಯಾಗಿದ್ದ ಖುಷಿ ಆದಿಯನ್ನು ಒಂಟಿಯಾಗಿಸಿದಳು.

ಕೆಲವೊಮ್ಮೆ ಇದೆಲ್ಲ ಕನಸ್ಸಾಗಿ ನಾಳೆ ಪುನ್ಹ ನಾನು ಖುಷಿಗೆ ಫೋನಾಯಿಸಬಾರದೇಕೆ? 'ಹಲೋ..' ಎಂಬ ಉದ್ವೇಗಭರಿತ ಆಕೆಯ ಮಾತುಗಳು ನನ್ನನ್ನು ಮತ್ತೊಮ್ಮೆ ಸಂತೈಸಬಾರದೇಕೆ? ಆಕೆಯನ್ನು ನಾನು ಇನ್ನೂ ಆಳವಾಗಿ ಅರಿಯಬಾರದೇಕೆ? ನನ್ನೊಳಗಿನ ತುಮುಲಗಳನ್ನೆಲ್ಲ ಎಳೆಎಳೆಯಾಗಿ ಆಕೆಯೊಟ್ಟಿಗೆ ಹಂಚಿಕೊಳ್ಳಬಾರದೇಕೆ? ಎಂದು ಯೋಚಿಸಿದಾಗಲೆಲ್ಲ ಆದಿಯ ಕಣ್ಣಂಚುಗಳು ಒದ್ದೆಯಾಗುತ್ತಿದ್ದವು. ಕನಿಷ್ಠ ಪಕ್ಷ ಆಕೆ ದಿನಕೊಮ್ಮೆಯಾದರೂ ನನಗೆ ಫೋನನ್ನು ಮಾಡುತ್ತಿರಲಿ. ನನ್ನೊಟ್ಟಿಗೆ ಮನಸ್ಸು ಬಿಚ್ಚಿ ಮಾತಾಡುತ್ತಿರಲಿ. ಕೊನೆಯ ಪಕ್ಷ ಗೆಳೆಯರಾಗಿಯಾದರೂ ಸರಿಯೇ, ಆಕೆ ನನ್ನೊಂದಿಗೆ ಎಂದೆಂದಿಗೂ ಇರಲಿ. ಆಕೆ ಯಾರನನ್ನಾದರೂ ಮದುವೆಯಾಗಲಿ. ಆಕೆಯ ಪ್ರೀತಿಯೂ ಒಂದು ಪ್ರೀತಿಯಲ್ಲವೇ? ಕೂಡಲೇ ಆತನಿಗೆ ಏನೋ ಅನಿಸಿತು. ಅದು ಆತನನ್ನು ಸಟೆದು ಕೂರುವಂತೆ ಮಾಡಿತು.

'ಪ್ರೀತಿ?! ಮೊದಲ ಬಾರಿಗೆ ನನ್ನ ಮನಸ್ಸು ಪ್ರೀತಿ ಎಂಬ ಪದವನ್ನು ಎತ್ತಿದೆ. ಇಷ್ಟೆಲ್ಲಾ ಆದರೂ ಪ್ರಸ್ತುತ ಘಳಿಗೆಯವರೆಗೂ ಆಕೆಯನ್ನು ನಾನು ಪ್ರೀತಿಯೆಂಬ ಕಣ್ಣಿನಿಂದ ನೋಡುತ್ತಿದ್ದೇನೆ ಎಂದು ಅಂದುಕೊಂಡಿರಲೇ ಇಲ್ಲ.. ಇದೇಗೆ ಸಾಧ್ಯ?! ನನ್ನ ಹಾಗು ಆಕೆಯ ಆ ಅತ್ಯಾಪ್ತ ಸಂಬಂಧ ಪ್ರೀತಿಯ ಸಂಕೇತವೇ? ಪ್ರೀತಿ ಎಂದರೆ ಹೀಗೆಯೇ. ಇದು ಪ್ರೀತಿಯೇ?'



**

ಕನ್ನಡಿಯ ಮುಂದೆ ಆದಿಯನ್ನು ತರತನೇ ಎಳೆದು ತಂದ ಲೋಕೇಶ ಛಟಾರನೆ ಆತನ ಕೆನ್ನೆಗೆ ಭಾರಿಸಿದ. ಆದಿ ಏನೂ ಮಾತನಾಡದೆ ತಲೆ ಕೆಳಹಾಕಿಕೊಂಡು ನಿಂತ. ಒಂದರಿಂದೊಂದಂತೆ ನಾಲ್ಕು ಭಾರಿ ಪುನಃ ಭಾರಿಸಿದ. ಲೊಕೇಶನ ಮುಖ ಕೆಂಪೇರಿದರೂ ಆದಿಯ ಮುಖಭಾವದಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ.

'ಬಡ್ಡಿ ಮಗ್ನೆ.. ಅಮ್ಮ ನೋಡಿದ್ರೆ ಅಲ್ಲಿ ಅಪ್ಪ ಇಲ್ಲ ಅಂತ ಒಬ್ರೇ ನರಳ್ತಾ ಇದ್ದಾರೆ..ಆರೋಗ್ಯ ಹದಗೆಟ್ಟಿ ಸಣಕಲಾಗಿ ಹೋಗಿದ್ದಾರೆ.. ನಿನ್ಗೆ ಮಾತ್ರ ಅದ್ಯಾರೋ ಶೂರ್ಪನಖಿ ಸಿಗ್ಲಿಲ್ಲ ಅಂತ ಸಾಯ್ತಾ ಇದ್ದೀಯ.. ಥು .. ನಿಂದೂ ಒಂದ್ ಜನ್ಮನ .. ನಿನ್ನಂತ ಮಕ್ಳು ಇದ್ರೆಷ್ಟು ಸತ್ರೇಷ್ಟು .. ಜೀವಕೊಟ್ಟ ಪೇರೆಂಟ್ಸ್ ಗಿಂತ ನಿಮ್ಮಂತವರಿಗೆ ದಾರೀಲಿ ಸತ್ರೂ ತಿರಿಗ್ ನೋಡ್ದೆ ಇರೋ ಜನರೇ ಇಷ್ಟ ಆಗ್ತಾರೆ .. ಇನ್ಫ್ಯಾಕ್ಟ್ ಅದು ಅವ್ರ್ ತಪ್ಪಲ್ಲಪ್ಪ .. ನಿನ್ನಂತ ಮೂರ್ ಕಾಸಿನ ಜನ್ರ ತಪ್ಪು .. ಯಾರಲೇ ಅದು .. ಅಪ್ಪ ಅಮ್ಮನಿಗಿಂತಾನೂ ಜಾಸ್ತಿ ಆಗೋರು.. ಹೊಟ್ಟೆ ಬಟ್ಟೆ ಕಟ್ಟಿ ಬೆಳ್ಸೋಕೆ ಮಾತ್ರ ಅವ್ರ್ ಬೇಕು .. ಸೀಮೆಗಿಲ್ದಿರೋ ತುಕಾಲಿ ಮಾತಿಗೆ ನಿಂಗೆ ಬೇರ್ಯವಳ್ ಯಾರೋ ಬೇಕು .. '

ತನ್ನೊಳಗೆ ನೆಡೆಯುತಿದ್ದ ಆಂತರಿಕ ತೊಳಲಾಟಗಳಲ್ಲಿ ಅಮ್ಮನೂ ಅಪ್ಪನೂ ಹಾಗು ಖುಷಿಯೂ ಇದ್ದರೂ ಯಾರೊಟ್ಟಿಗೂ ಆ ಬಗ್ಗೆ ಹೇಳಿಕೊಳ್ಳದ ಆದಿಗೆ ಕೂಡಲೇ ಸಂಕಟದ ಅಲೆಗಳು ಒಳಗಿನಿಂದ ತೋಯಿಸಿ ಬಂದಂತಾಯಿತು. ಆದರೆ ಆತ ಅಳಲಿಲ್ಲ.

'ನೋಡಪ್ಪ ಗುರು .. ನೀನ್ ಯಾವ್ ರೀತಿಯ ಆಶಿಕ್ ಅಂತ ಗೊತ್ತಿಲ್ಲ .. ಅದ್ರೊಟ್ಟಿಗೆ ಏನ್ ಮಾಡ್ಕೊಂಡ್ ಆದ್ರೂ ಸಾಯಿ .. ಆದ್ರೆ ಈಗ ಇಮ್ಮಿಡಿಯೇಟ್ ಆಗಿ ಮನೆಗ್ ಹೋಗು .. ಅಮ್ಮನೊಟ್ಟಿಗೆ ಸ್ವಲ್ಪ ದಿನ ಇರು.. ಮಗ ಅನ್ನೋ ಕಿಂಚಿತ್ತು ಬೆಲೆಯನ್ನಾದರೂ ತೋರ್ಸು ಮಾರಾಯ ... '

ಆದಿ ಆಗಲೂ ಸುಮ್ಮನಿದ್ದ.

'ಇಂಟರ್ನಲ್ಸ್ ಇಲ್ಲ .. ಅಟೆಂಡ್ಎನ್ಸ್ ಇಲ್ಲ .. ಅಟ್ ಲೀಸ್ಟ್ ರನ್ನಿಂಗ್ ಅಲ್ಲಿ ಏನಾದ್ರೂ ಮಾಡಿದ್ರೆ ಸ್ಪೋರ್ಟ್ ಕೋಟದಲ್ಲಿ ಆದ್ರೂ ಎಕ್ಸಾಮ್ಸ್ ಸ್ಕಿಪ್ ಮಾಡಬಹುದಿತ್ತು .. ಕರ್ಮಕ್ಕೆ ಆದೂ ಹಾಳಾಗಿ ಹೋಯ್ತು .. ಇನ್ ಇಲ್ಲಿ ಟೈಮ್ ವೇಸ್ಟ್ ಮಾಡೋಕಿಂತ ಅಮ್ಮನೊಟ್ಟಿಗಾದ್ರೂ ಇರು ಗುರು'

ಎಲ್ಲವನ್ನು ಕೇಳಿ ಆದಿ ಪುನಃ ತನ್ನ ಬೆಡ್ಡಿನ ಮೇಲೆ ಹೋಗಿ ಸುಮ್ಮನೆ ಮಲಗಿದ. ಲೋಕೇಶನಿಗೆ ತನ್ನ ಮುಂದಿದ್ದ ಕನ್ನಡಿಯನ್ನು ಬರಿಗೈಯಿಂದಲೇ ಪುಡಿಮಾಡಬೇಕೆಂಬ ಮನಸ್ಸಾದರೂ ಶಾಂತನಾದ.

ರಾತ್ರಿಯಿಡಿ ಲೋಕೇಶ ಯೋಚಿಸಿದ.

ಆದರೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಆದಿ ಊರಿನ ಬಸ್ಸನ್ನು ಹಿಡಿದ.

**

ಹಲವು ತಿಂಗಳುಗಳ ನಂತರ ಮನೆಗೆ ಬಂದ ಆದಿಯನ್ನು ಕಂಡ ಅಮ್ಮ ಬಾಚಿ ತಬ್ಬಿಕೊಂಡು ಅಳತೊಡಗಿದರು. ಎಲುಬುಗಟ್ಟಿದ ಮಗನ ಸ್ಥಿತಿಯನ್ನು ಕಂಡು ಹೌಹಾರಿದ ಅವರು ಕೂಡಲೇ ಎಲ್ಲವನ್ನು ಮರೆತವರಂತೆ ಮಗನ ಶುಶ್ರುಷೆಯಲ್ಲಿ ತೊಡಗಿದರು. ಮಗನಿಗೆ ಮೆಟ್ಟಿದ ಜನರ ಕಣ್ಣನ್ನು ತೆಗೆಯಲು ಹಳದಿ ಕುಂಕುಮ ಬೆರೆಸಿದ್ದ ನೀರಿನ ತಟ್ಟೆಯೊಳಕ್ಕೆ ತೊಟ್ಟು ಮುರಿದ ತೂತು ಮಾಡಿದ ವೀಳೆಯದೆಲೆಯನ್ನು ಅದ್ದಿ ಅದಕೊಂದಿಷ್ಟು 'ಥು ಥು' ಎಂದು ಉಗಿದು ಮಗನ ಮುಖಕ್ಕೆ ನೀಳಿಸಿ, ನಂತರ ಅದ್ದಿದ್ದ ಎಲೆಯನ್ನು ಗ್ಯಾಸ್ ಸ್ಟೋವಿನ ಮೇಲೆ ಸುಟ್ಟು ಕರಕಲಾದ ಅದರ ಮಸಿಯನ್ನು ತಂದು ಮಗನ ಹಣೆಗೆ ಹಚ್ಚಿ ಕೈಯನ್ನು ಮುಖದ ಮೇಲೆ ಸವರಿ ಲಟಲಟನೆ ಲಟಿಗೆಗಳನ್ನು ಮುರಿದು ಜೋರಾಗಿ ನಿಟ್ಟುಸಿರು ಬಿಟ್ಟರು. ನಂತರ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಲು ಹೇಳಿ , ಬೆನ್ನನ್ನು ಉಜ್ಜಿ ಅವನ ಎಲುಬುಗಟ್ಟಿದ ಬೆನ್ನುಮೂಳೆಗಳನ್ನು ನೋಡುತ್ತಾ 'ಯಾಕ್ ಮಗ ಹೀಗಾಗಿದ್ದೀಯ' ಎಂದು ಕನಿಕರ ಪಟ್ಟರು. ಅಡಿಗೆಮನೆಗೆ ಬಂದವರೇ ಮಗನ ನೆಚ್ಚಿನ ಅಕ್ಕಿ ರೊಟ್ಟಿ ಹಾಗು ಕೋಳಿ ಮಾಂಸದ ಅಡುಗೆಯನ್ನು ಮಾಡತೊಡಗಿದರು. ಬರಗೆಟ್ಟ ಕಟ್ಟೆಯಾಗಿದ್ದ ಆದಿಯ ಹೊಟ್ಟೆಗೆ ಅಮ್ಮನ ಕೈರುಚಿಯ ಮತ್ತು ಎಲ್ಲ ನೋವುಗಳನ್ನು ಮರೆಸಿಹಾಕಿತು. ಲೆಕ್ಕಕ್ಕೆ ಸಿಗದಷ್ಟು ರೊಟ್ಟಿಗಳನ್ನು ತಿಂದು ಮಲಗಿದವನಿಗೆ ಎಚ್ಚರವಾದಾಗ ಸಂಜೆಯ ಕತ್ತಲೆ ಮುಸುಕು ಹಾಕತೊಡಗಿತ್ತು. ಅಮ್ಮ ಕಾದು ಕೂತವಳಂತೆ ಆತ ಕಣ್ಣು ಬಿಡುತ್ತಲೇ ಬಿಸಿಬಿಸಿಯಾದ ಕಾಫಿಯನ್ನು ಮಾಡಿ ತಂದಳು. ಅದೆಷ್ಟೋ ದಿನಗಳಿಂದ ಗಜತೂಕದಂತೆ ಕಲ್ಲಿನಂತಾಗಿದ್ದ ಆತನ ತಲೆಯ ತೂಕ ಮನೆಯ ಘಮಭರಿತ ಕಾಫಿಯನ್ನು ಹೀರುತ್ತಲೇ ಕ್ಷೀಣಿಸತೊಡಗಿತು. ಮನೆಯ ಟೆರೇಸಿನ ಮೇಲತ್ತಿ ಮುಳುಗಿದ ಸೂರ್ಯನ ಹಾದಿಯನ್ನು ಅದೆಷ್ಟೋ ಹೊತ್ತಿನವರೆಗೂ ಹಾಗೆಯೇ ನೋಡುತ್ತಾ ನಿಂತ ಆದಿ. ಸಂಜೆಯ ಹಿತವಾದ ತಂಗಾಳಿ ಆತನ ಮನಸ್ಸಿನ ಭಾರವನ್ನು ತಗ್ಗಿಸಿತು.

'ಎಲ್ ಹೋಗಿರ್ಬಹುದೋ ಆದಿ .. ಇವತ್ತಿಗೆ ಆರ್ ತಿಂಗ್ಳ್ ಆಯ್ತಲ್ಲೋ..' ಟಿವಿಯಲ್ಲಿ ಬರುತ್ತಿದ್ದ ಯಾವುದೊ ಕಾರ್ಯಕ್ರಮವನ್ನು ನೆಪಮಾತ್ರಕ್ಕೆ ನೋಡುವಂತೆ ಅಮ್ಮ ಹೇಳಿದರು.

ಕೆಲ ಕಾಲ ಸುಮ್ಮನಿದ್ದ ಆದಿ ಕೊನೆಗೆ ತಾನು ಅಪ್ಪನನ್ನು ಹುಡುಕಿಕೊಂಡು ತಮಿಳುನಾಡಿನ ಬೃಹದೇಶ್ವರ ದೇವಾಲಯದವರೆಗೂ ಹೋಗಿದ್ದಾಗಿ ಹೇಳಿದನು. ಮಗನ ಮಾತುಗಳನ್ನು ಕೇಳಿ ಆಶ್ಚರ್ಯಗೊಂಡ ಅಮ್ಮ ಆ ಶಿವ ಅದ್ಯಾವ ದೇವಸ್ಥಾನಕ್ಕೆ ಅವ್ರುನ್ನ ಕರಿತಾನೋ ಏನೋ ಎಂದು ಗಳಗಳನೆ ಅಳತೊಡಗಿದರು. ನಂತರ ಅವರು ಹೀಗೆ ಮನೆ ಬಿಡಲು ಬಹುಶಃ ನನ್ನ ಕೊಂಕು ಮಾತುಗಳು ಹಾಗು ಜಗಳವೇ ಕಾರಣ ಎಂದೂ ರೋಧಿಸತೊಡಗಿದರು.

'ನಿನ್ ಯಾಕಮ್ಮ ಅಳ್ತಿಯ .. ಯಾರ್ ಮನೇಲಿ ಇಲ್ದೆ ಇರೋದ್ ಏನಲ್ಲ .. ಯಾರೂ ಬೇಡ ಆದವ್ರಿಗೆ ಜಗಳ ಆದ್ರೇನು ಜಾತ್ರೆ ಆದ್ರೇನು'

'ಮೊದ್ಲೆಲ್ಲ ಹೀಗ್ ಇರ್ಲಿಲ್ಲ ಆದಿ .. ಬರಬರುತ್ತಾ ಈ ಜನ , ಮೋಸ , ವಂಚನೆ , ಸುಳ್ಳುತನ ಇಂತಹ ವಿಷ್ಯಗಳಿಗೇ ಜಾಸ್ತಿ ಸಿಟ್ ಮಾಡ್ಕೊಂಡು ಮನೇಲಿ ಅರಚಾಡತೊಡಗಿದರು.. ನಂಗೂ ಕೋಪ ತಡೀಲಾರ್ದೆ ಬೈಯ್ತಾ ಇದ್ದೆ..'

ಆದಿ ಸುಮ್ಮನಾದ. ಅಪ್ಪ ಅಮ್ಮರ ಅರಚಾಟದ ದಿನಗಳನ್ನು ನೆನೆದು ಆದಿಗೆ ಮತ್ತೆ ತಲೆನೋಯತೊಡಗಿತು. ತಂಗಿಯ ನೆನೆಪೂ ಮರುಕಳಿಸತೊಡಗಿತು. ಸೋಫಾದ ಮೇಲೆಯೇ ಆತ ನಿದ್ರೆಗೆ ಜಾರಿದ. ಅಮ್ಮ ಅವನನ್ನು ಎಬ್ಬಿಸಿ ಮಂಚದ ಮೇಲೆ ಮಲಗಿಸಿದರು.

ಮರುದಿನ ಬೆಳಗ್ಗೆ ಬೇಗನೆ ಎದ್ದ ಆದಿ ವಾಕಿಂಗೆಂದು ನೆಡೆಯುತ್ತಾ ಅಪ್ಪ ಪ್ರತಿದಿನ ಬರುತ್ತಿದ್ದ ಊರ ಹೊರವಲಯದ ಸಣ್ಣ ಕಾಡಿನಲ್ಲಿದ್ದ ಬಿಲ್ಲೇಶ್ವರನ ದೇವಾಲಯಕ್ಕೆ ಬಂದನು. ಕಲ್ಲಿನಿಂದ ನಿರ್ಮಾಣಗೊಂಡಿದ್ದ ಆ ದೇವಾಲಯದ ಸುತ್ತಲೂ ಹಚ್ಚ ಹಸಿರ ಪೊದೆಗಳು ಆವರಿಸಿದ್ದವು. ಚಪ್ಪಲಿಯನ್ನು ಬದಿಗಿರಿಸಿ ಕಲ್ಲಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗೆ ಹೋದರೆ ಅದೇನೋ ಒಂದು ಬಗೆಯ ಶಾಂತತೆ. ಸುಮಾರು ಎಂಟತ್ತು ಶತಮಾನಗಳಿಗೂ ಹಳೆಯದಾದ ಆ ದೇವಾಲಯವನ್ನು ಮೊದಲ ಬಾರಿಗೆ ಆದಿ ಪ್ರವೇಶಿಸಿದ. ಘಾಡ ಕಪ್ಪು ಕಲ್ಲಿನಿಂದ ನಿರ್ಮಾಣಗೊಂಡಿರುವ ಆ ದೇವಾಲಯದ ಮಧ್ಯ ಭಾಗದಲ್ಲಿ ಶಿವನ ಲಿಂಗ ರಾಜಗಾಂಭೀರ್ಯದಿಂದ ನಿಲ್ಲಲ್ಪಟ್ಟಿತು. ಯಾರೋ ಅದೆಷ್ಟೋ ದಿನಗಳ ಹಿಂದೆ ಹಚ್ಚಿದ್ದ ಮಣ್ಣಿನ ದೀಪ ಆದಿಯನ್ನು ಹತ್ತಿರಕ್ಕೆ ಕರೆಯಿತು. ಕೊಡಲೇ ಆದಿ ದೇವಾಲಯದದ ಪಕ್ಕದಲ್ಲಿ ಹರಿಯುತ್ತಿದ್ದ ಸಣ್ಣ ತೊರೆಯಲ್ಲಿ ಕೈಕಾಲುಗಳನ್ನು ತೊಳೆದುಕೊಂಡು, ದೇವಾಲಯಕ್ಕೆ ಅಂಟಿಕೊಂಡಿದ್ದ ದಾಸವಾಳ ಗಿಡದ ಹೂವುಗಳನ್ನು ಕಿತ್ತು ತಂದ. ಗುಡಿಯ ಮೂಲೆಯಲ್ಲಿ ಯಾರೋ ಇಟ್ಟಿದ್ದ ದೀಪದ ಎಣ್ಣೆಯನ್ನು ಕಂಡು ಸುಟ್ಟು ಕರಕಲಾಗಿದ್ದ ದೀಪದ ಬತ್ತಿಯನ್ನು ಸರಿಪಡಿಸಿ ದೀಪವನ್ನು ಹತ್ತಿಸಿದ. ದೀಪದ ಬೆಳಕು ಶಿವಲಿಂಗಕ್ಕೆ ಚಿನ್ನದ ಹೊಳಪನ್ನು ನೀಡಿತು. ಆದಿಯ ಕೈಗಳು ತನ್ನಿಂತ್ತಾನೆ ಒಟ್ಟಾದವು. ಆತ ಅಲ್ಲಿಯೇ ಕಲ್ಲಿನ ನೆಲದ ಮೇಲೆ ಕೂತು ಓಂಕಾರವನ್ನು ಗುನುಗತೊಡಗಿದ. ಸುತ್ತಮುತ್ತಲಿನ ಹಕ್ಕಿಗಳ ಇಂಚರ ಹೆಚ್ಚಾಗತೊಡಗಿತು. ಕೆಲನಿಮಿಷಗಳ ಕಾಲ ಹೀಗೆ ಓಂಕಾರವನ್ನು ಗುನುಗಿದವನಿಗೆ ಕೂಡಲೇ ಎಚ್ಚರವಾಯಿತು.ಶಿವನ ಆ ಲಿಂಗದ ಹಿಂದೆ ಏನೋ ಅಡಗಿ ಕೂತಿರುವಂತೆ ಭಾಸವಾಯಿತು. ಹೋಗಿ ನೋಡಬೇಕೆಂಬ ಕುತೂಹಲವಾದರೂ ಏನೋ ಒಂದು ಬಗೆಯ ಭಯ. ಆದರೂ ಮನಸ್ಸು ಮಾಡಿ ಆತ ಒಳನೆಡೆದ

Continues..

Monday, October 12, 2020

ಪಯಣ - 16


ತನ್ನ ಪ್ರೆಶ್ನೆಗೆ ಉತ್ತರಿಸದನ್ನು ಕಂಡು ಕೋಪಗೊಂಡ ಶಶಿ ಅಜ್ಜಿಯ ಬೆಳಿಗೆ ಬಂದು,

'ಅಜ್ಜಿ .. ನೀವಾದ್ರೂ ಹೇಳ್ಬಾರ್ದ .. ಕಾಲೇಜಿಗೆ ಬರದೆ ಒಂದ್ ತಿಂಗ್ಳ್ ಆಯ್ತು .. ಹೀಗೆ ಇನ್ ಸ್ವಲ್ಪ ದಿನ ಹೋದ್ರೆ ಈ ವರ್ಷ ಪೂರ್ತಿ ಹಾಳಾಗುತ್ತೆ..'

'ಮಗ , ಈಗಿನ್ ಕಾಲ್ದಾಗೆ ಇಂತ ಹುಡುಗ್ರು ಕೋಟಿಗೂ ಒಬ್ರು ಸಿಗಾಕಿಲ್ಲ .. ನಿನ್ ಆ ಕಾಲೇಜು ಗೀಲೇಜು ಎಲ್ಲ ಹಸಿದವ್ನ ಹೊಟ್ಟೆ ತುಂಬಿಸಾಕಿಲ್ಲ. ಹಾಳ್ ಬಿದ್ದಿರೋ ನೆಲ್ದಲ್ಲಿ ಬಿತ್ತೋ ಇಂತ ಮಗಿಂಗೆ ಯಾವ್ ವರ್ಷನೂ ಹಾಳಾಗಾಕಿಲ್ಲ ಬುಡು..' ಎಂದು ಅಜ್ಜಿ ಹೇಳಿದಾಗ ಶಶಿಯ ಕೋಪ ಇನ್ನೂ ವಿಪರೀತವಾಯಿತು. ಆಕೆ ಅವರಿಬ್ಬರನ್ನು ಅಲ್ಲಿಯೇ ಬಿಟ್ಟು ತುಸು ದೂರದ ಗದ್ದೆಯ ಬದುವಿನ ಮೇಲೆ ಹೋಗಿ ಕೂತಳು. ಅದು ಆ ಸ್ಥಳದ ಮಹಿಮೆಯೋ ಏನೋ, ಸ್ವಲ್ಪ ಹೊತ್ತು ಶಾಂತವಾಗಿ ಕೂತ ನಂತರ ಆಕೆಯ ಮನಸ್ಸು ಹಗುರಾಯಿತು. ಬಿಸಿಲು ಅದಾಗಲೇ ನತ್ತಿಯ ಮೇಲೆ ಬಂದಿದ್ದರಿಂದ ಲೋಕೇಶ ಉಳುತ್ತಿದ್ದ ಎತ್ತುಗಳನ್ನು ಹಳ್ಳದ ಬದಿಗೆ ಕಟ್ಟಿ, ಅವುಗಳಿಗೆ ನೀರನ್ನು ಕುಡಿಯಲು ಬಿಟ್ಟು, ತನ್ನ ಕೈಕಾಲುಗಳನ್ನುತೊಳೆದುಕೊಂಡು ಶಶಿಯ ಬಳಿಗೆ ಬಂದ. ಅಜ್ಜಿ ಎತ್ತುಗಳಿಗೆ ಬೆಳಗೆಯೇ ಕೊಯ್ದಿರಿಸಿದ ಹಸಿರು ಹುಲ್ಲನ್ನು ಹಾಕತೊಡಗಿದಳು. ಹಚ್ಚ ಹಸಿರೇ ಎಲ್ಲೆಲ್ಲೂ ಪಸರಿಸಿದ್ದ ಅಲ್ಲಿ ಕಡುಬಿಸಿಲೂ ತಂಪಾಗಿಯೇ ಪಸರಿಸಿಕೊಂಡಿತ್ತು. ಶಶಿಯ ಬಳಿಗೆ ಬಂದು ಕೂತವನೇ,

'ಕೃಷಿ ಒಂತರ ಧ್ಯಾನ ಮಾಡಿದಹಾಗೆ ಶಶಿ. ಧ್ಯಾನ ಮಾಡುವಾಗ ಡಿಸ್ಟ್ರೆಬ್ ಮಾಡ್ಬಾರ್ದು ಅಂತ ಗೊತ್ತಿಲ್ವ' ಎಂದು ಆಕೆಯನ್ನು ಛೇಡಿಸಿದ.

ತನ್ನ ಮುಷ್ಟಿಗಟ್ಟಿದ ಕೈಗಳಿಂದ ಆತನ ಬೆನ್ನಿನ ಮೇಲೆ ಗುದ್ದಿದ ಆಕೆ,

'ಹೌದು ಸಾರ್ .. ನೀವು ಇಲ್ಲಿ ಕೃಷಿ ಧ್ಯಾನ ಮಾಡ್ತಾ ಇರಿ .. ನಿಮ್ ಸೆಮಿಸ್ಟರ್ ಎಕ್ಸಾಮ್ಸ್ನ ಯಾರಾದ್ರೂ ಧ್ಯಾನಗುರು ಬಂದು ಬರೀತಾರೆ'

'ನನ್ನ್ ಮುಂದೆ ಇರೋ ಒಂದೇ ಎಕ್ಸಾಮ್ ಅಂದ್ರೆ ಈ ಸರಿ ಭತ್ತ ಬೆಳೆಯೋದು ಶಶಿ .. ಕರೆಕ್ಟ್ ಟೈಮಿಗೆ ಮಳೆರಾಯ ಬಂದು ಈ ಎಕ್ಸಾಮ್ಸ್ ಅಲ್ಲಿ ಕಾಪಾಡಿದ್ರೆ ಸಾಕು'

'ಲೋಕೆಶ್ .. Are you serious ..? ಭತ್ತ ಬೆಳೆಯೋ ಆಸೆಗೆ ನಿನ್ ಮೂರ್ ವರ್ಷದ ಓದನ್ನು ಬಲಿಕೊಡೋದು ಎಷ್ಟ್ ಸರಿ? ಮೇಲಾಗಿ ಕೃಷಿ ಮಾಡೋಕ್ಕೆ 24X7 ಗದ್ದೆಲೇ ಇರ್ಬೇಕು ಅಂತ ಏನಿಲ್ಲ ಅಂತ ನೀನೆ ಹೇಳ್ತಿದ್ದೆ.. ಹೀಗೆನಾಯ್ತು..’ ಅಧಿಕಾರವಾಣಿಯಲ್ಲಿ ಆಕೆ ಕೇಳಿದಳು.

'ಶಶಿ .. ನಿಂಗೆ ಹೇಗ್ Explain ಮಾಡ್ಲಿ..? ಪ್ಲೀಸ್ ಅರ್ತ ಮಾಡ್ಕೋ. ನಂಗೆ ಸದ್ಯಕ್ಕೆ ಕೃಷಿ ಬಿಟ್ಟು ಬೇರೇನೂ ತಿಳಿತಿಲ್ಲ.. ಅದೆಷ್ಟೇ ಕೆಲ್ಸ ಮಾಡಿದ್ರೂ ಸಾಲ್ತ ಇಲ್ಲ.. ಅಟ್ ದಿಸ್ ಪಾಯಿಂಟ್ ಇಫ್ ಯು ಆಸ್ಕ್ ಮಿ , ನನಗೆ ಇಲ್ಲೇ ಇದೆ ಜಾಗದಲ್ಲಿ ಜೀವನ ಪರ್ಯಂತ ಇರ್ಬೇಕು ಅನ್ನಿಸ್ತಾ ಇದೆ. ಮನೆ, ಓದು, ಹಾಡು, ಪಾಠ, ಹಣ , ಆಸೆ ಯಾವುದೂ ಬೇಡ. ನೆಲವೊಂದು ಸಾಕು. ನೆಲದ ಮಣ್ಣಿದ್ದರೆ ಸಾಕು. ಅಲ್ಲಿ ಒಂದಿಷ್ಟು ಹಸಿರು ಜೀವಗಳಿಗೆ ಬದುಕನ್ನು ಕಟ್ಟಿಕೊಡಬೇಕು. ಅವುಗಳನ್ನು ಪೋಷಿಸಬೇಕು. ಸಾಕಿ ಸಲಹಬೇಕು. ಅಲ್ಲದೆ..' ಎಂದು ಏನೋ ಹೇಳಲು ಮುಂದಾಗಿ 'ಶಶಿ , ಡೋಂಟ್ ವರಿ .. ನಂಗೆ ನಿನ್ನ ಕನ್ಸರ್ನ್ ಅರ್ಥ ಆಗುತ್ತೆ ..ನೀನ್ ಅನ್ಕೋಳ್ಳೋ ಹಾಗೆ ಏನೂ ಆಗಲ್ಲ.. ಟ್ರಸ್ಟ್ ಮಿ' ಎಂದು ಆಕೆಯ ಮೃದು ಕೈಯನ್ನು ತನ್ನ ಒರಟು ಅಸ್ತಗಳಿಂದ ಅದುಮುತ್ತಾನೆ.

'ಲೋಕೇಶ್ .. ಬಿ ಲಾಜಿಕಲ್ .. ನೀನ್ ಹೇಳೋದು ಕತೆ ರೂಪದಲ್ಲಿ ಕೇಳೋಕ್ಕೆ ಚೆನ್ನಾಗಿರುತ್ತೆ.. ಪ್ಲೀಸ್ ಅಂಡರ್ಸ್ಟ್ಯಾಂಡ್ .. ಅಟ್ ಲೀಸ್ಟ್ ಸೆಮಿಸ್ಟರ್ ಎಕ್ಸಾಮ್ಸ್ಗೆ ಆದ್ರೂ ಎನ್ರೋಲ್ ಮಾಡ್ಕೋ .. ನಾನ್ ನಿಂಗೆ ಹೇಳ್ ಕೊಡ್ತೀನಿ ' ಎಂದಳು. ಲೋಕೇಶ ಅವಳ ಕಳವಳಗೊಂಡ ಮುಖವನ್ನು ನೋಡಿ ಮಂದಹಾಸವನ್ನು ಬೀರತೊಡಗಿದ. ಅಜ್ಜಿ ಅದಾಗಲೇ ಊಟವನ್ನು ಇವರು ಇರುವಲ್ಲಿಗೇ ತಂದಳು. ಬಾಳೆದೆಲೆಯ ಮೇಲೆ ಮೂಡಿದ ಹಬೆಯಾರುತ್ತಿದ್ದ ಕೆಂಪಕ್ಕಿಯ ಅನ್ನ , ಬೇಳೆ ಸಾರು , ಮಜ್ಜಿಗೆ ಹಾಗು ಉಪ್ಪಿನಕಾಯಿಯನ್ನು ಕಂಡು ಲೋಕೇಶನ ಮನಸ್ಸು ಪ್ರಸನ್ನವಾಯಿತು. ಒಂದು ಮುಡಿ ಅನ್ನದ ತುತ್ತನ್ನು ಕಟ್ಟಿ ಅಜ್ಜಿಯ ಜೊತೆಗಿರುತ್ತಿದ್ದ ನಾಯಿಗೆಂದು ತೆಗೆದಿಟ್ಟ ಹಾಗು ಮತ್ತೊಂದು ಮುಡಿ ಅನ್ನವನ್ನು ಪಕ್ಕದಲ್ಲಿ ಚಿಲಿಪಿಲಿಗುಡುತ್ತಿದ್ದ ಹಕ್ಕಿಗಳೆಡೆಗೆ ಎಸೆದ. ಕೂಡಲೇ ಹಕ್ಕಿಗಳು ಪುರ್ರನೆ ಅಲ್ಲಿಂದ ಹಾರಿದರೂ ಕೆಲನಿಮಿಷದ ನಂತರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಾಪಸ್ಸು ಹಾರಿಬಂದವು. ಲೋಕೇಶ ಒಂದೊಂದೇ ಮುಡಿಯಷ್ಟು ಅನ್ನವನ್ನು ಅವುಗಳಿಗೆ ಎಸೆಯುತ್ತಿದ್ದರೆ ಅವುಗಳು ಧೈರ್ಯ ಮಾಡಿ ಒಂದೊಂದೇ ಹೆಜ್ಜೆಯನ್ನು ಮುಂದಿಡತೊಡಗಿದವು. ಯಾವಾಗ ಲೋಕೇಶ ಅವುಗಳಿಗೆ ಅಪಾಯಕಾರಿಯಂತೆ ಕಾಣಲಿಲ್ಲವೋ ಕೂಡಲೇ ಅಷ್ಟೂ ಹಕ್ಕಿಗಳು ಆತನ ಊಟ ಮಾಡುತ್ತಿದ್ದ ಎಡೆಗೇ ಮುತ್ತಿಗೆಯನ್ನು ಹಾಕಿದವು. ಮೊದಲ ಬಾರಿ ಎಂಬಂತೆ ಅವುಗಳನ್ನು ನೋಡುತ್ತಾ ಲೋಕೇಶ ಗಳಗಳನೆ ಅಳತೊಡಗಿದ.

****

ಅದೇನೋ ಒಂದು ಬೆಳಕು ನನನ್ನು ಹತ್ತಿರಕ್ಕೆ ಎಳೆಯುತ್ತಿದೆ. ಅದರಲ್ಲಿ ವಿಪರೀತವಾದೊಂದು ಸಂತೋಷವಿದೆ. ಸತ್ಯವಿದೆ. ಶಾಂತಿಯಿದೆ. ಇತ್ತೀಚೆಗೆ ಗುರುತು ಮಾಡಿಕೊಂಡು ನಾನು ದೇವಾಲಯಗಳಿಗೆ ಹೋಗುತ್ತಿಲ್ಲ. ಒಂದೆಡೆ ಹೋಗಿ ಅಲ್ಲಿಯೇ ಜನರು ಮಾತಾಡುವ, ವರ್ಣಿಸುವ ದೇವಾಲಯಗಳ ಪರಿಚಯವನ್ನು ಮಾಡಿಕೊಂಡು ಮುನ್ನಡೆಯತೊಡಗಿದೆ. ಊರು ಕೇರಿಗಳು ಈಗ ಬೇಡವಾದವು. ಪ್ರತಿ ದೇವಾಲಯಗಳೂ ನನನ್ನು ಆ ಬೆಳಕಿನ ಇನ್ನೂ ಹತ್ತಿರಕ್ಕೆ ಕೊಂಡೊಯ್ಯುತ್ತಿವೆ ಎಂದೆನಿಸುತ್ತಿದೆ. ಅಲ್ಲದೆ ಈಗ ಬೆಳಗಿರಲಿ,ಸಂಜೆಯಾಗಲಿ ಅಥವಾ ಸೂರ್ಯ ನತ್ತಿಗೇರಿರುವ ಸಮಯವಾದರೂ ಸರಿಯೇ ದೇವಾಲಯವನ್ನು ಪ್ರವೇಶಿಸುತ್ತಿದ್ದೆ. ಜನರ ಆ ಚೀರಾಟಗಳ ಸಂತೆಯ ನಡುವೆಯೂ ಮನಸ್ಸು ಧ್ಯಾನ ಮಾಡುವುದನ್ನು ಕಲಿಯಿತು. ಅದು ಯಾವ ಊರು ಎನ್ನುವುದಕ್ಕಿಂತ ಹೆಚ್ಚಾಗಿ ಅದು ಯಾವ ದೇವಾಲಯವೆಂದೆಷ್ಟೇ ಮನದಲ್ಲಿ ಉಳಿಯತೊಡಗಿತು.

ಮನೆಯಿಂದ ಈಗ ಹೆಚ್ಚುಕಡಿಮೆ ಸಾವಿರ ಕಿಲೋಮೀಟರ್ ದೂರ ಪ್ರಯಾಣಿಸಿರಬಹುದು. ಇಂದು ಬೆಳಗಿನ ಸೂರ್ಯನ ಕಿರಣಗಳು ದೇವಾಲಯದ ತುತ್ತತುದಿಯನ್ನು ತಲುಪುವ ಮೊದಲೇ ಅಲ್ಲಿಗೆ ಹೋದ ನಾನು ಕುತೂಹಲಕಾರಿ ಆ ಕೆತ್ತನೆಗಳನ್ನು ಘಂಟೆಗಳ ತನಕ ನೋಡುತ್ತಾ ನಿಂತೆ. ತಮ್ಮ ಎಲ್ಲವನ್ನೂ ಬದಿಗಿಟ್ಟು ಅವನಲ್ಲಿ ಒಂದಾಗಲು ಬರುವ ಅದು ಜಗತ್ ಪ್ರಸಿದ್ಧ ದೇವಾಲಯ. ಅಂತೆಯೇ ವಿಶ್ವದ ಮೂಲೆ ಮೂಲೆಗಳಿಂದ ಜನರನ್ನು ಆಕರ್ಷಿಸುವ ಆ ದೇವಾಲಯದ ಸುತ್ತ ಮೂಡಿರುವ ಕೆತ್ತನೆಗಳು ನೋಡುಗನ ಮನದೊಳಗೆ ಹಲವಾರು ಪ್ರೆಶ್ನೆಗಳನ್ನು ಹುಟ್ಟುಹಾಕುವುದಂತೂ ಸುಳ್ಳಲ್ಲ. ನೋಡಿದವನ ಕಣ್ಣು ಕೊರೆಯುವಂತಹ ಕಾಮೋತ್ತೇಜಕ ಕೆತ್ತನೆಗಳು ಅವು. ಎಲ್ಲಿಯೂ ಕಂಡರಿಯದ ಬಗೆಯ ಈ ಕೆತ್ತನೆಗಳನ್ನು ಅರ್ಥಯಿಸಿಕೊಳ್ಳಬೇಕೇ ಎಂದು ಮೊದಲಿಗೆ ಅನಿಸಿದರೂ ಒಳಗಿರುವ ಅವನಿಗೂ ಇಲ್ಲಿರುವ ಇವುಗಳಿಗೂ ಏನೋ ಒಂದು ಎಳೆ ಮಾರ್ಪಟ್ಟಂತಿದೆ ಎನಿಸಿತು.

ದೇವರ ಆಸ್ಥಾನ ಹಾಗು ಸಂಭೋಗದ ರಚನೆ? ಇದು ಹೇಗೆ ಸಾಧ್ಯ? ದೇಶದ ಬಹುತೇಕ ದೇವಾಲಯಗಳಲ್ಲೂ ಈ ಬಗೆಯ ಕೆತ್ತನೆಗಳಿವೆ. ಚಿತ್ತದ ಎಲ್ಲವನ್ನೂ ಬದಿಗಿಟ್ಟು ಒಳಗಿರುವ ಅವನಲ್ಲಿ ಒಂದಾಗಲು ಬರುವ ಜನರಿಗೆ ಈ ರೀತಿಯ ಕೆತ್ತನೆಗಳು ಅವರ ಚಿತ್ತಗಳನ್ನು ಕಲಕದೆಯೇ ಇರುತ್ತದೆಯೇ? ಚಿತ್ರ ವಿಚಿತ್ರ ಬಗೆಯ ಈ ಭಂಗಿಗಳನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ಮೇಲಾಗಿ ಪ್ರಾಣಿಗಳು?! ಪ್ರಾಣಿಗಳೊಟ್ಟಿಗಿನ ಸಂಭೋಗ? ಆಧುನಿಕ ಜಗತ್ತಿನ ಕೋರ್ಟು ಕಚೇರಿಗಳು ಇಂತಹ ಕ್ರಿಯೆಗಳನ್ನು ದಂಡನಾರ್ಹ ತಪ್ಪುಗಳೆಂದು ಘೋಷಿಸಿವೆ. ಇಲ್ಲ ಇದು ನೋಡಿದಷ್ಟು ಸುಲಭವಲ್ಲ. ಬಹುಷಃ ನಮ್ಮಂತಹ ಅಲ್ಪಮತಿಗಳಾದವರಿಗೆ ಇದು ಅರಿಯದ ವಿಷಯವಿರಬಹುದು. ಮೊದಲನೆಯದಾಗಿ ಎಂತವರ ಮನದಲ್ಲೂ ಕಾಮಭಾವನೆಗಳನ್ನು ಕೆರಳಿಸುವ ಈ ಅಮೋಘ ಕೆತ್ತನೆಯ ಕುಶಲತೆಗೆ ತಲೆದೂಗಲೇಬೇಕು. ಮಾನವನ ದೇಹದ ಅಂಗಾಗಗಳಿಗೆ ಎಲ್ಲಿಲ್ಲದ ಜೀವತುಂಬಿ ಕೆತ್ತಿರುವ ಆ ಮಹಾನ್ ಶಿಲ್ಪಿಗಳು ಅಸಾಮಾನ್ಯದವರೆಂದರೆ ಸುಳ್ಳಲ್ಲ. ಎರಡನೆಯದಾಗಿ ಇಲ್ಲಿ ಹೆಣ್ಣೇ ಎಲ್ಲ ಕೆತ್ತನೆಗಳ ಕೇಂದ್ರಬಿಂದು.

ತನ್ನ ವಿವಿಧ ಭಂಗಿಗಳಿಂದ ಪುರುಷನನ್ನು ಸೆಳೆಯುವ ಆಕೆಯನ್ನು ಈ ಒಂದು ಕೆತ್ತನೆ ಅದೆಷ್ಟು ಅರ್ಥಪೂರ್ಣವಾಗಿ ಹೇಳುತ್ತಿದೆ. ಇಲ್ಲಿ ಅರೆನಗ್ನಳಾಗಿರುವ ಹೆಣ್ಣೊಬ್ಬಳು ಭೀಮಗಾತ್ರದ ಹುಲಿಯಂತಹ ಪ್ರಾಣಿಯೊಟ್ಟಿಗೆ ಸೆಣೆಸುತ್ತಿದ್ದಾಳೆ. ವ್ಯಾಘ್ರವಾಗಿರುವ ಆ ಪ್ರಾಣಿ ಅವಳ ಮೇಲೆ ಧಾಳಿ ನೆಡೆಸುತ್ತಿದ್ದರೆ ಆಕೆ ಅದನ್ನು ತನ್ನ ಕೈಗಳಿಂದಲೇ ತಡೆದು ನಿಲಿಸಿದ್ದಾಳೆ. ಕಾಮವೆಂಬ ವ್ಯಾಘ್ರತೆಗೆ ಬಲಿಯಾಗಿ ಮದವೇರಿದ ಗಜದಂತಾಗುವ ಚಿತ್ತದ ಸ್ಥಾನದಲ್ಲಿ ಆ ಪ್ರಾಣಿ ನಿಂತಿರಬಹುದೇ? ಪ್ರತಿಬಾರಿ ಹೀಗೆ ಅನಿಸಿದಾಗಲೆಲ್ಲ ದೇಹವನ್ನು ನಿಯಂತ್ರಿಸಲು ಪ್ರಯತ್ನಿಸುವ ಮನಸ್ಸೇ ಆ ಹೆಣ್ಣಿನ ಪ್ರತಿರೋಪವಾಗಿರಬಹುದೇ? ಹಾಗಾದರೆ ಇಂತಹ ಕೆತ್ತನೆಗಳ ಅರ್ಥವೇನು? ಮನಸ್ಸನು ನಿಗ್ರಹಿಸಿ ದೇವಾಲಯದೊಳಗೆ ಪ್ರವೇಶಿಸು ಎಂದೇ?

ಹಾಗಾದರೆ ಜೀವನದಲ್ಲಿ ಕಾಮದ ನಿಜವಾದ ಪಾತ್ರವೇನು? ಜೀವನದ ಅರ್ಥ ಅಥವಾ ಗುರಿ ಈ ಕಾಮವೆಂಬ ಆಸೆಯೊಳಗೆ ಅದೆಷ್ಟರ ಮಟ್ಟಿಗೆ ಹುದುಗಿದೆ? ಅದು ತಪ್ಪೇ? ತಪ್ಪಾದರೆ ಅದು ನಮ್ಮೊಳಗೇ ಇರುವುದಾದರೂ ಏತಕ್ಕೆ? ಮನಸ್ಸಿಗೆ ಸಿಗುವ ಆ ಮಹಾಸುಖ ಧ್ಯಾನದಲ್ಲಿ ಅಡಗಿರುವಂತೆ ದೇಹಕ್ಕೆ ಬೇಕಾಗಿರುವ ಸುಖದ ಹಾದಿಯೇ ಇದು? ಹಾಗಾದರೆ ಮನಸ್ಸಿಗೆ ಖುಷಿಯನ್ನು ನೀಡುವುದರಲ್ಲಿ ತಪ್ಪಿಲ್ಲದಿದ್ದರೆ ದೇಹಕ್ಕೆ ಖುಷಿಯನ್ನು ಎರೆಯುವುದರಲ್ಲಿ ತಪ್ಪೇನಿದೆ?

ಎಲ್ಲವನ್ನು ಮರೆತು ಧ್ಯಾನದಲ್ಲಿ ಮಗ್ನನಾಗಿ ಶಾಂತಿಯನ್ನು ಅರಸುವ ಆಸೆಯೂ ಒಂದು ಕಾಮನೆಯಲ್ಲವೇ?

ಏನೋ ಹೊಸತು ಹೊಳೆದಂತಾಗಿ ನಾನು ದೇವಾಲಯದ ಒಳಗೆ ಪ್ರವೇಶಿಸಿದೆ. ಯಾರೋ ನನ್ನನ್ನು ಹತ್ತಿರಕ್ಕೆ ಸೆಳೆದಂತಾಯಿತು. ಮುಂದೇನಾಯಿತು ಎಂದು ಅರಿಯುವುವಷ್ಟರಲ್ಲಿ ನಾನು ಅಲ್ಲಿರುವ ದೇವರ ಗರ್ಭಗುಡಿಯ ಮುಂದೆ ಓಂಕಾರವನ್ನು ಗುನುಗುತ್ತಿದ್ದೇನೆ. ಸಂಜೆಯ ಕೊನೆಯ ಆರತಿ ದೇವರಿಗೆ ಅರ್ಪಿಸಲ್ಪಡುತ್ತಿತ್ತು.

**

'ಅಬ್ಬಾ .. ಅಬ್ಬಾ .. ಆಂಕ್ ಖುಲ್ ಗಯಾ..' ನನ್ನ ಪಕ್ಕದಲ್ಲಿಯೇ ಕೂತಿದ್ದ ಐದಾರು ವರ್ಷದ ಬಾಲಕನೊಬ್ಬ ನಾನು ಕಣ್ಣು ತೆರೆಯುವುದನ್ನು ನೋಡಿದೊಡನೆಯೇ ತನ್ನ ಅಪ್ಪನನ್ನು ಕರೆಯುವಂತೆ ಮನೆಯ ಒಳಗೆ ಓಡಿದ. ಹಣೆಯ ಮೇಲೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ನಾನು ಯಾರದೋ ಮನೆಯ ಕೊಣೆಯಲ್ಲಿ ಮಲಗಿದ್ದೆ. ಹಂಚಿನ ಮನೆಯ ಆ ಕೋಣೆಯ ತುಂಬಾ ಸಾಂಬ್ರಾಣಿ ಹೊಗೆಯ ಘಮ. ಏನಾಗಿದೆ ಎಂದು ತಿಳಿದುಕೊಳ್ಳಲು ನಿಧಾನವಾಗಿ ಮೇಲೇಳತೊಡಗಿದರೆ ನಿತ್ರಾಣದಿಂದ ಎಂಬಂತೆ ಪುನ್ಹ ಮಂಚದ ಮೇಲೆಯೇ ಕುಸಿದು ಬಿದ್ದೆ. ಕೂಡಲೇ ಒಳಗಿನಿಂದ ಓಡಿಬಂದ ವ್ಯಕ್ತಿಯೊಬ್ಬರು ತಮ್ಮ ಅಗಲವಾದ ಕೈಗಳಿಂದ ನನ್ನ ಬೆನ್ನಿಗೆ ಆಧಾರವಾಗಿ 'ಸಂಬಾಲ್ಕೆ ಬಾಯಿಜಾನ್ ..' ಎಂದು ಒಂದು ದಿಂಬುವನ್ನು ಅಡ್ಡಲಾಗಿಸಿ ನನನ್ನು ಅದಕ್ಕೆ ಒರಗಿಸಿದರು. ಬಿಳಿಯಾದ ಜುಬ್ಬಾ ಹಾಗು ತಲೆಯ ಮೇಲೊಂದು ಬಿಳಿಯ ಟೋಪಿಯನ್ನು ಧರಿಸಿದ್ದ ಅವರನ್ನು ಕಂಡೊಡನೆಯೇ ಅದು ಮುಸ್ಲಿಂ ಕುಟುಂಬವೊಂದರ ಮನೆಯೆಂದು ತಿಳಿಯಿತು. ನಾನು ಮಾತು ಪ್ರಾರಂಬಿಸುವ ಮೊದಲೇ ಅವರು,

'ಹೆದರಬೇಡಿ ಬಾಯಿ .. ನಿಮ್ಗೆ ಏನೂ ಆಗಿಲ್ಲ. ನಿಮ್ ಊರು ಯಾವುದು ಅಂತ ಗೊತ್ತಿಲ್ಲ .. ಆದ್ರೆ ನೆನ್ನೆ ನಮ್ಮೊರಿನ ದೇವಸ್ಥಾನದಲ್ಲಿ ನೀವು ಧ್ಯಾನ ಮಾಡ್ತಾ ಕೂತಿದ್ರಿ..ಸಂಜೆಯವರೆಗೂ ಹಾಗೆಯೇ ಇದ್ರಿ ಅನ್ಸುತ್ತೆ. ನಾನು ಆ ದಾರೀಲಿ ಬರೋ ಅಷ್ಟ್ರಲ್ಲಿ ನೀವು ನೆಲದ ಮೇಲೆ ಬಿದ್ದಿದ್ರಿ. ನಾನು ಬಂದು ನೋಡಿದ್ರೆ ನಿಮ್ಮ ಮೈ ಬಿಸಿಯಾಗಿತ್ತು. ಅಕ್ಕ ಪಕ್ಕ ಯಾರು ಇರ್ಲಿಲ್ಲ. ಹಾಗಾಗಿ ನಮ್ಮನೆಗೆ ಕರ್ಕೊಂಡು ಬಂದೆ. ಈಗ ಹೇಗಿದ್ದೀರ' ಎಂದ ಅವರು ನನ್ನ ಹಣೆಯನ್ನು ಮುಟ್ಟಿ ಪರೀಕ್ಷಿಸಿದರು.

'ಒಹ್ .. sorry .. ನಿಮ್ಗೆ ದೊಡ್ಡ ತೊಂದ್ರೆ ಆಯಿತು ಅನ್ಸುತ್ತೆ..'

'ಅರ್ರೆ ಬಾಯಿಜಾನ್.. ಹಾಗೇನಿಲ್ಲ..ನಿಮ್ಮಂತ ಧ್ಯಾನಿಗಳಿಗೆ ಸತ್ಕಾರ ಮಾಡೋದೂ ಒಂದ್ ಪುಣ್ಯನೇ ಬಿಡಿ'

'ಇಲ್ಲ ಸಾರ್ ...’ ಎಂದು ಮುಗುಳ್ ನಕ್ಕ ನಾನು ‘ನಾನ್ ಧ್ಯಾನಿ ಏನ್ ಅಲ್ಲ ..ದೇವಸ್ಥಾನಗಳಲ್ಲಿ ಓಂಕಾರ ಗುನುಗುತ್ತಾ ಇತ್ತೇಚೆಗೆ ಅದೇನ್ ಆಗುತ್ತೋ ಗೊತ್ತಿಲ್ಲ..ಒಮ್ಮೆ ಕಣ್ಣ್ ಮುಚ್ಚಿದ್ರೆ ಘಂಟೆಗಳ ತನಕ ತೆರೆಯೋದೆ ಇಲ್ಲ' ಎಂದೆ.

'ಬಹುತ್ ಅಚ್ಚ .. ದೇವರ ಅನುಗ್ರಹ ನಿಮ್ಮೆಲೆ ಹೀಗೆ ಯಾವಾಗಲು ಇರತ್ತೆ ಬಿಡಿ.. ಈಗ ತುಂಬಾನೇ ದಣಿದಿದ್ದಿರ .. ನಿಧಾನವಾಗಿ ಎದ್ದೇಳಿ ಊಟ ಮಾಡುವಿರಂತೆ' ಎಂದು ನನ್ನ ಕೈಗಳನ್ನು ಅವರ ಭುಜದ ಮೇಲೆ ಹಾಕಿಕೊಂಡು ನೆಡೆಯ ತೊಡಗಿದರು. ಅವರ ಆರು ವರ್ಷದ ಆ ಪುಟಾಣಿ ಹುಡುಗನೂ ಸಹಾಯ ಮಾಡುವಂತೆ ನನ್ನ ಕಾಲನ್ನು ತಬ್ಬಿಕೊಂಡು ಸೆಣೆಸತೊಡಗಿದನು. ನಗುತ್ತ ನಾನು ಆತನ ತಲೆಯನ್ನು ಸವರಿದೆ.

'ನಿಮ್ಮ ಮಗನೆ ? ಹೆಸರು..?' ಎಂದು ಕೇಳಿದೆ.

'ಮೊಹಮ್ಮದ್ ಅಲಿ..' ಎಂದು ಅವರು ಹೇಳುವ ಮೊದಲೇ ಆತ ಉತ್ತರಿಸಿದ...

Continues

Sunday, August 9, 2020

ಪಯಣ - 15

What the f*** ...!!' ಮೊಬೈಲಿನಲ್ಲಿ ಬ್ರೇಕಿಂಗ್ ನ್ಯೂಸ್ ಒಂದನ್ನು ನೋಡಿದ ಲೋಕೇಶ ಕೂಡಲೇ ರೂಮಿನಿಂದ ಹೊರಬಂದು ಸಿಟಿಯ ಹೊರಗಿದ್ದ ಸಣ್ಣ ನದಿಯ ಬಳಿಗೆ ಓಡಹತ್ತಿದ. ಕಾಲಿಗೆ ಚಪ್ಪಲಿಯನ್ನೂ ಧರಿಸದ ಆತ ಮುಖ್ಯರಸ್ತೆಯನ್ನು ಬಿಟ್ಟು ಪಾಳುಬಿದ್ದ ಜಾಗದಲ್ಲಿ ಮೂಡಿದ್ದ ಕಾಲುದಾರಿಯನ್ನೇ ಅನುಸರಿಸಿದ. ಬೆಳ್ಳಂಬೆಳಗ್ಗೆ ವಾಕಿಂಗೆಂದು ಬಂದವರು ಈತನ ಓಟವನ್ನು ಕಂಡು ದಂಗಾಗಿ ನಿಂತರು.

ಕಲ್ಲು, ಮುಳ್ಳು, ಮೋರಿ, ಕೇರಿಗಳನ್ನೂ ಲೆಕ್ಕಿಸದೆ ಓಡುತ್ತಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯ ಬಳಿಗೆ ಬರುವಷ್ಟರಲ್ಲೇ ನೂರಾರು ಜನರ ಗುಂಪು ಅಲ್ಲಿ ಮುತ್ತಿಕೊಂಡಿತ್ತು. ಲೈವ್ ಕಾರ್ಯಕ್ರಮವನ್ನು ಬಿತ್ತರಿಸುತ್ತಿದ ಟಿವಿ ಚಾನೆಲ್ನವರೂ ಅಲ್ಲಿಯೇ ಇದ್ದರು. ಎಲ್ಲರು ಸೇತುವೆಯ ಒಂದು ಬದಿಗೆ ಅಡ್ಡಲಾಗಿ ನಿರ್ಮಿಸಿದ್ದ ಕಿರುಗೋಡೆಯ ಸಹಾಯದಿಂದ ತಮ್ಮ ಕತ್ತನ್ನು ಹೊರಹಾಕಿ ನದಿಯನ್ನು ಧಿಟ್ಟಿಸುತ್ತಿದ್ದರು. ಕೂಡಲೇ ಪೊಲೀಸರು ಬಂದು ಗುಂಪನ್ನು ಚದುರಿಸಿ ಜಾಗವನ್ನು ಕೆಂಪು ಬ್ಯಾರಿಕೆಡ್ಗಳನಿಟ್ಟು ತಡೆದರು.

ನೊಂದ ಜೀವವೊಂದು ಅಲ್ಲಿ ಕಡೆಯ ಬಾರಿ ನಿಂತಿತ್ತು. ಹರಿಯುವ ರಭಸದ ನೀರ ಧಾರೆಗೆ ಅದು ನೆನ್ನೆಯೇ ನೆಗೆದು ತನ್ನ ಆತ್ಮಾರ್ಪಣೆಯನ್ನು ಮಾಡಿಕೊಂಡಿರುವುದೆಂದು ಹೇಳಲಾಗುತ್ತಿತ್ತು. ಲೋಕೇಶ ಆದಿಗೆ ಫೋನಾಯಿಸುವ ಮನಸ್ಸಾದರೂ ಸುಮ್ಮನಾದ. ಮೋಡಗಟ್ಟಿದ್ದ ಆ ಮುಂಜಾವು ಲೊಕೇಶನ ಜೀವನದ ಆಶಾಕಿರಣಗಳನ್ನೆಲ್ಲ ಮುಚ್ಚಿಹಾಕಿತು. ಕಲ್ಲು ಮುಳ್ಳು ಜಿಗ್ಗುಗಳಿಗೆ ಬಡಿದು ತೆರಚಿ ರಕ್ತಗತವಾಗಿದ್ದ ಕಾಲುಗಳಲ್ಲೇ ಆತ ನಿಧಾನವಾಗಿ ಮುಂದುವರೆದ.

ಜೋತು ಬಿದ್ದ ಎಲ್ಲರ ಮುಖದಲ್ಲಿಯೂ ಅದೇನೋ ಒಂದು ಅಮೂಲ್ಯವಾದ ವಸ್ತುವನ್ನು ಕಳೆದುಕೊಂಡ ಭಾವ. ಕೆಲವರು ಅದಾಗಲೇ ಕಣ್ಣೀರಿನ ಧಾರೆಯನ್ನೇ ಹರಿಸುತ್ತ ತಲೆಯನ್ನು ಚಚ್ಚಿಕೊಳ್ಳುತ್ತಿದ್ದರು. 'ಬುದ್ದಿ..' ಎನುತ ಕೂಲಿಕಾರ್ಮಿಕನೊಬ್ಬ ಅಕ್ಷರಸಹ ಮಕ್ಕಳಂತೆ ತನ್ನ ವಸ್ತ್ರವೆಲ್ಲವೂ ಮಣ್ಣಾಗುವಂತೆ ನೆಲದ ಮೇಲೆ ಬಿದ್ದು ಒರಳಾಡತೊಡಗಿದ್ದ.

'ನಮಸ್ತೆ ಸರ್. ಸಾಲ್ದಾನ ಜೋಸೆಫ್ ಅವರ ಈ ಅಚಾನಕ್ ಸಾವಿಗೆ ಕಾರಣವೇನಿರಬಹುದು ಹೇಳ್ತೀರಾ?!!' ಎಂದು ಅಲ್ಲಿ ನೆರೆದಿದ್ದ ವ್ಯಕ್ತಿಯೊಬ್ಬರಿಗೆ ಆಂಕರ್ ಒಬ್ಬಳು ಕೇಳಿದ ಪ್ರೆಶ್ನಗೆ ಕೆಂಡಾಮಂಡಲವಾದ ಲೋಕೇಶ ಕೂಡಲೇ ಅವರಲ್ಲಿಗೆ ಧಾವಿಸಿ,

'ರೀ .. ಬಂದ್ ಮಾಡ್ರಿ ಸಾಕು .. ಯಾರಿ ಹೇಳಿದ್ದು ನಿಮ್ಗೆ ಇದು ಸಾವು ಅಂತ? ಏನ್ರಿ ಪ್ರೂಫ್ ಇದೆ ? ಎಲ್ರಿ ಬಾಡಿ?' ಎಂದು ಅರಚಿದ.

ಏರು ಧ್ವನಿಯಲ್ಲಿ ಆಕೆ ಏನೋ ಹೇಳುತ್ತಿರುವಾಗಲೇ ಇನ್ನಷ್ಟು ಜನ ಅಲ್ಲಿ ನೆರೆದು ಲೊಕೇಶನ ಮಾತಿಗೆ ಜೊತೆಯಾಗಿ ಕ್ಯಾಮರಾಮ್ಯಾನ್ ಹಾಗು ಆ ಆಂಕರಿಬ್ಬರನ್ನೂ ಗದರಿಸಿದರು. ರಾಜ್ಯದ ಅಷ್ಟೂ ಟಿವಿ ಚಾನೆಲ್ಗಳು ಒಂದೇ ವಿಷಯವನ್ನು ಕಬ್ಬಿನ ಜಲ್ಲೆಯಂತೆ ಅರೆಯಹತ್ತಿದರೆ ಆ ವಿಷಯ ಸುಳ್ಳಾಗಿರಲು ಸಾಧ್ಯವಿಲ್ಲವೆಂದು ತಿಳಿದಿದ್ದರೂ ಲೋಕೇಶನಿಗೆ ಪ್ರಸ್ತುತ ನೆಡೆಯುತ್ತಿರುವ ಸನ್ನಿವೇಶಗಳೆಲ್ಲವೂ ಕನಸ್ಸೆಂದೆ ಭ್ರಮೆ. ನಿಜಜೀವನದ ಒಬ್ಬ ನೈಜ ನಾಯಕನನ್ನು ಕಳೆದುಕೊಳ್ಳುವುದು ಲೋಕೇಶನಿಗೆ ಸಾಧ್ಯವಾಗುವುದಿಲ್ಲ. ತಾನು ಅಷ್ಟು ಇಷ್ಟಪಟ್ಟು ಅನುಕರಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹೇಡಿಯಂತೆ ಹೀಗೆ ನೀರಿಗೆ ಹಾರಿದನೆಂದರೆ ಅದು ಸಹಿಸಲಾರದ ಅವಮಾನ ಎಂದು ಪಕ್ಕದಲ್ಲಿದ್ದ ಲೈಟುಕಂಬಕ್ಕೆ ಜೋರಾಗಿ ತನ್ನ ಕಾಲಿನಿಂದ ಒದೆದ. ಆತನ ಕೋಪ ಶಾಂತವಾಗಲಿಲ್ಲ.

ತುಂಬಿಹರಿಯುತ್ತಿದ್ದ ನೀರಿನ ರಭಸವನ್ನೇ ಧಿಟ್ಟಿಸಿನೋಡತೊಡಗಿದ ಆತನಿಗೆ ಇದು ಆತ್ಮಹತ್ಯೆಯೋ, ಕೊಲೆಯೋ ಅಥವಾ ಮಾದ್ಯಮಗಳು ಸೃಷ್ಟಿಸಿದ ಭ್ರಮೆಯೋ ಎಂಬ ಸಂಶಯ ಮೂಡತೊಡದಿತು. ಜೊತೆಗೆ ಈ ಕೆಲತಿಂಗಳುಗಳಲ್ಲಿ ತಾನು ಅವರೊಟ್ಟಿಗೆ ಕಳೆದ ಚೆಂದದ ದಿನಗಳು ನೆನಪಾಗಿ ಮರುಗತೊಡಗಿದ. ಇಂತಹ ದೂರದೃಷ್ಟಿಯುಳ್ಳ, ಶಾಂತ ಸ್ವಭಾವದ ಆಶಾವಾದಿ ನಾಯಕನೊಬ್ಬ ಮರೆಯಾಗಲು ಹೇಗೆ ಸಾಧ್ಯ? ಸಾವಯವ ಕೃಷಿಯ ಕರ್ತೃ ಇಂದು ತಾನು ಬೆಳೆಸಿದ ಅಷ್ಟೂ ಸಸ್ಯಸಂಕುಲಗಳನ್ನು ಅನಾಥರನ್ನಾಗಿಸಿ ಇಹಲೋಕದ ಪಯಣವನ್ನು ಕೊನೆಗೊಳಿಸಿದ್ದಾನೆ. ಇಲ್ಲಿಯ ಕಾಫಿಯ ಘಮವನ್ನು ದೇಶವಿದೇಶಗಳಿಗೆ ಪಸರಿಸಿ ಈ ಪುಟ್ಟ ಊರಿನ ಹೆಸರನ್ನು ಅಜರಾಮರನನನ್ನಾಗಿಸಿದ ವ್ಯಕ್ತಿ ಇಲ್ಲವೆಂಬ ಸುದ್ದಿ ಶುದ್ಧ ಸುಳ್ಳೆಂದು ಆತನಿಗೆ ಅನಿಸತೊಡಗಿತು. ಇನ್ನು ಲೋಕೇಶನಿಗೆ ಅಲ್ಲಿ ನಿಲ್ಲಲು ಆಗಲಿಲ್ಲ. ದೇವರೆಂಬ ಶಕ್ತಿಯೊಂದಿದ್ದರೆ ಈಗ ಜರುಗುತ್ತಿರುವ ಘಟನೆಗಳೆಲ್ಲ ಕನಸ್ಸಾಗಲಿ ಅಥವಾ ಪವಾಡಸದೃಶ್ಯ ರೀತಿಯಲ್ಲಿ ಅವರು ಬದುಕಿಬರಲಿ ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಾ ಬರಿಗಾಲಿನಲ್ಲೇ ತನ್ನ ಗದ್ದೆಯೆಡೆಗೆ ನೆಡೆದ. 

ಅದೆಷ್ಟೋ ಹೊತ್ತಿನವರೆಗೂ ಹಳದಿ ಮಿಶ್ರಿತ ಹಸಿರಾಗಿ ಮುದಿಗೊಂಡಿದ್ದ ಶುಂಠಿ ಸಸಿಗಳನ್ನೇ ಧಿಟ್ಟಿಸುತ್ತಾ ಕಲ್ಲುಬಂಡೆಯಂತೆ ಕೂತ. ಆತನ ಕಣ್ಣೀರನ್ನು ಮರೆಮಾಚಲೇನೋ ಎಂಬಂತೆ ಮಳೆಯ ಹನಿಗಳು ಆತನ ಕಪೋಲವನ್ನು ನೆನೆಸತೊಡಗಿದವು.

ಆತ ಯೋಚಿಸತೊಡಗಿದ. ಕೈಯಲ್ಲಿ ನಯಾಪೈಸೆ ಇಲ್ಲದ ಈ ಪ್ರದೇಶದ ವ್ಯಕ್ತಿಯೊಬ್ಬ ಇಂದು ವಿಶ್ವಮಟ್ಟಕ್ಕೆ ಬೆಳೆದು ಬ್ರಾಂಡ್ ಒಂದನ್ನು ಸೃಷ್ಟಿಸಿ ಹೆಸರು ಮಾಡಿರುವುದನ್ನು ಮಾತನಾಡುವುದೇ ಇಲ್ಲಿನ ಜನರಿಗೆ ಒಂದು ಹೆಮ್ಮೆಯ ವಿಚಾರ. ಶೋಕಿ ಎಂದರೂ ತಪ್ಪಾಗಲಾರದು. ಅವ ನಮ್ಮವ , ನಮ್ಮ ಊರಿನವ ಎಂದು ಎದೆಯುಬ್ಬಿಸಿಕೊಂಡು ಹೇಳುವ ವ್ಯಕ್ತಿಗಳನ್ನು ಕಂಡು ತಾನೂ ಕೂಡ ಸಾಲ್ದಾನ ಜೋಸೆಫ್ರಂತೆ ಆಗಬೇಕು. ನನ್ನನ್ನು ಕುರಿತೂ ಜನರು ಹೀಗೆಯೇ ಮಾತನಾಡಿಕೊಳ್ಳಬೇಕು, ಹಣ ಸಂಪಾದನೆಯೊಟ್ಟಿಗೆ ಇದೆ ಮಣ್ಣಲ್ಲಿ ಹುಟ್ಟಿ ಬೆಳೆದ ಇತರರಿಗೂ ಕೈಲಾದ ಸಹಾಯವನ್ನು ಮಾಡುತ್ತಾ ಅರ್ಥಪೂರ್ಣ ಜೀವನವನ್ನು ನೆಡೆಸಬೇಕೆಂಬ ಹಂಬಲ ಅವರನ್ನು ಭೇಟಿಯಾಗುವ ಮೊದಲು ಅವರ ಬಗ್ಗೆ ಇಂಟರ್ನೆಟ್ಟಿನಲ್ಲಿ ಹುಡುಕಾಡಿದ ದಿನದಿಂದಲೂ ಈತನಲ್ಲಿ ಮನೆಮಾಡಿತ್ತು. ಅಂತೆಯೇ ಅವರ ಸ್ಫೂರ್ತಿದಾಯಕ ಮಾತುಗಳು. ಇಷ್ಟೆಲ್ಲ ಖರ್ಚು ಮಾಡಿ ಬೆಳೆಸಿದ ಪೈರನ್ನು ಕಟಾವು ಮಾಡದೆ ಬಿಟ್ಟಿದ್ದನ್ನು ಬೇರೆಯವರಾದರೆ ಉಗಿದು ಬೈಯುತ್ತಿದ್ದರು. ಆದರೆ ಸಾಲ್ದಾನ ಜೋಸೆಫ್ ತನ್ನ ಭಾವನೆಗಳನ್ನು ಅರಿತುಕೊಂಡಿದ್ದರು. ನೀನೊಬ್ಬ ಪರಿಪೂರ್ಣ ರೈತನಾಗುತ್ತಿದ್ದಿಯ ಎಂದು ಹುರಿದುಂಬಿಸಿದ್ದರು. ನನ್ನ ಪ್ರತಿ ಹೆಜ್ಜೆಗೂ ಬೆನ್ನುತಟ್ಟುತ್ತಿದ್ದರು. 'ಇವಾಗ ತಪ್ ಮಾಡ್ದೆ ಇನ್ಯಾವಾಗ ಮಾಡ್ತೀಯೋ ಅಣ್ಣ…' ಎಂದು ಸರಳವಾಗಿ ಜೀವನಪಾಠವನ್ನು ಹೇಳುತ್ತಿದ್ದರು. ಲೋಕೇಶ ಬಹಳ ಯೋಚಿಸತೊಡಗಿದ. ಅದೆಷ್ಟೋ ಹೊತ್ತಿನ ನಂತರ ಏನೋ ಮಹತ್ತರವಾದದನ್ನು ತೀರ್ಮಾನಿಸಿದಂತೆ ಎದ್ದು ರೂಮಿನೆಡೆಗೆ ಹೆಜ್ಜೆಹಾಕತೊಡಗಿದ. ಕೂಡಲೇ ಸರ್ರನೆ ತನ್ನ ಹಿಂಬದಿಗೆ ಏನೋ ಜಾರಿದಂತೆನಿಸಿ ತಿರುಗಿ ನೋಡಿದ. ಏನೂ ಕಾಣಲಿಲ್ಲ. ತುಸು ದೂರ ಬೆಟ್ಟದ ಬುಡಕ್ಕೆ ಹೋಗಿ ನೋಡುತ್ತಾನೆ ಮಂಡಿಯೆತ್ತರಕ್ಕೆ ಗುಡ್ಡದ ಮಣ್ಣು ಕುಸಿದು ಮೈಯ ಚರ್ಮವನ್ನು ಸುಲಿದಂತೆ ಕೆಂಪಾಗಿ ಕಾಣುತ್ತಿತ್ತು. ಯಾವುದೊ ಪ್ರಾಣಿಯೊಂದು ಗುಡ್ಡದ ಮೇಲಿನಿಂದ ಜಾರಿರಬೇಕೆಂದುಕೊಂಡು ಸುಮ್ಮನಾಗಿ ಅಲ್ಲಿಂದ ನೆಡೆದ..



****

ದಾರಿಯಲ್ಲಿ ಸಿಗುತ್ತಿದ್ದ ಪ್ರತಿಯೊಂದು ದೇವಾಲಯಗಳಲ್ಲೂ ಬಸ್ಸನ್ನು ನಿಲ್ಲಿಸಿ , ಇಳಿದು , ಅಲ್ಲಿರುವ ಅರ್ಚಕರನ್ನೋ, ದೇವಾಲಯದ ಆಡಳಿತ ಮಂಡಳಿಯ ಸದಸ್ಯರನ್ನೂ ವಿಚಾರಿಸಿ ಕೊನೆಗೆ ಎಲ್ಲಿಯೂ ಅಪ್ಪ ಗೋಚರಿಸದಿದ್ದಾಗ ತಾನೇ ಆ ದೇವಾಲಯದ ಸುತ್ತ ಮುತ್ತ ಹಲವಾರು ದೂರ ನೆಡೆದು ಪಾಳುಬಿದ್ದಿರುವ ಗುಡಿಗೋಪುರಗಳನ್ನು ನೋಡುತ್ತಾ ಪುನಃ ಮತ್ತೊಂದು ಬಸ್ಸನ್ನು ಏರಿ ಮುನ್ನಡೆಯತೊಡಗಿದ ಆದಿಶೇಷ. ಅಪ್ಪ ಮನೆಗೆ ಬಾರದೆ ಅದಾಗಲೇ ತಿಂಗಳುಗಳು ಕಳೆದಿವೆ. ಮನೆ ಈಗ ಶಾಂತವಾಗಿದ್ದರೂ ಅಮ್ಮನ ಮನಸ್ಸು ಮಾತ್ರ ಘಾಸಿಗೊಂಡಿದೆ. ಪ್ರತಿದಿನ ಆಕೆಯ ಆಕ್ರಂದನವನ್ನು ತಾಳಲಾರದೆ ಕೊನೆಗೆ ಯಾರೋ ಅಪ್ಪ ಹೀಗೆ ಮರೆಯಾಗುವ ಮೊದಲು ದೂರದ ತಮಿಳುನಾಡಿನ ತಂಜಾವೂರಿನ ದೇವಾಲಯದ ಬಗ್ಗೆ ಹೇಳುತ್ತಿದ್ದರು, ಎಂದಿಗೂ ಹೋಗದ ಆ ದೇವಾಲಯದ ವರ್ಣನೆಯನ್ನು ಕಣ್ಣಿಗೆ ಕಟ್ಟುವಂತೆ ಕೆಲವೊಮ್ಮೆ ವರ್ಣಿಸುತ್ತಿದ್ದರು ಎಂಬುದನ್ನು ಕೇಳಿ ಕೊನೆಗೆ ತಾನೇ ಅಲ್ಲಿಗೆ ಹೊಗುವುದೆಂದು ತೀರ್ಮಾನಿಸಿದ. ಹೀಗೆ ದೂರದ ತಾಂಜಾವೂರಿನ ಹಾದಿಯಲ್ಲಿ ಹೋಗುವಾಗ ಸಿಗುತ್ತಿದ್ದ ಇತರೆ ದೇವಾಲಯಗಳಲ್ಲೂ ಒಮ್ಮೆ ನೋಡಿ ಅವುಗಳಿಗೂ ಹೋಗಬೇಕೆಂದುಕೊಳ್ಳುತ್ತಾನೆ. ಒಂದು ಪಕ್ಷ ಅಪ್ಪ ಮೊಬೈಲನ್ನು ತನ್ನೊಟ್ಟಿಗೆ ಕೊಂಡೊಯ್ದು ಎಲ್ಲಿಯಾದರೂ ಆನ್ ಮಾಡಿದ್ದರೆ ಅದರ ಮುಖೇನವಾದರೂ ಅವನನ್ನು ಹುಡುಕಬಹುದಿತ್ತು ಎಂದುಕೊಂಡರೆ ಕೆಲದಿನಗಳ ನಂತರ ಅಮ್ಮ ಫೋನು ಮಾಡಿ ಅವರ ಮೊಬೈಲು ಮನೆಯಲ್ಲೇ ಸಿಕ್ಕಿತೆಂದು ಹೇಳುತ್ತಾಳೆ. ಪ್ರತಿ ದಿನ ಫೋನಾಯಿಸಿ ಆಕೆಗೆ ಸಮಾಧಾನ ಪಡಿಸುತ್ತಿದ್ದ. ಇತ್ತಕಡೆ ಲೋಕೇಶ ನೀನು ಎಲ್ಲಿದ್ದರೂ ಸರಿಯೇ ಆದರೆ ಪ್ರತಿ ದಿನ ಬೆಳಗ್ಗೆ ಹಾಗು ಸಂಜೆ ಒಂದೆರೆಡು ಕಿಲೋಮೀಟರ್ಗಳು ಓಡುತ್ತಿರು ಎನ್ನುತ್ತಿದ್ದ. ಆತನ ಮಾತನ್ನು ಕೇಳಿ ಕೂಡಲೇ ಸಿಟ್ಟು ಬರುತ್ತಿದ್ದರೂ ದುಃಖತಪ್ತ ಜೀವನದಲ್ಲಿ ಓಟದ ವೇಗವೇ ಆದಿಯನ್ನು ಎಲ್ಲದರಿಂದ ದೂರವಾಗಿಸುತ್ತಿತು. ಇತ್ತೀಚಿಗೆ ಆತ ಒಡಲು ಶುರುವಿಟ್ಟರೆ ನಿಲ್ಲದ ಯಂತ್ರದಂತೆ ಒಂದೇ ಸಮನೆ ಓಡತೊಡಗುತ್ತಾನೆ. ಆತನಿಗೆ ಒಂದಿನಿತು ಸುಸ್ತಾಗಲಿ, ಸಂಕಟವಾಗಲಿ ಎಂಬುವುದು ಆಗುವುದಿಲ್ಲ. ಯಾರೋ ನಿಲ್ಲಿಸಿ ತಡೆದು ಕೇಳಿದಾಗಲಷ್ಟೇ ಆತನಿಗೆ ಇಹಲೋಕದ ಅರಿವು ಬರುವುದು. ನೀರಿನ ಮುದ್ದೆಯಾಗಿರುತ್ತಿದ್ದ ತನ್ನ ಬಟ್ಟೆಯ ಮೇಲೆ ಗಮನ ಹೋಗುವುದು.

ಹೀಗೆಯೇ ಇನ್ನೆಷ್ಟು ದೇವಾಲಯಗಳನ್ನು ಹುಡುಕುವುದು? ತಾಂಜಾಊರಿನ ದೇವಾಲಯದಲ್ಲೂ ಅಪ್ಪ ಸಿಗದಿದ್ದರೆ ಏನು ಮಾಡುವುದು, ನಂತರ ಎಲ್ಲಿಗೆ ಹೋಗುವುದು ಎಂದು ಆತನಿಗೆ ತಿಳಿಯಲಿಲ್ಲ. ಬಸ್ಸು ವೇಗವಾಗಿ ಚಲಿಸುತ್ತಲಿತ್ತು. ಅದೆಷ್ಟೇ ಗುಂಡಿ ತಗ್ಗುಗಳು ಬಂದರೂ ವೇಗ ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಹೊರಗಿನಿಂದ ಬೀಸುತ್ತಿದ್ದ ಬಿಸಿಗಾಳಿ ಒಂದು ಬಗೆಯ ಸೋಲನ್ನು ಮನದೊಳಗೆ ಮೂಡಿಸುತ್ತಿದ್ದರೆ ಕಣ್ಣುಗಳಿಗೆ ಎಲ್ಲಿಲ್ಲದ ನಿದ್ರೆಯ ಚಾಳಿ.

ಖುಷಿಯ ಫೋನಾದರೂ ಬರಬಾರದೇ? ಆಕೆಯೊಟ್ಟಿಗೆ ಮಾತನಾಡಿ ಒಂದಷ್ಟು ಮನಸ್ಸನ್ನು ಹಗುರಾಗಿಸಿಕೊಳ್ಳುವ ಕನಸೂ ಸಹ ಈಗ ಕಮರಿಹೋಗಿದೆ. ಆಕೆಯನ್ನು ನೆನೆದರೇ ತನ್ನ ಮೇಲೆಯೇ ಎಲ್ಲಿಲ್ಲದ ಜಿಗುಪ್ಸೆ ಮೂಡುತ್ತದೆ. ಆಕೆಯನ್ನು ಅಷ್ಟೊಂದು ಹತ್ತಿರವಾಗಿಸಿಕೊಂಡೆನೇ ಅಥವಾ ಆಕೆಯೇ ನನ್ನ ಇಷ್ಟು ಸನಿಹಕ್ಕೆ ಬಂದು ಕೂತಳೆ? ಅದೇನೇ ಇರಲಿ. ಈ ಸಮಯದಲ್ಲಿ ಯಾರಾದರೊಬ್ಬರು ನನ್ನನ್ನು ಕೇಳುವ , ಅರಿಯುವ ವ್ಯಕ್ತಿ ಬೇಡವೇ ? 'ಏ ಆದಿ , ಏನಾಯಿತೋ. ಹೇಳ್ತೀಯೋ ಇಲ್ವಾ ಇವಾಗ..' ಎಂದು ಕೇಳಿದ್ದರೂ ಸಾಕಾಗಿತ್ತು. ಕೂಡಲೇ ಒಂದಿಷ್ಟು ಅತ್ತು ಮನಸ್ಸು ಹಗುರು ಮಾಡಿಕೊಳ್ಳಬಹುದಿತ್ತು.

ಖುಷಿಯ ಫೋನೇಕೆ ಬರಬಾರದು ಎಂದು ತನ್ನ ಜೇಬಿನಲ್ಲಿದ್ದ ಮೊಬೈಲನ್ನು ಹೊರಗೆಳೆದು ನೋಡತೊಡಗುತ್ತಾನೆ. ಕಾಕತಾಳೀಯವೆಂಬಂತೆ ಮೊಬೈಲಿನ ಆ ಸ್ಕ್ರೀನನ್ನು ನೋಡುತ್ತಿರುವಾಗಲೇ ಟನ್ ಎಂಬ ಆಕೆಯ 'Hi..' ಮೆಸೇಜು ಬರುತ್ತದೆ. ಆಶ್ಚರ್ಯವಾದರೂ ಕಾದ ಪಾತ್ರೆಯ ಮೇಲಿಟ್ಟ ಮಂಜುಗೆಡ್ಡೆಯಂತೆ ಆದಿಯ ಕಣ್ಣುಗಳು ಹನಿಗೂಡಿದವು. ಉತ್ತರವಾಗಿ ಇವನು ಹೇಗಿದ್ದೀಯ ಎಂದು ಕೇಳಿ ಎಲ್ಲವನ್ನು ಮರೆತಿರುವಂತೆ ಮಾತನಾಡತೊಡಗಿದ. ಬರಡುಗಟ್ಟಿದ ಭೂಮಿಗೆ ಎಳೆಯ ಮಳೆಯ ಮೋಡಗಳು ಕಂಡತಹ ಅನುಭವ. ಏನೋ ಒಂದು ಬಗೆಯ ಅವರ್ಣೀಯ ನೆಮ್ಮದಿ ಆಕೆಯ ಮೆಸ್ಸೇಜುಗಳಲ್ಲಿ. ಆದಿ ತನ್ನ ಅಪ್ಪ ಮರೆಯಾದದನ್ನಾಗಲಿ, ತಾನು ಆತನನ್ನು ಅರಸುತ್ತ ತಮಿಳುನಾಡಿಗೆ ಹೋಗುತ್ತಿರುವುದನ್ನಾಗಲಿ ಹೇಳಲಿಲ್ಲ. ಆಕೆ ಏನೋ ಹೇಳಲು ತಡವರಿಸುತ್ತಿದ್ದಂತೆ ಕಂಡಿತು. ದೀಪಾವಳಿಗೆ ಹಬ್ಬಕ್ಕೆ ಬಂದಾಗ ಸಿಗಲಿಲ್ಲವೇಕೆಂದು ಕೇಳಿದರೂ ಆಕೆ ಮರುತ್ತವರಾಗಿ ಏನನ್ನೂ ಹೇಳಲಿಲ್ಲ. ಆದರೂ ಏನೋ ಒಂದು ಬಗೆಯ ಹುಮ್ಮಸ್ಸು ಆತನಲ್ಲಿ ಜಾಗೃತಗೊಂಡಿತು. ಈಗಲಾದರೂ ಅಪ್ಪ ಸಿಕ್ಕೇ ಸಿಕ್ಕುವನೆಂದು ಬಿಸಿಗಾಳಿಯ ಸುಖಾನುಭವವನ್ನು ಅನುಭವಿಸುತ್ತಾ ಸಾಗಿದನು.

**

ಹೆಸರಿಗೆ ತಕ್ಕ ಬೃಹತ್ ಆಕೃತಿಯನ್ನು ಹೊಂದಿರುವ ಬೃಹದೇಶ್ವರ ದೇವಾಲಯನ್ನು ನೋಡಿದವನ ಎದೆ ಒಮ್ಮೆಗೆ ಹುಬ್ಬಿಕೊಳ್ಳುವುದಂತೂ ಸುಳ್ಳಲ್ಲ. ಎಲ್ಲೂ ಕಂಡಿರದಷ್ಟು ಎತ್ತರದ ಆ ಶಿವಲಿಂಗವೇನು , ಭೂಮಿಯನ್ನೇ ತನ್ನ ಭಾರದಿಂದ ಅದುಮಿ ಕೂತಿರುವಂತೆ ಕಾಣುವ ಆ ವಿಶಾಲ ನಂದಿಯೇನು, ಆಗಸಕ್ಕೆ ಚುಂಬಿಸುತ್ತಿರುವಂತೆ ಮೇಲೆದ್ದಿರುವ ಗ್ರಾನೈಟ್ ಶಿಲೆಗಳ ದೇವಾಲಯದ ಆ ವಿಮಾನವೇನು, ಅದರ ಮೇಲಿರುವ ನೂರಾರು ಕೆಜಿಯ ಆ ಬಂಡೆಯ ಚಂಡೇನು, ಅದಕ್ಕಿರುವ ಸಾವಿರಾರು ವರ್ಷಗಳ ಇತಿಹಾಸದ ಮೆರುಗೇನು… ಹುಲುಮಾನವನಿಗೆ ಇಂತಹ ವಿಸ್ಮಯವನ್ನು ಕೆತ್ತಲು ಸಾಧ್ಯವೇ ಎಂಬ ಸಂಶಯ ಮೂಡತೊಡಗಿತು ಆದಿಯ ಮನದೊಳಗೆ. ಸಂಜೆಯ ಕೆಂದಾವರೆಯ ಆಗಸದ ಕಡೆಗೆ ಹಕ್ಕಿಗಳು ಒಂದರಿದೊಂದು ಹಾರಿ ಮರೆಯಾಗುತ್ತಿದ್ದವು. ದೇವಾಲಯದ ಘಂಟೆಯ ಸದ್ದು ಅಂತರಂಗದ ಸುಪ್ತ ಮನಸ್ಸನ್ನು ಜಾಗೃತಗೊಳಿಸುವಂತೆ ಮೂಡತೊಡಗಿತು.

ಅಪ್ಪ ಇಂತಹ ಮನೋಹರ ದೇವಾಲಯವನ್ನು ಕಲ್ಪನೆ ಮಾಡಿಕೊಂಡಿರುವುದಾದರೂ ಹೇಗೆ? ಎಲ್ಲಿಯಾದರೂ ಓದಿರಬಹುದೇ ? ಯಾರೋ ಹೇಳಿದ್ದನ್ನು ಕೇಳಿರಬಹುದೇ? ಅಲ್ಲಿರುವ ಪ್ರತಿಯೊಂದು ಚಹರೆಯಲ್ಲೂ ಆದಿ ಅಪ್ಪನನ್ನು ಹುಡುಕತೊಡಗಿದ. ಅವರಿವರನ್ನು ವಿಚಾರಿಸಿ ಕೊನೆಗೆ ಎಲ್ಲಿಯೂ ಅವರ ಸುಳಿವು ಸಿಗದೆ ಸುಮ್ಮನಾದ. ದೇವಾಲಯದ ಪ್ರಾಂಗಣದಲ್ಲೇ ಕಲ್ಲುಗಂಬವೊಂದಕ್ಕೆ ತಲೆಯೂರಿಕೊಂಡು ಕೂತ. ಅಪ್ಪ ಬಂದರೂ ಇಂತಹ ದೇವಾಯಲಕ್ಕೇ ಬರಬೇಕು ಎಂದೆಳತೊಡಗಿತು ಆತನ ಮನಸ್ಸು. ಕೂಡಲೇ ಹಿಂದಿನಿಂದ ಯಾರೋ ಬಂದು ಬೆನ್ನಿನ ಮೇಲೆ ಕೈಯಾಕಿದರು. ಆದಿಗೆ ಯಾರೋ ನನ್ನವರೇ ಬಂದಿರುವರು ಎಂಬಂತೆ ಖಾತ್ರಿಯಾಯಿತು . ಖುಷಿಯಿಂದ ಆತ ಹಿಂದಕ್ಕೆ ತಿರುಗಿ ನೋಡುತ್ತಾನೆ, ಹರಿದು ಕೊಳಕುಗೊಂಡ ಬಟ್ಟೆಗಳನ್ನು ತೊಟ್ಟು , ಉದ್ದುದ್ದವಾದ ಗಡ್ಡವನ್ನು ಬಿಟ್ಟು , ಹಳದಿ ಮೆತ್ತಿದಂತಹ ಹಲ್ಲುಗಳನ್ನು ಬಿಡುತ್ತಾ ಏನೋ ಹೇಳಲು ತಡವರಿಸುವಂತೆ ವ್ಯಕ್ತಿಯೊಬ್ಬ ನಿಂತಿದ್ದಾನೆ. ಆತನ ಆ ವಿಚಿತ್ರ ಹಾವಭಾವ ಹಾಗು ವೇಶಭೂಷಣಗಳನ್ನು ಕಂಡು ಆದಿಗೆ ಏನನ್ನು ಹೇಳಬೇಕೆಂದು ತಿಳಿಯಲಿಲ್ಲ. ಕೆಲವೊತ್ತು ಆದಿಯನ್ನೇ ಧಿಟ್ಟಿಸಿ ನೋಡಿದ ಆತ ಕೂಡಲೇ ಆತನನ್ನು ಅಲ್ಲಿಂದ ಎಬ್ಬಿಸಿ ಉತ್ತರ ದಿಕ್ಕಿನೆಡೆಗೆ ಹೋಗುವಂತೆ ಕೈಯಲ್ಲಿ ಸನ್ನೆಯನ್ನು ಮಾಡತೊಡಗಿದ. ಆತನ ವೇಷಭೂಷಣಗಳನ್ನು ಕಂಡು ದಿಗ್ಬ್ರಾಂತನಾದ ಆದಿಗೆ ಕೂಡಲೇ ಏನೇಳಬೇಕೆಂದು ತಿಳಿಯದಿದ್ದರೂ ಆತ ಏನೋ ಸೂಚನೆಯನ್ನು ಕೊಡುವಂತೆ ಭಾಸವಾಯಿತು. ಆತ ಪುನಃ ಉತ್ತರದೆಡೆಗೆ ಬೊಟ್ಟುಮಾಡಿ ತೋರಿಸುತ್ತಾ ತಕ್ಷಣವೇ ಹೊರಡಬೇಕೆನ್ನುವಂತೆ ಆದಿಯನ್ನು ಹಿಂದಿನಿಂದ ತಳ್ಳಿದ. ಆದಿಗೆ ಅಲ್ಲಿ ನೆಡೆಯುತ್ತಿರುವುದೇನು ಎಂಬುದು ಅರಿವಾಗಲಿಲ್ಲ. 
ಕೂಡಲೇ ಹಿಂದಿನಿಂದ ಓಡಿಬಂದ ವ್ಯಕ್ತಿಗಳಿಬ್ಬರು ತಮಿಳಿನಲ್ಲಿ ತುಚ್ಛಪದಗಳಿಂದ ಆತನನ್ನು ಬೈಯುತ್ತಾ ಎಳೆದು ದೇವಾಲಯದ ಹೊರಗಡೆಗೆ ದಬ್ಬಿದರು. ಆದಿ ದಿಗ್ಬ್ರಾಂತನಾಗಿ ಆತನನ್ನೇ ನೋಡುತ್ತಾ ಸುಮ್ಮನೆ ನಿಂತುಬಿಟ್ಟ. ಅದೆಷ್ಟೋ ಹೊತ್ತಿನವರೆಗೂ ಹಾಗೆಯೇ ನಿಂತಿದ್ದ ಆತನಿಗೆ ಕೂಡಲೇ ಏನೋ ಹೊಳೆದಂತಾಗಿ ಆ ವ್ಯಕ್ತಿ ಹೊರಬಂದ ಹಾದಿಯಲ್ಲೆ ಓಡಿಬಂದು ಆತನನ್ನು ಅರಸತೊಡಗಿದ. ಆತ ಎಲ್ಲಿಯೂ ಕಾಣಲಿಲ್ಲ. ಅದೆಷ್ಟೋ ಹೊತ್ತಿನವರೆಗೂ ಅರಸಿ ಕೊನೆಗೆ ಅಲ್ಲಿದ್ದ ಕೆಲವರನ್ನು ವಿಚಾರಿಸಿದರೂ ಆತನ ಬಗೆಗೆ ಸುಳಿವು ಸಿಗಲಿಲ್ಲ.

ಏನೂ ಅರಿಯದವನಾದ ಆದಿಗೆ ಏಕೋ ಓಡುವ ಮನಸ್ಸಾಯಿತು. ಕೂಡಲೇ ಓಡತೊಡಗಿದ. ದೇವಾಲಯದಿಂದ ತುಸು ದೂರ ಚಲಿಸಿ ಪ್ರದಕ್ಷಿಣೆ ಹಾಕುವಂತೆ ಬೃಹತ್ ವೃತ್ತದ ಪರಿಧಿಯಲ್ಲಿ ದೇವಾಲಯವನ್ನು ಓಡುತ್ತಲೇ ಸುತ್ತತೊಡಗಿದ. ಅಪ್ಪನನ್ನು ಅರಸುತ್ತಾ ಆತನ ಮೇಲೆ ಮೂಡುತ್ತಿರುವ ಕಾಳಜಿಗೂ ಖುಷಿಯನ್ನು ನೆನೆದು ಮೂಡುವ ಪ್ರೀತಿಗೂ ಮನಸ್ಸು ತುಲನೆ ಮಾಡತೊಡಗಿತು. ತುಲನೆ ಹೆಚ್ಚಾದಂತೆ ಓಟ ಜೋರಾಯಿತು. ಉತ್ತರದಿಂದ ಬೀಸಿದ ಸಂಜೆಯ ತಂಗಾಳಿ ಒಮ್ಮೆಲೇ ಆದಿಯ ಮುಖವನ್ನು ಬಡಿಯಿತು. ರಾಢಿಯಾಗಿದ್ದ ಮನಸ್ಸು ಒಮ್ಮೆಲೇ ಶಾಂತವಾಯಿತು. ಮರುದಿನ ಬೆಳಗ್ಗೆ ಎದ್ದವನೇ ಹತ್ತಿರದ ಕಡಲ ತೀರಕ್ಕೆ ಹೋಗಿ ಪುನಃ ಎಂಟತ್ತು ಕಿಲೋಮೀಟರ್ ಗಳಷ್ಟು ಓಡಿದ. ಅಪ್ಪ ಸಿಗುವುದಿಲ್ಲವೆಂಬ ಖಾತ್ರಿ ರಾತ್ರಿಯಿಡಿ ಯೋಚಿಸಿದ ಮನಸ್ಸಿಗೆ ಅದಾಗಲೇ ಆಗಿದ್ದರಿಂದ ರೂಮಿಗೆ ವಾಪಸ್ಸು ಬಂದವನೇ ಊರಿನ ರೈಲನ್ನು ಹಿಡಿದ.



****

'ಲೋಕೇಶ್ , ಕಮ್ ಆನ್ !! ಒಂದ್ ನಿಮಿಷ ನನ್ನೊಟ್ಟಿಗೆ ನಿಂತು ಮಾತಡೋಕ್ಕೂ ಪುರ್ಸತ್ತ್ ಇಲ್ವಾ ನಿಮ್ಗೆ?' ಶಶಿ ಕೊನೆಯ ಬಾರಿ ಎಂಬಂತೆ ಜೋರಾಗಿ ಅರಚಿದಳು. ಸಲ್ಡಾನ ಜೋಸೆಫ್ರ ಸಾವಿನ ನಂತರ ಕಾಲೇಜಿಗೆ ಹೋಗದೇ ಕೃಷಿಯಲ್ಲಿ ಇನ್ನೂ ಹೆಚ್ಚಾಗಿ ತೊಡಗಿ ಅವರಂತೆಯೇ ಎತ್ತರಕ್ಕೆ ಬೆಳೆದು ಸಮಾಜದಲ್ಲಿ ಹೆಸರನ್ನು ಗಳಿಸಿಕೊಳ್ಳಬೇಕೆಂದುಕೊಂಡಿದ್ದಾನೆ ಲೋಕೇಶ. ಅವರ ಹೆಸರನ್ನು ಉಳಿಸಬೇಕು. ಅವರ ಸಾವಿನ ನಂತರ ಅಕ್ಷರ ಸಹ ನೆಲಕಚ್ಚಿರುವ ಕಂಪನಿಯ ಷೇರುಗಳನ್ನು ಆದಷ್ಟು ಪ್ರಮಾಣದಲ್ಲಿ ಖರೀದಿಸಿ ಕಂಪೆನಿಯನ್ನೂ ಉಳಿಸಿಕೊಳ್ಳಬೇಕೆಂದುಕೊಂಡಿದ್ದಾನೆ. ಅದರಂತೆ ತಾನು ಶುಂಠಿ ಹಾಕಿದ್ದ ಪಕ್ಕಕ್ಕೆ ಇದ್ದ ಅವರ ಇನ್ನೂ ಹಲವು ಎಕರೆ ಜಮೀನನ್ನು ಒಂದು ವರ್ಷಕ್ಕೆ ಖರೀದಿಸಿ ಅದರಲ್ಲಿ ಈ ಬಾರಿ ಭತ್ತವನ್ನು ಬೆಳೆಯಲು ಯೋಚಿಸಿದ್ದಾನೆ. ಅದರಂತೆಯೇ ಎರಡು ಜೋಡೆತ್ತುಗಳನ್ನು ತಂದು ಇಂದು ಖುದ್ದಾಗಿಯೇ ಉಳುಮೆಯನ್ನು ಮಾಡಲು ತೊಡಗಿದ್ದಾನೆ. ಅಜ್ಜಿಯೂ ಸಹ ಅವನ ಬೆಂಬಲಕ್ಕೆ ನಿಂತವಳಂತೆ ಉಳುಮೆಯ ಬಗೆಗೆ ಕೆಲವು ವಿಷಯಗಳನ್ನು ಹೇಳಿಕೊಡುತ್ತಿದ್ದಾಳೆ...

Continues....

Friday, July 31, 2020

ಪಯಣ - 14

ಅವರು ನನ್ನೊಟ್ಟಿಗೆ ಮಾತು ಬಿಟ್ಟು ಅದಾಗಲೇ ವಾರಗಳೇ ಕಳೆದಿವೆ. ಹಾಗಂತ ನಾನೇನು ಅವರ ಮೆಸೇಜಿಗೂ, ಫೋನ್ ಕಾಲಿಗೂ ಹಾತೊರೆಯುತ್ತಿಲ್ಲ. ಐ ಶುಡ್ ಮೇಂಟೈನ್ ಮೈ ಡಿಗ್ನಿಟಿ. ಆದರೆ ಅವರು ಇದ್ದಷ್ಟು ದಿವಸನೂ ನನ್ನಲ್ಲಿ ಮೂಡುತಿದ್ದದ್ದು ಒಂದೇ ಭಾವ. ಅದೇ ಕಾಮ. ಅದು ಅವರ ತಪ್ಪಿರದಿರಬಹುದು. ನಾನೂ ಸಹ ಬೇಕಂತಲೇ ಏನೋ ಅದನ್ನು ಇಚ್ಛಿಸದಿರಬಹುದು. ಆದರೆ ನನ್ನ ಗುರಿಯೆಂಬ ಹರಿವು ಅವರೆದುರಿಗಿರುವಾಗ ಹಾಳು ಬಯಕೆಯ ಆಸೆಯಲ್ಲಿ ಅಲ್ಲೋಲಕಲ್ಲೋಲವಾಗುವುದಂತು ಸುಳ್ಳಲ್ಲ. ಕೂಡಲೇ ಮದುವೆ ಸಂಬಂಧ ಎಂಬ ನೂರಾರು ಯೋಚನೆಗಳು.

ಸಾಧ್ಯವೇ ಇಲ್ಲ. ನಾನು ತಿಳಿಯಬೇಕು. ಕಲಿಯಬೇಕು.ಅರಿಯಬೇಕು. ನಮ್ಮ ಹಿರಿಯರನ್ನು. ನಮ್ಮ ಕಲೆ ಸಂಸ್ಕೃತಿಯನ್ನು. ಅದೂ ಸಹ ನನ್ನದೇ ದೃಷ್ಟಿಕೋನದಲ್ಲಿ. ನಾನು ಸುಖವಾಗಿರಲು ಬೇರೆಯೊಬ್ಬರ ಅಥವ ಬಾಹ್ಯ ವಸ್ತುಗಳ ಪ್ರಭಾವ ನನ್ನೊಳಗೆ ಒಂದಿನಿತು ಇರಕೂಡದು. ಅಲ್ಲದೆ ಸುಖವೆನ್ನುವುದು ಕೇವಲ ಕಾಮವಷ್ಟೇ ಆಗಕೂಡದು. ಮದ್ಯ, ಮಾಂಸ, ಮೋಜು ,ಮಸ್ತಿಗಳಿಂದಾಚೆಗಿನ ಸಂತೋಷದ ಲಹರಿ ನನ್ನೊಳಗೆ ಮೂಡಬೇಕು. ಧ್ಯಾನ ಮಾಡಿದಾಗ ಮೂಡುವ ಆ ಅರೆಕ್ಷಣದ ನೆಮ್ಮದಿ ಜೀವನದುದ್ದಕ್ಕೂ ನನಗೆ ಬೇಕು. ದ್ವಾರಕಸಮುದ್ರದ ದೇವಾಲಯದ ಒಳಗಿರುವ ಶಾಂತತೆ ಅನಂತವಾಗಿ ಮೂಡಬೇಕು.ಇದು ಕೇವಲ ಆ ಒಂದು ದೇವಾಲಯದೊಳಗೆ. ದೇಶದ ಇಂತಹ ಸಾವಿರಾರು ದೇವಾಲಯಗಳು ಅದೆಂತಹ ಪ್ರಭೆಯನ್ನು ನಮ್ಮೊಳಗೇ ಬೀರಬಹುದು?.

ಯಾರಿಗೊತ್ತು, ಆ ಮಹಾದೇವನೇ ಒಂದು ದಿನ ಕಾಣಲು ಸಿಕ್ಕರೆ?!

ಹೋಗಬೇಕು. ಪ್ರತಿದಿನ ಸೂರ್ಯೋದಯ ಹಾಗು ಸೂರ್ಯಾಸ್ತದ ಸಮಯದಲ್ಲಿ ಒಂದೊಂದು ಹೊಸ ದೇವಾಲಯಗಳಿಗೆ ಭೇಟಿಯಿಟ್ಟು ಧ್ಯಾನಿಸಬೇಕು. ಶಾಂತಿಯ ಸಾಗರದಲ್ಲಿ ಈಜುತ್ತಾ ಅವುಗಳ ಕಲೆ , ಕೆತ್ತನೆಗಳನ್ನು ಅರಿಯಬೇಕು. ಎಂಬ ಆಲೋಚನೆಗಳು ಮೂಡುತ್ತಿದ್ದಂತೆಯೇ ಮನದೊಳಗೆ ಸಂತೋಷದ ಅಲೆಗಳು ಉಕ್ಕಿ ಬರಲಾರಂಭಿಸಿದವು. ಬೆಟ್ಟದ ತುದಿಗೆ ನಾನಿಂದು ಒಬ್ಬನೇ ಬಂದಿದ್ದೆ. ಇನ್ನರೆ ಹೊತ್ತಿನಲ್ಲಿ ಸೂರ್ಯ ಪಡುವಣ ದಿಕ್ಕಿನಲ್ಲಿ ಮರೆಯಾಗುವುನ್ನು ತಡೆಯಲೇನೋ ಎಂಬಂತೆ ಸಾಲು ಸಾಲು ಹಕ್ಕಿಗಳು ಆ ಕಡೆಗೇ ಧಾವಿಸತೊಡಗಿದ್ದವು. ಯಾವುದೇ ಯಾಂತ್ರಿಕ ಸದ್ದುಗಳಿರದ ಆ ಎತ್ತರದ ಸ್ಥಳದಲ್ಲಿ ಒಂದು ಘಳಿಗೆ ಧ್ಯಾನಿಸುವ ಮನಸ್ಸಾಗಿ ನಿಧಾನವಾಗಿ ಕಣ್ಣುಮುಚ್ಚಿದೆ.


****


'ದೀಪಾವಳಿಗಾದ್ರು ಬಾರೋ ಮಾರಾಯ.. ಏನ್ ಸೀಮೆಗಿರದ ಕಾಲೇಜು ನಿಂದು..' ಎಂದು ಮನೆಗೆ ತೆರಳುವ ಕಷ್ಟದ ಕಾಯಕಕ್ಕೆ ಅಮ್ಮನಿಂದ ಆಮಂತ್ರಣ ದೊರೆಕಿತು. ತಾನಿರುವಲ್ಲಿಂದ ಊರಿಗೆ ಹೋಗುವ ಧಟ್ಟ ಹಸಿರಾದ ರಮಣೀಯ ಹಾದಿಯನ್ನು ಇಂಪಾದ ಹಾಡುಗಳೊಟ್ಟಿಗೆ ಬೆಳ್ಳಂಬೆಳೆಗೆ ಕ್ರಮಿಸುವುದೆಂದರೆ ಆದಿಗೂ ಎಲ್ಲಿಲ್ಲದ ಸಂತೋಷವೇ ಆದರೂ ಅಂತಹ ಸ್ವರ್ಗದಾರಿಯನ್ನು ಕ್ರಮಿಸಿ ಮನೆಗೆ ತಲುಪಿದನೆಂದರೆ ಮಾನಸಿಕ ಒತ್ತಡದಿಂದ ಕೂಡಿರುವ ಮಹಾ ಕೂಪದೊಳಗೆ ಬಿದ್ದಂತಹ ಕಹಿಯಾದ ಅನುಭವ. ಮಗನಿಗಾಗಿ ಅಮ್ಮ ಮಾಡಿಡುವ ಭಕ್ಷಾದಿಗಳು ಒಂದೆರಡಲ್ಲ. ಆದರೂ ಕಹಿಯಾದ ಅತ್ತಕಡೆ ಕಾಲಿಡಲು ಮನಸ್ಸೇ ಬಾರದು. ಇಲ್ಲದ ಮನಸ್ಸಿನಲ್ಲಿಯೇ 'ಸರಿ, ನೋಡ್ತೀನಿ..' ಎಂದು ಆತ ಫೋನನ್ನು ಕೆಳಗಿಟ್ಟ. ತಂಗಿ ಬಂದಿದ್ದರೆ ಹೋಗಬಹುದಿತ್ತು ಆದರೆ ಅವಳೆಲ್ಲಿ ಬರುತ್ತಾಳೆ ಎಂದು ಮನದಲ್ಲೇ ಅಂದುಕೊಂಡ. ಹತಾಶೆಯ ನಿಟ್ಟುಸಿರನ್ನು ಬಿಟ್ಟ. ಸಿಗುವ ನಾಲ್ಕೈದು ದಿನಗಳ ರಜೆಯ ನೆಮ್ಮದಿಯನ್ನು ಪುಸ್ತಕ ಓದುತ್ತಲೋ , ರಾತ್ರಿಯಿಡಿ ಕಷ್ಟಪಟ್ಟು ಇಂಟರ್ನೆಟ್ಟಿನಿಂದ ಬಟ್ಟಿಇಳಿಸಿದ ಚಲನಚಿತ್ರಗಳನ್ನು ನೋಡುವುದರಲ್ಲೋ ಅಥವಾ ಸಂಜೆ ಒಂದೆರೆಡು ಬಿಯರ್ಗಳನ್ನು ಹಾಕಿ ಎಲ್ಲವನ್ನು ಮರೆಯುವುದರಲ್ಲಿ ಕಳೆಯಬೇಕೆಂದುಕೊಂಡಿದ್ದ ಆದಿಗೆ ಈಗ ಮನೆಗೆ ಹೋಗಬೇಕೆಂಬುದನ್ನು ನೆನೆದು ಮನಸ್ಸು ಕುಗ್ಗತೊಡಗಿತು. ಮೊದಲೆಲ್ಲ ಅಮ್ಮನ ವಾರಾಂತ್ಯದ ಬಾಡೂಟವನ್ನು ಸವಿಯಲೆಂದೇ ಇಷ್ಟಬಿದ್ದು ಹೋಗುತ್ತಿದ್ದ ಮನೆ ಬರಬರುತ್ತಾ ಏಕೋ ಬೇಡವಾಗತೊಡಗಿದೆ.

ಆತನಿಗೆ ಯೋಚನೆಯೊಂದು ಮೂಡಿತು. ಬಹುದಿನಗಳ ತನ್ನ ಕನಸ್ಸನ್ನು ಈಡೇರಿಸಿಕೊಳ್ಳಬಹುದೆಂಬ ಖುಷಿಯ ಬುಗ್ಗೆ ಆತನೊಳಗೆ ಪುಟಿದೇಳತೊಡಗಿತು. ಶಾಲಾ ದಿನಗಳ ನಂತರ ಕೇವಲ ತನ್ನ ಕಲ್ಪನೆಗಷ್ಟೇ ಸೀಮಿತವಾಗಿದ್ದ ಖುಷಿಯನ್ನು ಈ ಬಾರಿ ಕಣ್ತುಂಬ ಕಾಣಬಹುದೆಂಬ ಆಲೋಚನೆ ಕಾರ್ಮೋಡ ಕವಿದ ಆಗಸದಲ್ಲಿ ನಕ್ಷತ್ರವೊಂದು ಮಿನುಗಿದಂತೆ ಮೂಡಿತು.. ಕೂಡಲೇ ಅಮ್ಮನಿಗೆ ಫೋನಾಯಿಸಿ 'ಬರ್ತೀನಿ.. ಕಾಯಿ ಹೋಳ್ಗೆ ಮತ್ತು ಬೇಳೆ ಹೋಳ್ಗೆ ಮಾಡು' ಎಂದು ಆಜ್ಞಾಪಿಸಿ ಫೋನನ್ನು ಇರಿಸಿದ. ತುಸು ಹೊತ್ತಿನ ಮೊದಲು ಬೇಡವಾಗಿದ್ದ ಮನೆ ಈಗ ಎಲ್ಲಿಲ್ಲದ ಖುಷಿಯನ್ನು ತುಂಬಿ ಕೊಡುವ ಅಕ್ಷಯಪಾತ್ರೆಯಂತೆ ಭಾಸವಾಯಿತು.

ಆದಿನ ಸಂಜೆ ನಿಗದಿತ ಸಮಯಕ್ಕೂ ಮೊದಲೇ ಟೆರೇಸಿನ ಮೇಲೋಗಿ ಖುಷಿಯ ನಂಬರಿಗೆ ಫೋನಾಯಿಸಿದ. ಎಂದಿನಂತೆಯೇ ಎಲ್ಲಿಲ್ಲದ ಹುರುಪಿನಲ್ಲಿ ಅದೇ ಪ್ರೆಶ್ನೆಗಳನ್ನು ಮತ್ತೊಮ್ಮೆ ಕೇಳಿ ಮುಂದೇನೂ ತೋಚದಿದ್ದಾಗ ಕೊನೆಯಲ್ಲಿ ತಾನು ಹಬ್ಬಕ್ಕೆ ಊರಿಗೆ ಬರುವುದನ್ನು ಹೇಳಿ ಆಕೆಯೂ ಬಂದರೆ ಸಿಗಬಹುದೆಂಬುದನ್ನು ಹೇಳಿ ಆಕೆಯ ಉತ್ತರಕ್ಕೆ ಕಾಯುತ್ತಾನೆ. 'ಸರಿ, ನೋಡೋಣ' ಎಂಬ ಎರಡಂಕಿಯ ಉತ್ತರವನ್ನು ಬಿಟ್ಟರೆ ಬೇರೇನೂ ಹೆಚ್ಚಾಗಿ ಆಕೆ ಹೇಳಲಿಲ್ಲ. ಆದಿ ಮತ್ತೊಮ್ಮೆ ಆಕೆಯನ್ನು ಕೇಳಿದ. ಆಗಲೂ ಒಂದು ಬಗೆಯ ಅಸಡ್ಡೆಯ ಉತ್ತರ. ಇಷ್ಟು ವರ್ಷಗಳ ನಂತರ ಸಿಗುವ ಖುಷಿಗೆ ಆಕೆಯ ಒಲ್ಲದ ಮನಸ್ಸಿನ ಉತ್ತರವನ್ನು ಕಂಡು ಆದಿಯ ಮುಖ ಕೆಂಪೇರತೊಡಗಿತು. ಆಕೆಗೆ ನಿಜವಾಗಿಯೂ ನನ್ನ ಕಾಣಲು ಆಸ್ಥೆಯಿಲ್ಲವೇ ಅಥವಾ ಬೇರೇನೋ ಕಾರಣವಿರಬಹುದೇ? ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಹಬ್ಬಕ್ಕೆ ಊರಿಗೆ ಬರುತ್ತಾರೆ. ಅದನ್ನರಿತು, ನಾನು ಹೇಳುವ ಮೊದಲೇ ಆಕೆಯೇ ನನಗೆ ಫೋನಾಯಿಸಿ ಕೇಳಬಹುದಿತ್ತು. ಸಿಗಲು ಜಾಗ ಹಾಗು ಸ್ಥಳವನ್ನು ನಿಗದಿಮಾಡಬಹುದಿತ್ತು. ಇಲ್ಲ, ಆಕೆಗೆ ಇವೆಲ್ಲ ಬೇಕಿಲ್ಲ. ತಾನಾಯಿತು ತನ್ನ ಓದಾಯಿತು. ಇಂತಹ ಹಲವು ಯೋಚನೆಗಳೇ ಮೂಡತೊಡಗಿದ ಮೇಲೆ ಮತ್ತೇನೂ ಹೆಚ್ಚಾಗಿ ಮಾತನಾಡಲು ಕಾಣದೆ ಆತ ಫೋನನ್ನಿರಿಸಿದ. ಊರಿಗೆ ಹೋಗಬೇಕೆಂದು ಮೂಡುತ್ತಿದ್ದ ಆನಂದದ ಅಲೆ ಮತ್ತೊಮ್ಮೆ ಕಣ್ಮರೆಯಾಗತೊಡಗಿತು.

ಖುಷಿಯ ಈ ನಿರಾಸಕ್ತಿಯ ಮಾತುಗಳು ಆದಿಯ ಮನದೊಳಗೆ ಹಲವು ಪ್ರೆಶ್ನೆಗಳನ್ನು ಹುಟ್ಟುಹಾಕಿದವು. ಆಕೆ ಹೀಗೇಕೆ ಮಾಡುತ್ತಿದ್ದಾಳೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ನಾನೇಕೆ ಅವಳನ್ನು ಇಷ್ಟು ಹಚ್ಚಿಕೊಂಡೆ ಎಂಬುದಾಗಿರುತ್ತವೆ. ತನ್ನ ಜೀವನದಲ್ಲಿ ಆಕೆಯ ಪುನರಾಗಮನ ಅವ್ಯಕ್ತವಾದೊಂದು ಖುಷಿಯನ್ನು ತಂದಿರುವುದಂತೂ ಸುಳ್ಳಲ್ಲ. ಹಾಗಂದ ಮಾತ್ರಕ್ಕೆ ಆಕೆ ನನ್ನೊಳಗಿನ ಪ್ರತಿಯೊಂದು ಭಾವನೆಗಳ ನಿಯಂತ್ರಕಿಯಾಗಿರುವುದು ಆತನಿಗೆ ದಿಗ್ಬ್ರಮೆಯನ್ನು ಹುಟ್ಟಿಸುತ್ತದೆ. ಆಕೆ ನಕ್ಕರೆ ನನ್ನ ನಗು, ಆಕೆಗೆ ನೋವಾದರೆ ತನಗೆ ಅಳು, ನಲಿದರೆ ಖುಷಿ, ಮುನಿದರೆ ದುಃಖ, ಏನಿದು? ನಾನು ನನ್ನ ಮನೆಗೋಗಲು ಈಕೆಯನ್ನು ಕೇಳಬೇಕೆನ್ನುವ ತನ್ನ ನಿರ್ಧಾರ ಅದೆಂತಹದ್ದು? ಖುಷಿ ಪ್ರತಿದಿನ ಫೋನಾಯಿಸಿ ಮಾತಾಡುತ್ತಿದ್ದರೆ ಎಲ್ಲವೂ ಸರಿ. ನನ್ನ ಗೆಳತಿ ಎಂಬ ಅಹಃ. ಆದರೆ ಕನಿಷ್ಠ ಒಂದು ದಿನ ಫೋನಾಯಿಸದಿದ್ದರೆ ಅಥವಾ ಸಂತೋಷದಿಂದ ಮಾತಾಡದಿದ್ದರೆ ತನಗ್ಯಾಕೆ ಈ ಬಗೆಯ ವಿಪರೀತ ಕೋಪ? ಆಕೆಯ ಅಗಲುವಿಕೆ ನನ್ನೊಳಗೆ ಎಲ್ಲಿಲ್ಲದ ತುಮುಲವನ್ನು ಉಂಟುಮಾಡುವುದೇಕೆ? ಶಾಲಾದಿನಗಳಂತೆಯೇ ತನ್ನನ್ನು ಬಿಟ್ಟು ಆಕೆ ಎಲ್ಲಿಯೂ ಹೋಗಬಾರದು, ನಾನಿಲ್ಲದ ಆಟದಲ್ಲಿ ಆಕೆ ಬಾಗಿಯಾಗಬಾರದು ಎಂಬಂತಹ ಹಠ ಈಗಲೂ ಇದೆ. ಅದಕ್ಕೆ ಅದ್ಯಾವ ವ್ಯಾಖ್ಯಾನವನ್ನು ಸಮಾಜ ಕೊಡುತ್ತದೆಯೂ ತಿಳಿಯದು. ಆದರೆ ಆಕೆ ನನ್ನ ಗೆಳತಿ. ಅಣ್ಣ ತಮ್ಮ ಅಕ್ಕ ತಂಗಿಯರಿಗಿಂತಲೂ ಮಿಗಿಲಾದ ಸಲುಗೆ. ನನ್ನ ಜೀವನದಲ್ಲಿ ಅದೇನೇ ಜರುಗಿದರೂ ಕನ್ನಡಿಯ ಪ್ರತಿಬಿಂಬದಂತೆ ಅದು ಆಕೆಯಲ್ಲಿಯೂ ಮೂಡಬೇಕು. ಯಾರೊಟ್ಟಿಗೂ ಹಂಚಿಕೊಳ್ಳದ ಕನಸ್ಸುಗಳನ್ನು, ನೋವನ್ನು, ಹತಾಶೆಯನ್ನು, ಗುರಿಯನ್ನು ನಾನು ಆಕೆಯೊಟ್ಟಿಗೆ ಹಂಚಿಕೊಳ್ಳಬೇಕೆಂಬ ಹಂಬಲವೇಕೆ?

ಏನಿದರ ಅರ್ಥ.

ಅದೇನೇ ಇರಲಿ ತಾನು ಎಂದಿಗೂ ಬೇರೊಬ್ಬರ ಚಟುವಟಿಕೆಗಳ ಕೈಗೊಂಬೆಯಂತೂ ಸುತರಾಂ ಆಗಬಾರದು ಎಂದುಕೊಳ್ಳುತ್ತಾನೆ. ಅದು ಖುಷಿಯೇ ಯಾಕಾಗಿರಬಾರದು. ಆಕೆ ನನಗಾಗಿಯೇ ಆಗಸದಿಂದ ಬಂದಿಳಿದ ಗೆಳತಿಯಾದರೂ ಸರಿಯೇ ನನ್ನ ತೀರ್ಮಾನಗಳು ಎಂದಿಗೂ ನನ್ನದಾಗಿಯೇ ಇರಬೇಕು.

ಬಹುಷಃ ಈ ಮಾತನ್ನು ಬೇರ್ಯಾರ ಬಗ್ಗೆಯಾದರೂ ಹೇಳಿದ್ದರೆ ಆದಿಯ ಮನ ಕೇಳುತ್ತಿತ್ತೇನೋ ಆದರೆ ಖುಷಿಯ ಬಗೆಗೆ ಅದು ಆ ನಿಲುವನ್ನು ತಾಳಲು ಸಾಧ್ಯವಿರಲಿಲ್ಲ. ಗೊಂದಲ ಹಾಗು ಸಿಟ್ಟಿನಲ್ಲಿಯೇ ಆದಿ ಮನೆಗೆ ಹೋಗುವುದೆಂದು ನಿರ್ಧರಿಸಿದ. ಖುಷಿಯನ್ನು ಹೇಗಾದರೂ ಮಾಡಿ ಬೇಟಿಯಾಗಬೇಕೆಂಬ ಉತ್ಕಟ ಹಠದ ಉಸಿರನ್ನು ಕಟ್ಟತೊಡಗಿದ.

**

ಆದಿ ಊರನ್ನು ತಲುಪಿದ. ವಿಚಿತ್ರವೆಂಬಂತೆ ಕಳೆದ ಎರಡು ದಿನಗಳಲಿಂದ ಅಪ್ಪ ಮನೆಯಲಿಲ್ಲದೆ ತನ್ನ ಫೋನನ್ನೂ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅಮ್ಮನನ್ನು ವಿಚಾರಿಸಿದಾಗ 'ಹಬ್ಬ ಹರಿದಿನ ಬಂತು ಅಂದ್ರೆ ಇದ್ದದ್ದೇ ಬಿಡು .. ಯಾರ್ದೋ ಹಳೆ ನೆಂಟ್ರ ಮನೆಗೆ ಹೋಗಿರ್ತಾರೆ .. ಇನ್ನೊಂದ್ ಸ್ವಲ್ಪ ದಿನ ಬಿಟ್ಟು ಬರಬಹದು' ಎಂದು ಸುಮ್ಮನಾದಳು. ಆಕೆಯ ಮನದಲ್ಲೂ ಬಹುಷಃ ಮುಟ್ಟಿದರೆ ಮುನಿಯಂತಾಡುವ ಗಂಡ ಇಲ್ಲದೆ ಹಬ್ಬದ ದಿನದಲ್ಲಾದರೂ ಮನೆ ಶಾಂತವಾಗಿರುತ್ತದೆ ಎಂಬ ನೆಮ್ಮದಿ. ರಾತ್ರಿಯಿಡಿ ಮಾಡಿಟ್ಟ ಹೋಳಿಗೆ, ಜಾಮೂನು ಹಾಗು ಇನ್ನು ಹಲವು ಭಕ್ಷಾದಿಗಳನ್ನು ಸಾಕು ಸಾಕೆನ್ನುವಷ್ಟು ಉಣಬಡಿಸಿದಳು. ಅದೆಷ್ಟೇ ಕೊಬ್ಬಿ ಕೋಣನಂತಾದರೂ ಹೊಟ್ಟೆಗೆ ಹಿಟ್ಟಿಲ್ಲದ ಬಡಪಾಯಿಯಂತೆಯೇ ಮನೆಯ ಹೊರಗಿರುವ ಅಮ್ಮನ ಮಗ. ಹೊಟ್ಟೆಬಿರಿಯುವಷ್ಟು ತಿಂದು ಮಧ್ಯಾಹ್ನದ ರಣಬಿಸಿಲಿಗೆ ಹೊರಹೋಗಲು ಮನಸ್ಸಾಗದೆ ಸೋಫಾದ ಮೇಲೆ ಮಲಗಿ ಖುಷಿಯ ಮೆಸೇಜುಗಳು ಬಂದಿರಬಹುದೇ ಎಂದು ಕಣ್ಣಾಯಿಸುವಲ್ಲಿಯೇ ನಿದ್ರಾದೇವಿ ಬಂದು ಆತನನ್ನು ಆವರಿಸಿದಳು.

ಕನಸ್ಸಲ್ಲಿ ಖುಷಿ ತನಗಾಗಿ ಶಾಲೆಯ ದೊಡ್ಡಗೇಟಿನ ಬಳಿ ಕಾಯುತ್ತಿರುವಂತೆ, ಆಟವಾಡಲು ಕೈತುಂಬ ಕಲ್ಲುಗಳನ್ನು ಹಿಡಿದು ನಿಂತಿರುವಂತೆ ಕಾಣತೊಡಗಿತು. ಅದೆಷ್ಟೋ ಹೊತ್ತಿನವರೆಗೂ ಆಡಿದ ಆಕೆಗೆ ಪ್ರತಿ ಆಟದಲ್ಲೂ ಗೆಲ್ಲುತ್ತಿದ್ದ ಆದಿಯೊಟ್ಟಿಗೆ ಆಡಲು ಬೇಸರವಾದಂತೆನಿಸಿದಾಗ ದೂರದಲ್ಲಿದ್ದ ಮತ್ಯಾರೋ ಆಕೆಯನ್ನು ಕರೆಯುತ್ತಾರೆ. ಖುಷಿ ಹೇಳದೆಯೇ ಎದ್ದು ಹೋರಡಲು ಅಣಿಯಾಗುತ್ತಾಳೆ. ತನ್ನನ್ನು ಒಬ್ಬನೇ ಬಿಟ್ಟು ಹೊರಡಲು ಅಣಿಯಾದ ಆಕೆಯನ್ನು ಕಂಡು ಆದಿಗೆ ವಿಪರೀತ ಕೋಪ ಬರುತ್ತದೆ. ಖುಷಿ ನೆಡೆಯುತ್ತಾ ದೂರವಾಗತೊಡಗಿದಳು. ಕೂಡಲೇ ಆದಿಯ ಸಿಟ್ಟು ದುಃಖವಾಗಿ ಮಾರ್ಪಡುತ್ತದೆ. 'ಖುಷಿ .. ಹೋಗ್ ಬೇಡ್ವೇ' ಎಂದು ಗದ್ಗದಿತ ಸ್ವರದಲ್ಲಿ ಆತ ಅಳತೊಡಗುತ್ತಾನೆ. ಆದಿಯ ಅಳುವನ್ನೂ ಲೆಕ್ಕಿಸದೆ ಆಕೆ ದೂರವಾದಳು. ತನ್ನ ಅತ್ಯಾಪ್ತ ಆಟಿಕೆಯನ್ನು ಕಳೆದುಕೊಂಡಹಾಗೆ ಆದಿ ನೆಲದ ಮೇಲೆ ಬಿದ್ದು ಒದ್ದಾಡತೊಡಗಿದ. ರೋಧಿಸತೊಡಗಿದ.

'ಆದಿ..!' ಎಂದು ಅಮ್ಮ ಬಂದು ಮೈಯನ್ನು ಅಲುಗಾಡಿಸಿದ ಮೇಲೆಯೇ ಆತನಿಗೆ ಅದು ಕನಸ್ಸೆಂದು ಅರಿವಾದದ್ದು. ಸಂಜೆ ಅದಾಗಲೇ ಐದಾಗಿತ್ತು.

'ಏನಾಯ್ತೋ..?' ಎಂದ ಆಕೆಯ ಪ್ರೆಶ್ನೆಗೆ ಏನಿಲ್ಲವೆನುತ ಎದ್ದು ರೆಡಿಯಾಗಿ ಆಕೆ ಮಾಡಿಟ್ಟ ಘಮಭರಿತ ಕಾಫಿಯನ್ನು ಹೀರಿ ಊರಿನ ಬೆಟ್ಟಕ್ಕೆ ಹೋಗಿ ಸೂರ್ಯಾಸ್ತವನ್ನು ನೋಡಿ ಸಂಜೆ ಹಾರಿಸಲು ಒಂದಿಷ್ಟು ಪಟಾಕಿಗಳನ್ನು ತರಲು ತನ್ನ ಬೈಕನ್ನು ಹೊರಗೆಳೆದ.

**

ಬೆಟ್ಟದ ಆ ಜಾಗ ಆದಿಯ ಸ್ವರ್ಗಬಿಂದು. ಅದರ ತಪ್ಪಲನ್ನು ಮುಟ್ಟುವಾಗಲೇ ಸೂರ್ಯದೇವ ತನ್ನ ದೈನಂದಿನ ಕಾರ್ಯವನ್ನು ಮುಗಿಸಿ ಮರೆಯಾಗಿ ಹೋಗಿದ್ದ. ಆಗಸದಲ್ಲಿ ಮೂಡಿಸಿದ್ದ ಕೆಂಪಾದ ಪ್ರಭೆ ಹಾಗೆಯೇ ಇನ್ನೂ ಥಳಥಳಿಸುತ್ತಿತ್ತು. ಯಾರೊಬ್ಬರೂ ಹೆಚ್ಚಾಗಿ ಬಾರದ ಆ ಜಾಗದಲ್ಲಿ ತನ್ನಿಷ್ಟದ ಹಾಡುಗಳೊಟ್ಟಿಗೆ ಕೆಂದಾವರೆಯಂತಾದ ಆಗಸದಲ್ಲಿ ಕೆಲವೊಮ್ಮೆ ನಕ್ಷತ್ರಗಳು ಹೊಳೆಯುವವರೆಗೂ ಆತ ಅಲ್ಲಿ ನಿಲ್ಲುವುದುಂಟು. ಅದೇನೋ ಒಂದು ಬಗೆಯ ನೆಮ್ಮದಿ ಅಲ್ಲಿ. ದೂರದಿಂದೆಲ್ಲೋ ಖುಷಿಯೂ ನಿಂತು ನನ್ನನ್ನೇ ನೋಡುತ್ತಿರುವಳೆಂಬ ಭಾವನೆ.

ಸಮಯ ಉರುಳಿತು. ಕೂಡಲೇ ಅಮ್ಮನ ಫೋನು. ಮನೆ ಬಿಟ್ಟು ಅದಾಗಲೇ ಎರಡು ತಾಸುಗಳಗಿವೆ. ಸಿಟಿಗೆ ಬಂದು ಒಂದಿಷ್ಟು ಪಟಾಕಿಗಳನ್ನು ಕೊಂಡು ಮನೆಗೆ ಧಾವಿಸಿದ. ಅಮ್ಮನೊಟ್ಟಿಗೆ ಹಬ್ಬವನ್ನು ಆಚರಿಸಿದ. ಖುಷಿಯ ಮನೆಯ ವಿಳಾಸ ತಿಳಿಯದಿದ್ದರೂ ಹೇಗಾದರು ಮಾಡಿ ಹುಡುಕಿದರೆ ಸಿಗುತ್ತಿತ್ತು. ಆದರೆ ತಾನು ಊರಿಗೆ ಬಂದಿರುವುದು ತಿಳಿದಿದ್ದರೂ ಖುಷಿ ಬೇಕಂತಲೇ ಮೆಸೇಜನ್ನು ಮಾಡದಿರುವುದು ಆದಿಯ ಅನುಭವಕ್ಕೆ ಬಂದಿತು. ಬೇಕಾದರೆ ಆಕೆಯೇ ಮಾಡಲಿ ಎಂದು ಸುಮ್ಮನಾದ. ಅಂತೂ ಕಾದು ನೋಡಿ ಕೊನೆಗೆ ಹಬ್ಬದ ರಜೆಯ ದಿನಗಳು ಕಳೆದರೂ ಆಕೆಯ ಮೆಸೇಜು ಬಾರದಿದ್ದದ್ದು ಆತನಿಗೆ ಮುಳ್ಳಿನ ಹಾಸಿಗೆಯ ಮೇಲೆ ಅಂಗಾತ ಮಲಗಿದಂತಾಗಿತ್ತು. ಜೊತೆಗೆ ಆಪ್ಪನೂ ಮನೆಗೆ ಬಾರದಿದ್ದದ್ದು ಆತನಲ್ಲಿ ಕೊಂಚ ದಿಗಿಲನ್ನು ಹುಟ್ಟುಹಾಕಿದರೂ ಆತ ಆದನ್ನು ವ್ಯಕ್ತಪಡಿಸಲಿಲ್ಲ.

ಒಲ್ಲದ ಮನಸ್ಸಿನಲ್ಲಿಯೇ ಬರುವುದಾಗಿ ಹೇಳಿ ಕೆಜಿಗಟ್ಟಲೆ ಮನೆತಿಂಡಿಯನ್ನು ಹೊತ್ತು ಕಾಲೇಜಿಗೆ ವಾಪಸ್ಸಾದ.



****

ಚಚ್ಚಿ ಹೊಡೆಯುವ ರಣಬಿಸಿಲು, ಹಾದಿಯ ಇಬ್ಬದಿಗೂ ಕಿಕ್ಕಿರಿದು ಅಂಟಿಕೊಂಡಿರುವ ಗೂಡಂಗಡಿಗಳ ಸಾಲು, ರಸ್ತೆಯನ್ನೇ ಆಟದ ಮೈದಾನವನ್ನಾಗಿ ಮಾಡಿಕೊಂಡಿರುವ ಮಕ್ಕಳ ಸಂತೆ ಹಾಗು ತಮ್ಮ ಶಕ್ತಿಯನ್ನೆಲ್ಲ ವ್ಯಹಿಸಿ ರಾಶಿ ರಾಶಿಯಾಗಿ ಹೊಗೆಯನ್ನುಗುಳುವ ಮೋಟಾರುಗಳು. ಇವೆಲ್ಲವನ್ನು ನೋಡಿದಾಗ ಶತಮಾನಗಳಷ್ಟು ಹಳೆಯ ಜಗತ್ಪ್ರಸಿದ್ದ ದೇವಾಲಯವೊಂದು ಇಲ್ಲಿದೆ ಎಂದು ನಂಬಲೇ ಸಾಧ್ಯವಾಗದು. ದಾರಿಗೆ ಅಡ್ಡಲಾಗಿ ಬರುತ್ತಿದ್ದ ನಾಯಿ, ಬೆಕ್ಕು ಹಾಗು ಸಹನೆಯನ್ನೇ ಮರೆತಿರುವ ಮಾನವರೆಲ್ಲರನ್ನು ತನ್ನ ಬೈಕಿನ ಮೊದಲ ಗೇರಿನಲ್ಲಿಯೇ ದಾಟಿ ಆಗಸವನ್ನು ಚುಂಬಿಸುವಂತೆ ನಿಂತಿದ್ದ ದೇವಾಲಯದ ಭವ್ಯರಮಣೀಯ ವಿಮಾನ ನನ್ನನ್ನು ಮಾತುಮರೆತ ವ್ಯಕ್ತಿಯನ್ನಾಗಿಸಿತು. ಇಂಟರ್ನೆಟ್ಟಿನಲ್ಲಿ ಬಹಳ ಬಾರಿ ದೇವಾಲಯದ ಬಗೆಗೆ ಅದೆಷ್ಟೇ ಓದಿ ಅರಿತಿದ್ದರೂ ಇಂದು ಕಣ್ಣೆದುರಿಗೇ ಪ್ರತ್ಯಕ್ಷವಾದಂತಹ ಈ ವಿಹಂಗಮ ಆಕೃತಿ ನನ್ನ ವರ್ಣನೆಗೆ ನಿಲುಕದಂತಾಯಿತು. ಮಧ್ಯಾಹ್ನದ ರಣಬಿಸಿಲು ಜೊತೆಗೆ ದೇವಾಲಯದ ಸಂದಿಗೊಂದಲದಲ್ಲೂ ಕಿಕ್ಕಿರಿದು ನೆರೆದಿರುವ ಪ್ರವಾಸಿಗರ ಗದ್ದಲವನ್ನು ಕಂಡು ಹೊತ್ತು ಕಳೆದು ಸಂಜೆಯಾದ ಮೇಲೆಯೇ ದೇವಾಲಯವನ್ನು ಪ್ರವೇಶಿಸುವುದಾಗಿ ತೀರ್ಮಾನಿಸಿ ಹತ್ತಿರದಲ್ಲಿ ಉಳಿದುಕೊಳ್ಳಲು ರೂಮಿನ ವ್ಯವಸ್ಥೆಯನ್ನು ನೋಡತೊಡಗಿದೆ.

ಗೆಳೆಯನೊಬ್ಬನ ರಾಯಲ್ ಏನ್ಫೀಲ್ಡ್ ಬೈಕನ್ನು ಪಡೆದು ಎರಡು ತಿಂಗಳ ಮಟ್ಟಿಗೆ ದೇಶ ಪರ್ಯಟನೆ ಎಂದು ಹೊರಟ ನಾನು ಧಕ್ಷಿಣ ಭಾರತದಿಂದಿಡಿದು ಉತ್ತರ ಭಾರತದ ತುತ್ತತುದಿಯ ಸಾಧ್ಯವಾದಷ್ಟು ದೇವಾಲಯಗಳಿಗೆ ಹೋಗುವುದೆಂದು ತೀರ್ಮಾನಿಸಿದ್ದೆ. 'ಸೋಲೋ ಟ್ರಿಪ್' ಎಂದಷ್ಟೇ ಹೇಳಿ ಹೊರಟಿದ್ದೆ. ಬಹುಶಃ ದೇವಾಲಯಗಳ ಯಾತ್ರೆ ಎಂದಿದ್ದರೆ ಆದಿಯೂ ಜೊತೆಗೂಡುತ್ತಿದ್ದನೇನೋ ತಿಳಿಯದು.

ಅದರಂತೆ ದಕ್ಷಿಣ ವಾರಣಾಸಿಯ ಈ ಚೆನ್ನಕೇಶವ ದೇವಾಲಯ ನನ್ನ ಯಾತ್ರೆಯ ಮೊದಲ ಶಾಂತಿಕೇಂದ್ರ.

ಮೊದಲೇ ತೀರ್ಮಾನಿಸಿದಂತೆ ಅದೆಷ್ಟೇ ಕಷ್ಟಗಳಾದರೂ ಸರಿಯೇ ದೇವಾಲಯಗಳನ್ನು ನಾನು ಒಂದೋ ಬೆಳಗಿನ ತಿಳಿ ಜಾವದಲ್ಲೋ ಅಥವಾ ಸಂಜೆಯ ಶಾಂತ ಸಮಯದಲ್ಲೂ ನೋಡಬೇಕೆಂಬುದೆ ಆಗಿದ್ದಿತು. ಸಂಜೆ ಸುಮಾರು ಆರಕ್ಕೆ ಸ್ನಾನಾದಿಗಳನ್ನು ಮುಗಿಸಿ ದೇವಾಲಯಕ್ಕೆ ಬಂದು ಗರ್ಭಗುಡಿಯ ಬಳಿಯೂ ಅಥವಾ ದೇವಾಲಯದ ಮತ್ಯಾವುದೋ ಜನರಹಿತ ಜಾಗದಲ್ಲಿ ಶಾಂತವಾಗಿ ಕೂತು ಓಂಕಾರವನ್ನು ಗುನುಗುತ್ತಾ ಧ್ಯಾನವನ್ನು ಮಾಡತೊಡಗಿದರೆ ಆಗಸವನ್ನು ಸೀಳಿ ಇಡೀ ಬ್ರಹ್ಮಾಂಡದಿಂದ ಬಲುದೂರಕ್ಕೆ ಹೋದಂತಹ ಅವರ್ಣೀಯ ಸುಖಾನುಭವ. ಅದೇನು? ಅದೇಕೆ? ನನಗೆ ತಿಳಿಯುವುದಿಲ್ಲ. ಆದರೆ ನನ್ನ ಆ ಧ್ಯಾನ ಯಾರಿಂದಲೋ ಆಮಂತ್ರಣವೊಂದನ್ನು ಪಡೆದಂತೆ ಭಾಸವಾಗುತ್ತಿತ್ತು.

ಅಲ್ಲದೆ ಪ್ರತೀ ದೇವಾಲಯದ ಇತಿಹಾಸವನ್ನು ಓದಿ ಅಲ್ಲಿನ ಪ್ರತಿಯೊಂದು ವಿಷಯಗಳನ್ನು ಕಣ್ಣಾರೆ ನೋಡಿ ಒರೆಹಚ್ಚಿ ಅನುಭವಿಸತೊಡಗಿದೆ. ಹೀಗೆ ಮಾಡುವಾಗ ಶತಮಾನಗಳಷ್ಟು ಹಿಂದಿನ ಶಿಲ್ಪಿಗಳು, ಕವಿಗಳು, ರಾಜರು ನನ್ನನ್ನು ನೋಡಿ ಮಂದಹಾಸವನ್ನು ಬೀರುತ್ತಿರುವರೆಂಬ ಅನುಭವ. ಅವರು ಹೇಗಿದ್ದಿರಬಹುದು, ನಾಟ್ಯರಾಣಿ ಶಾಕುಂತಲೆ ನೈಜವಾಗಿ ಅದೇಗೆ ಕಂಗೊಳಿಸುತ್ತಿದ್ದಿರಬಹುದು, ಚೀವಿಂಗ್ ಗಮ್ಮಿಗಿಂತಲೂ ನಯವಾಗಿ ಕಲ್ಲುಗಳನ್ನು ತಿದ್ದಿ ತೀಯುವ ಕಲೆಗಾರರ ನಗುವಿನ ಹಿಂದಿರುವ ಆ ಮರ್ಮವಾದರೂ ಏನು, ಅವರು ಇಷ್ಟೆಲ್ಲಾ ಕೆತ್ತನೆಗಳನ್ನು ಮಾಡಿರುವಾಗ ಏನಾದರು ಮಹತ್ತರವಾದ ಸುಳಿವನ್ನು ರಹಸ್ಯವನ್ನು ಕೆತ್ತಿ ಮರೆಯಾಗಿರುವರೆ?ನಾನದನ್ನು ಪತ್ತೆ ಹಚ್ಚ ಬಲ್ಲೇನೆ ಎಂಬ ಅನೇಕಾನೇಕ ಪ್ರೆಶ್ನೆಗಳು ಮನದೊಳಗೆ ಮೂಡಿ ಮರೆಯಾಗತೊಡಗುವವು.

ಹೀಗೆ ದೇವಾಲಯವೊಂದಕ್ಕೆ ಒಂದೋ ಅಥವಾ ಕೆಲವು ಬಾರಿ ಎರಡು ದಿನಗಳನ್ನು ಮೀಸಲಿಡತೊಡಗಿದೆ.

ದಕ್ಷಿಣ ವಾರಣಾಸಿಯ ಚೆನ್ನಕೇಶವ ದೇವಸ್ಥಾನ ದ್ವಾರಸಮುದ್ರದ ದೇವಾಲಯದ ಮಂತ್ರತೆಯನ್ನೇ ತನ್ನೊಳಗೆ ಹಿಡಿದುಕೊಂಡಿದೆ. ಹೊರಗಿನ ಸಾಮಾಜಿಕ ಪರಿಸರ ಅದೇನೇ ಇದ್ದರೂ ಎಲ್ಲಿಲ್ಲದ ಶಾಂತತೆ ದೇವಾಲಯದೊಳಗೆ. ಬೆಳಗಿನ ಹಾಗು ಸಂಜೆಯ ಇಳಿಬಿಸಿಲಿನಲ್ಲಿ ದೇವಾಲಯವನ್ನು ಅನುಭವಿಸುವುದಾದರೆ, ಮಧ್ಯಾಹ್ನದ ಹೊತ್ತು ಆ ದೇವಾಲಯದ ಬಗೆಗೆ ಪುಸ್ತಕಗಳಲ್ಲೊ ಅಥವಾ ಇಂಟರ್ನೆಟ್ಟಿನಲ್ಲೂ ಓದುವುದು ಹಾಗೆ ಒಂದರೆಹೊತ್ತು ವಿಶ್ರಾಂತಿ. ಸಂಜೆಯ ಸೂರ್ಯ ಕಣ್ಮರೆಯಾದ ಕೆಲವು ತಾಸುಗಳ ನಂತರ ದೇವಾಲಯದ ಪ್ರಾಂಗಣದಲ್ಲಿ ತಂಪುಗಾಳಿಯ ಹಿತಾನುಭವದಲ್ಲಿ ನಭದ ರಾಶಿ ರಾಶಿ ನಕ್ಷತ್ರಗಳ ಕೆಳಗೆ ಅತ್ತಿಂದ್ದಿತ್ತ ಇತ್ತಿಂದ್ದತ್ತ ವಿಹಾರಿಸತೊಡಗಿದರೆ ಹೊತ್ತು ಕಳೆಯುವುದೇ ತಿಳಿಯುವುದಿಲ್ಲ. ಏರಿಳಿತಗಳಿಲ್ಲದ ತಿಳಿಯಾದ ತೊರೆಯೊಂದರ ಮೇಲಿನ ಹೂವಿನ ಅನುಭವ. ಅಲ್ಲದೆ ದೇವಾಲಯ ಹೊರಕ್ಕೂ ಹಾಗು ಒಳಕ್ಕೂ ಬರುವ ಹೋಗುವ ರಾಶಿ ರಾಶಿ ಬಗೆ ಬಗೆಯ ಹೂವುಗಳ ಸುಗಂಧ. ಆಹಾ.. ಜಗತ್ತಿನ ಸರ್ವ ಸುಖಗಳೂ ಸಹ ಏನಿಲ್ಲ ಇದರ ಮುಂದೆ. ರಾಜವೈಭೋಗವೆಂದರೆ ಇದೆಯೇ?

ಅಂದು ದೇವಾಲಯದ ಉಸ್ತುವರಿಯ ಜನ ಬಂದು ಹೊರಗೆ ಕರೆದುಕೊಂಡು ಹೋಗದಿದ್ದರೆ ರಾತ್ರಿಯಿಡಿ ಅಲ್ಲೇ ನೆಡೆದಾಡುತ್ತ ಇರುತ್ತಿದ್ದನೇನೋ?!!. ಬೆಳಗ್ಗೆ ಬೇಗನೆ ಎದ್ದು ದೇವಾಲಯಕ್ಕೊಂದು ಪ್ರದಕ್ಷಿಣೆ ಬಂದು, ಅರೆ ಹೊತ್ತು ಧ್ಯಾನ ಮಾಡಿ ಮೋಡಗಳನ್ನು ಕೊರೆದು ಉದಯಿಸುತ್ತಿದ್ದ ರವಿಯ ಜಾಡನ್ನು ಹಿಡಿದು ಅಹಿರ್ ಭೈರವಿ ರಾಗವನ್ನು ಕೇಳುತ್ತಾ ಬೈಕಿನ ವೇಗವನ್ನು ಹೆಚ್ಚಿಸಿದೆ…

.

****



ಒಂದರಿಂದೊಂದು ಪಟಪಟನೆ ಮೂಡುತ್ತಿದ್ದ ಮೆಸೇಜುಗಳನ್ನು ಓದಿ ಯಾವ ಮೆಸೇಜಿಗೂ ಉತ್ತರಿಸುವ ಗೋಜಿಗೆ ಹೋಗದ ಆದಿ ಫೋನನ್ನು ತನ್ನ ಬದಿಗೆ ಎಸೆಯುತ್ತಿದ್ದನ್ನು ಏನೆಂದು ಕೇಳಿದ ಲೊಕೇಶನ ಪ್ರೆಶ್ನೆಗೆ ಏನನ್ನೂ ಉತ್ತರಿಸದೆ, ನಾಳೆ ಬೆಳಗ್ಗೆ ಆದಷ್ಟು ಬೇಗನೆ ರನ್ನಿಂಗ್ ಟ್ರ್ಯಾಕ್ ಗೆ ಹೋಗೋಣವೆಂದು ಅಲರಾಮನ್ನು ಬೆಳಗ್ಗೆ ಐದು ಘಂಟೆಗೆ ಹೊಂದಿಸಿ ಮಲಗಿದ. ತನ್ನ ಹಾಗು ಖುಷಿಯ ವಿಷಯವಾಗಿ ಹೆಚ್ಚೇನೂ ಯಾರೊಟ್ಟಿಗೂ ಹೇಳದಿದ್ದರೂ ಲೊಕೇಶನಂತಹ ಪರಾಕ್ರಮಿಗೆ ಇಂತಹ ಗುಪ್ತ ಕೋಟೆಯೊಳಗೆ ಭೇದಿಸುವುದು ಕಷ್ಟದ ಕೆಲಸವೇನಲ್ಲ. ಆದಿ ಮಲಗಿದ ಕೆಲ ನಿಮಿಷಗಳಲ್ಲಿಯೇ ಆತನ ಫೋನನ್ನು ತೆಗೆದು ಇವರಿಬ್ಬರ ಶೀತಲ ಸಮರದ ಸಂಭಾಷಣೆಗಳನ್ನು ಓದುತ್ತಾ ಆತ ನಗತೊಡಗಿದ. ತನ್ನ ಹಾಗು ಶಶಿಯ ಚಿಕ್ಕದಾದ ಹಾಗು ಅಷ್ಟೇ ಚೊಕ್ಕವಾದ ಸಂಭಾಷಣೆಗಳ ಮುಂದೆ ಇವುಗಳು ಎಂದಿಗೂ ಮುಗಿಯದ ಧಾರವಾಯಿಗಳಂತೆ ಇಲ್ಲ ಸಲ್ಲದ ಪ್ರೆಶ್ನೆಗಳು, ಸಿಡುಕಿನ ಉತ್ತರಗಳು ಹಾಗು ಮಕ್ಕಳಾಟಿಕೆಯಂತಹ ಜಗಳಗಳಿಂದ ಕೂಡಿದ್ದವು. ದೀರ್ಘವಾದ ಏದುಸಿರನ್ನು ಬಿಡುತ್ತಾ ಆತನ ಫೋನನ್ನು ಬದಿಗಿರಿಸಿದ. ಕೂಡಲೇ 'ಟನ್ ..' ಎಂಬ ಸದ್ದಿನೊಂದಿಗೆ ಮತ್ತೊಂದು ಮೆಸೇಜ್ ಬಂದಿತಾದರೂ ಆತ ಅದನ್ನು ಓದಲಿಲ್ಲ. ಏಕೆ ಈ ಪುಣ್ಯಾತ್ಮ ಆಕೆಯನ್ನು ಅಷ್ಟೊಂದು ಹಚ್ಚಿಕೊಂಡಿದ್ದಾನೆ ಎಂದು ಗಹನವಾಗಿ ಯೋಚಿಸತೊಡಗಿದ.

ಬೆಳಗ್ಗಿನ ಸರಿಯಾಗಿ ಐದಕ್ಕೆ ಎದ್ದು ಇನ್ನೂ ಮಲಗಿದ್ದ ಲೊಕೇಶನನ್ನು ಬಡಿದೇಳಿಸಿ ಡಿಸ್ಟ್ರಿಕ್ಟ್ ಫೀಲ್ಡ್ ಗೆ ಹೋದ ಆದಿ ತನ್ನೆಲ್ಲ ಶಕ್ತಿಯನ್ನು ಮೀರಿ ಓಡತೊಡಗಿದ. ಆತನ ಓಟವನ್ನು ನೋಡುತ್ತಾ ಲೋಕೇಶ 'ಶೋಲ್ಡರ್ ರಿಲಾಕ್ಸ್ .. ಡೋಂಟ್ ಬೌನ್ಸ್..' ಎನ್ನುತ ಪದೇ ಪದೇ ಅರಚತೊಡಗಿದ. ಆದರೆ ಆದಿ ಕೇಳಲಿಲ್ಲ. ಏನೋ ಮಾಡಬಾರದ ತಪ್ಪನ್ನು ಮಾಡಿ ತನ್ನ ದೇಹಕ್ಕೆ ತಾನೇ ದಂಡಿಸಿಕೊಳ್ಳುವನಂತೆ ಓಡಹತ್ತಿದ. ಲೊಕೇಶನ ಕೋಪ ನತ್ತಿಗೇರತೊಡಗಿತು. ಆದಿ ನಾಲ್ಕು ಸುತ್ತು ಓಟವನ್ನು ಓಡಿ ಬಂದು ಲೊಕೇಶನ ಕೈಯಲ್ಲಿದ್ದ ಟೈಮರನ್ನು ತೆಗೆದು ನೋಡಿದರೆ ಅದು 48 ಸೆಕೆಂಡ್ಗಳನ್ನು ತೋರಿಸುತ್ತಿತ್ತು.

'ಪರ್ವಾಗಿಲ ಅಲ .. Improved almost 6 ಸೆಕೆಂಡ್ಸ್..' ಎಂದ ಆದಿ.

'ನಿನ್ ತಲೆ! ಮಗ್ನೆ, ನಾನ್ ಇಲ್ಲಿ ಅರ್ಧ ನಿದ್ರೇಲಿ ಎದ್ದು ಇಲ್ಲಿಗೆ ಬರೋದು ನೀನ್ ಹುಚ್ಚ್ ಕುದ್ರೆ ತರ ಓಡೋದನ್ನ ನೋಡೋಕ್ ಅಲ್ಲ .. ಸ್ವಲ್ಪನಾದ್ರೂ ಪ್ರೆಸೆನ್ಸ್ ಆಫ್ ಮೈಂಡ್ ಅನ್ನೊದಿರ್ಲಿ..' ಎಂದು ತನ್ನ ಕೈಲಿದ್ದ ಟವೆಲ್ ಅನ್ನು ನೆಲಕ್ಕೆ ಬಡಿದು ಕೂಡಲೇ ಅಲ್ಲಿಂದ ರೂಮಿನೆಡೆಗೆ ನೆಡೆದ . ಆತನ ಮಾತುಗಳಿಗೆ ಹೆಚ್ಚೇನೂ ತಲೆಗೆಡಿಸಿಕೊಳ್ಳದ ಆದಿ ಮತ್ತೊಮ್ಮೆ ಓಡಲು ಅಣಿಯಾದ.

ಊರಿಗೆ ಹೋದಾಗ ಖುಷಿಯ ಮುಖದರ್ಶನವಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಇಷ್ಟೆಲ್ಲಾ ಕೋಪವೇ? ಆ ಸಿಟ್ಟನ್ನು ಓಟದ ಮೇಲೆ ಹಾಕಿ ಏದುಸಿರಿನಿಂದ ಮೂಡುವ ನೋವನ್ನು ಮರೆಮಾಚಬಹುದು. ಆದರಿಂದಲೇ ಹೀಗೆ ಶಕ್ತಿಯನ್ನೆಲ್ಲ ಬಿಟ್ಟು ಓಡುವುದು. ಪ್ರತಿ ಬಾರಿಯೂ ಆಕೆಯನ್ನು ನೆನೆದರೆ ಎಲ್ಲಿಲ್ಲದ ಕೋಪ. ಇಡೀ ಭೂಮಂಡಲವನ್ನೇ ನಾಲ್ಕು ನಿಮಿಷಗಳಲ್ಲಿ ಓಡಿ ಮುಗಿಸಬೇಕೆಂಬ ಹಠದ ಭಾವನೆಗಳು ಆತನೊಳಗೆ ಒಮ್ಮಿಂದೊಮ್ಮೆಗೆ ಮೂಡುತ್ತವೆ. ಆದರೆ ಹೀಗೆ ಮಾಡುವುದರಿಂದ ಖುಷಿ ನನ್ನಿಂದ ಇನ್ನೂ ದೂರವಾಗುತ್ತಾಳೆ ಎಂದೆನಿಸಿ ಕೂಡಲೇ ಗದ್ಗದಿಸತೊಡಗುತ್ತಾನೆ. ಬೆಂಕಿಗೆ ತುಪ್ಪವನ್ನು ಚುಮುಕಿಸಿದಂತೆ ಮನೆಯ ಕಷ್ಟಗಳೂ ಆಗ ಕಣ್ಣ ಮುಂದೆ ಬರುತ್ತವೆ. ನಂತರದ ಕೆಲ ಕ್ಷಣಗಳಲ್ಲೇ ಜೀವನದಲ್ಲಿ ಏನೇನೂ ಬೇಡವೆಂಬ ಶುಷ್ಕ ಭಾವವೊಂದು ಮೂಡುತ್ತದೆ. ಏನು ಮಾಡಬೇಕೆಂದು ತೋಚದೆ ಪುನ್ಹ ಓಡಲು ಅಣಿಯಾಗುತ್ತಾನೆ.

ದಿನಗಳು ಸಾಗಿದಂತೆ ಆದಿಯ ಚಿಂತೆಯೂ ವಿಪರೀತವಾಯಿತು. ಅದೇನೇ ಆಗಲಿ ತನ್ನ ಅಹಂ ಎಲ್ಲವನ್ನೂ ಬದಿಗಿಟ್ಟು ಒಮ್ಮೆಲೆ ಆಕೆಗೆ ಫೋನಾಯಿಸಿ ಕ್ಷಮೆಯಾಚಿಸಬೇಕೆಂದುಕೊಳ್ಳುತ್ತಾನೆ. ಅದೆಷ್ಟೇ ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗುವುದಿಲ್ಲ. ಬರಿ ಮೆಸ್ಸೇಜುಗಳಲ್ಲೇ ಅವರ ಶೀತಲಯುದ್ಧ ಮುಂದುವರೆಯುತ್ತದೆ. ಇತ್ತ ಕಡೆ ಅಪ್ಪ ಇನ್ನೂ ಮನೆಗೆ ವಾಪಸ್ಸಾಗಲಿಲ್ಲವೆಂಬ ಅಮ್ಮನ ಆತಂಕದ ಫೋನುಗಳು. 'ಎರ್ಡ್ ವಾರ ಆಯಿತೋ .. ಫೋನು ಇಲ್ಲ ಏನೂ ಇಲ್ಲ..' ಎನ್ನುತ ಆಕೆ ಹೇಳತೊಡಗಿದರೆ ಆದಿಗೆ ಎಲ್ಲಿಲ್ಲದ ದಿಗ್ಭ್ರಮೆ. ಅಪ್ಪ ಇರುವವರೆಗೂ ಹಾವು ಮುಂಗುಸಿಯಂತೆ ಕಚ್ಚಾಡುವ ಜನ ಎರಡು ವಾರಕ್ಕೇ ಆತಂಕಗೊಳಗಾಗುವರೇ? ಅಪ್ಪ ಬಾರದೆ ಇದ್ದರೆ ಒಳ್ಳೆಯದು ಎಂದುಕೊಂಡವನಿಗೆ ಈಗ ಅಮ್ಮನ ಒತ್ತಡದ ಮೇರೆಗೆ ದೂರದ ನೆಂಟರಿಷ್ಟರೆಲ್ಲರಿಗೂ ಫೋನಾಯಿಸುವ ಕಷ್ಟದ ಕಾಯಕ ಬಂದೊದಗಿತು. 'ಏನೂ ಆಗಲ್ಲ ನಾನ್ ವಿಚಾರಿಸ್ತಿನಿ, ಸುಮ್ನಿರು..' ಎಂದೇಳಿ ಫೋನನ್ನು ಇರಿಸತೊಡಗಿದ. ಆದರೆ ಇದ್ದೆಲ್ಲ ನೆಂಟರಿಷ್ಟರ ಮೆನೆಗಳಿಗೆಲ್ಲ ಫೋನಾಯಿಸಿದರೂ ಅಪ್ಪನ ಸುದ್ದಿಯಿರಲಿಲ್ಲ. ಹಿಂದೊಮ್ಮೆ ಹೀಗೆಯೇ ಹಲವು ದಿನಗಳ ಕಾಲ ಮೆನೆಯಲ್ಲಿರದೆ ಕೊನೆಗೆ ಪಕ್ಕದ ಊರಿನ ಕಾಡಿನೊಳಗಿರುವ ದೇವಾಲಯವೊಂದರಲ್ಲಿ ಅಡಿಗೆ ಮಾಡಿಕೊಂಡು ವಾಸವಿದ್ದು ಕೊನೆಗೆ ಕಾಡಿ ಬೇಡಿ ಮನೆಗೆ ಕರೆತಂದಿದ್ದು ಆತನಿಗೆ ನೆನಪಾಯಿತು.

ಆದಿ ಏಕಾಂತದಲ್ಲಿ ಹೀಗೆ ಯೋಚಿಸುತ್ತಿರುವಾಗ ಒಮ್ಮೊಮ್ಮೆ ತಾನು ಅಪ್ಪನನ್ನು ಅಷ್ಟಾಗಿ ದ್ವೇಷಿಸುವುದೇಕೆಂಬುವುದೇ ಆತನಿಗೆ ಅರಿವಾಗುವುದಿಲ್ಲ. ಆತನ ಮಾತುಗಳು ಒರಟಾದರೂ ಅವು ತನ್ನ ಸ್ಕೂಲಿನ ಪಿಟಿ ಮೇಷ್ಟರ ಪೆಟ್ಟಿನಂತೆ ಒಂದು ಹದ್ದುಬಸ್ತನ್ನು ತಂದಿಡುತ್ತಿದ್ದವು. ಅಂದು ಆದಿ ಶಾಲೆಯಲ್ಲಿಯೇ ಉತ್ತಮ ವಿದ್ಯಾರ್ಥಿ ಎಂದು ಗುರುತಿಸಿಕೊಳ್ಳಲು ಅಪ್ಪನ ಭಯವೆಂಬ ಚುಚ್ಚುಮದ್ದು ಬಹುವಾಗಿಯೇ ಸಹಾಯ ನೀಡಿತ್ತು ಎಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ. ಮುಂಗೋಪಿ , ಕೋಪಿಷ್ಠ. ಅದಕ್ಕೂ ಕಾರಣಗಳು ಹಲವಿರಬಹುದು. ಅಮ್ಮನ ಮಾತುಗಳೇ ಹಾಗೆ. ಮೈಮೇಲೆ ಕೆಂಡವನ್ನು ಸುರಿದಂತೆ. ಅವುಗಳನ್ನು ಕೇಳಿ ಕೂಡಲೇ ಮದವೇರಿದ ಗಜದಂತೆ ಆಡಿದರೂ ಆತನಿಗೆ ಈಕೆಯನ್ನು ಮಾತಿನಲ್ಲಿ ಸೋಲಿಸಲಾಗದು. ಆ ಸಿಟ್ಟಿನಲ್ಲೆ ಎಲ್ಲವನ್ನು ಬಿಟ್ಟು ದೂರ ಹೋಗುತ್ತಾನೆ. ಹಳೆಯ ಗುಡಿ ಗೋಪುರಗಳು, ಪಾಳು ಬಿದ್ದ ದೇವಾಲಯಗಳು ಆತನ ಏಕಾಂತದ ವಾಸಸ್ಥಾನ. ಅಲ್ಲದೆ ಕೆಲವೊಮ್ಮೆ ಕುಡಿದಾಗ ಆದಿಯೊಟ್ಟಿಗೆ ಮಾತಿನ ತತ್ವಯುದ್ಧಕ್ಕಿಳಿದರೆ ಆತನ ಮಾತುಗಳ ಆಳ ಆದಿಯ ಊಹೆಗೂ ನಿಲುಕದಾಗಿರುತ್ತದೆ. ಒಂದು ಪಕ್ಷ ಆತ ಅಮ್ಮನನ್ನು ಬೈಯದಿದ್ದರೆ, ಶಪಿಸದಿದ್ದರೆ ಬಹುಷಃ ಆದಿ ಆತನಲ್ಲಿ ಬೇರೊಬ್ಬ ಮಹಾಪುರುಷನನ್ನೇ ಕಾಣುತ್ತಿದ್ದನೇನೋ? ಅದೊಂದು ದಿನ ಟಿವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮವೊಂದನ್ನು ನೋಡಿ ಮೊದಲ ಬಾರಿ ಎಂಬಂತೆ 'ಎಲ್ಲ ಬರಿ ಫೇಕು .. ಡ್ರಾಮಾ .. ಥು ಇವ್ರ ಜನ್ಮಕ್ಕೆ..' ಎಂದು ಚರ್ಚಾಕೂಟದಲ್ಲಿ ಬಾಗಿಯಾಗಿದ್ದ ಪಾನಾಲಿಸ್ಟ್ಗಳನ್ನು ನೋಡಿ ಬೈಯ್ಯತೊಡಗಿದ. ಗೋರಕ್ಷಣೆಯ ಬಗ್ಗೆ ಜರುಗುತ್ತಿದ್ದ ಆ ಚರ್ಚಾಕೂಟವನು ನೋಡುತ್ತಿದ್ದ ಆದಿ ಏಕೆಂದು ಕೇಳಿದರೆ, 'ಇನ್ನೇನು ಮತ್ತೆ. ರಕ್ಷಣೆ ಗೋವುಗಳಿಗೆ ಮಾತ್ರ ಸಾಕ. ದಿನ ಕೆ ಎಫ್ ಸಿ, ಮೆಕ್ಡಿ , ಮಣ್ಣು ಮಸಿ ಅಂತ ರಾಶಿ ರಾಶಿ ನುಂಗುವ ಕೋಳಿಗಳಿಗಾಗಲಿ, ಮೀನುಗಳಿಗಾಗಲಿ, ಹಂದಿ ಕುರಿಗಳಿಗಾಗಲಿ ಬೇಡವ? ಕಪಟ ಮನಸ್ಸಿನ ಮಾನವ ತನ್ನ ಬೇಳೆ ಬೇಯಿಸ್ಕೊಳ್ಳೋಕೆ ಎಷ್ಟ್ ಬೇಕೋ ಅಷ್ಟೇ ಮಾತ್ರ ಮಾತಾಡ್ತಾನೆ. ಅಲ್ಲಿರೋ ಒಬ್ರಲ್ಲೂ ನಿಜತ್ವ ಇಲ್ಲ. ಅವರ ಕಣ್ಣುಗಳನ್ನು ನೋಡಿದ್ರೇನೇ ನಾನ್ ಹೇಳ್ತಿನಿ. ಇತಿಹಾಸ ಪುರಾಣಗಳಲ್ಲಿ ಬಾರದ ಮಾತ್ರಕ್ಕೆ ಬೇರೆ ಜೀವಗಳು ಕರಿದ ರುಚಿಕರವಾದ ಸ್ವಾದಿಷ್ಟ ಭೋಜನಗಳು. ಅಲ್ಲಿರೋ ಒಬ್ಬನಾದ್ರು ನಿಜ ಮಾತಾಡಿದರೆ, ಒಳಗಿದ್ದದ್ದನ್ನು ಇದ್ದಹಾಗೆಯೇ ಕಕ್ಕಿದರೆ ನಾನು ಮೀಸೆ ಬೋಳಿಸಿಕೊಳ್ತೀನಿ' ಎಂದು ಹೇಳಿದ ಮಾತುಗಳೂ ಆತನಿಗೆ ನೆನಪಾಗತೊಡಗಿದವು.



Continues ....

Sunday, July 26, 2020

ಪಯಣ - 13

ಲೆಕ್ಕಾಚಾರವೆಲ್ಲ ತಲೆಕೆಳಗಾದ ಯುವಜನರ ಹುಲಿ ಅಳುತ್ತಲೇ ನಗುವಂತೆ ನಟಿಸುತ್ತಾ ತನ್ನ ಕುರ್ಚಿಯ ಮೆಲೋಗಿ ಆಸೀನವಾಯಿತು. 

'ಆತನ ಹೆಸರು ಮನೋಜ್ ಕುಮಾರ್ ಪಾಂಡೆ... ವಯಸ್ಸು ಜಸ್ಟ್ ಇಪ್ಪತ್ತರ ಆಸು ಪಾಸು .. ಪುಣೆಯಲ್ಲಿರೋ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಇಂಟರ್ವ್ಯೂ ಕೊಡೋಕ್ಕೆ ಬಂದಿದ್ದಾನೆ.. ಯಾರಿಗಾದ್ರೂ ಗೊತ್ತಿದ್ಯಾ ಈ ಅಕಾಡೆಮಿ ಏನ್ ಮಾಡುತ್ತೆ ಅಂತ..' ಎಂದು ಕೇಳಿದ ಲೋಕೇಶ ನೆರೆದಿದ್ದ ಅಷ್ಟೂ ಜನರನ್ನು ಒಮ್ಮೆ ನಿಧಾನವಾಗಿ ನೋಡಿದ. ಕೇವಲ ಗುಸುಗುಸು ಪಿಸುಪಿಸುಗಳನ್ನು ಬಿಟ್ಟರೆ ಯಾರಿಂದಲೂ ಈತನ ಪ್ರೆಶ್ನೆಗೆ ಉತ್ತರ ಬರಲಿಲ್ಲ. ಬಹುಶಃ ಗೊತ್ತಿದ್ದರೂ ಯಾಕೋ ಅಲ್ಲಿನ 'ಸತ್'ಪ್ರಜೆಗಳು ಉತ್ತರಿಸಲು ಹೆಣಗುತ್ತಿದ್ದರು ಅಥವಾ ಹೆದರುತ್ತಿದ್ದರು. ಯಾರೊಬ್ಬರಿಂದಲೂ ಉತ್ತರ ಬಾರದಿದ್ದಾಗ ಲೋಕೇಶ ಸ್ಟೇಜಿನ ಮೇಲೆ ತಿರುಗಿದ. ಬೆಳಗಿನ ಲೆಕ್ಕಾಚಾರವೆಲ್ಲ ತಪ್ಪಿ ಸಿಟ್ಟಿನ ಕೂಪದಲ್ಲಿದ್ದ ಜಿಲ್ಲೆಯ ನಾಯಕರನ್ನು ನೋಡಿದ. ಆದರೆ ಅವರು ತಾವ್ಯಾಕೆ ಈ ಪುಡುಗೋಸಿ ಯುವಕನ ಪ್ರೆಶ್ನೆಗೆ ಉತ್ತರಿಸಬೇಕು ಎನ್ನುವಂತೆ ಸುಮ್ಮನೆ ಕುಳಿತ್ತಿದ್ದರು. ಕೆಲವರು ತಮ್ಮ ಕೈಗಡಿಯಾರವನ್ನು ತೋರುತ್ತಾ ಸಮಯ ಮೀರುತ್ತಿದ್ದೆ ಎಂಬ ಮೂಕ ಸಂದೇಶವನ್ನು ನೀಡುತ್ತಿದ್ದರು. ಹುಲಿಯ ನಾಮಾಂಕಿತದ ನಾಯಕನೂ ಎಲ್ಲಿ ತನ್ನನ್ನು ಎದ್ದು ನಿಲ್ಲಿಸಿ ಕೇಳುತ್ತಾನೋ ಎಂಬ ಭಯದಲ್ಲಿ ತಮ್ಮ ಮೊಬೈಲಿನಲ್ಲಿ ಮುಳುಗಿ ಮಗ್ನನಾದಂತೆ ನಟಿಸತೊಡಗಿದ.

'ಇಂಟರ್ವ್ಯೂ ತೆಗೆದುಕೊಳ್ಳುವ ಅಧಿಕಾರಿಗಳು ಏನಪ್ಪಾ, ನೀನು ಸೈನ್ಯವನ್ನು ಏಕೆ ಸೇರಬೇಕು ಅಂದ್ಕೊಂಡಿದ್ದೀಯ? ಎಂದು ಕೇಳಿದರು. ಆಗ ಆತ 'ಸಾರ್ .. ನನ್ಗೆ ಪರಮವೀರ ಚಕ್ರ ಬೇಕು ಸಾರ್’ ಎಂದನಂತೆ! ಮೋನೋಜ್ ಬಿಸಿ ರಕ್ತದ ಹುಡುಗ. ಅಧಿಕಾರಿಗಳು ನಕ್ಕರು. ನಾಡು, ನೆಲ, ದೇಶ ಎಂದರೆ ಆತನ ಎದೆ ಹುಬ್ಬುತಿತ್ತು. ದೇಶಕ್ಕಾಗಿ ಏನಾದರು ಮಾಡಬೇಕೆಂಬ ಮಹಾದಾಸೆಯಿದ್ದ ಆತನಿಗೆ ಸೈನ್ಯದ ಸೇರ್ಪಡೆ ಇನ್ನೂ ಹೆಚ್ಚಿನ ಚೈತನ್ಯವನ್ನು ನೀಡಿತು. ಅಲ್ಲಿಂದ ಮುಂದೆ ಗೋರ್ಖಾ ರೆಜಿಮೆಂಟ್ ಸೇರ್ಕೊಂಡ , ಮುಂದೆ ಲೆಫ್ಟಿನಂಟ್ ಆದ, ಅಲ್ಲಿಂದ ಮುಂದೆ ಕ್ಯಾಪ್ಶನ್ ಕೂಡ ಆದ.

ಅದು 1999 ಜುಲೈ ತಿಂಗಳು. ಈ ತಿಂಗಳನ್ನ ಭಾರತೀಯರಾದ ಯಾರೂ ಕೂಡ ಮರೆಯೋಕ್ಕೆ ಸಾಧ್ಯನೇ ಇಲ್ಲ. ಅಲ್ವೇ?' ಎಂದ ಲೋಕೇಶ ಮತ್ತೊಮ್ಮೆ ಜನರ ಗುಂಪನ್ನು ನೋಡಿದ. ಆದರೆ ಈ ಬಾರಿ ಯಾರೋ ಪುಣ್ಯಾತ್ಮ ತನ್ನ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ 'ಕಾರ್ಗಿಲ್ ವಾರ್..!!' ಎಂದು ಜೋರಾಗಿ ಅರಚಿದ. ಮುಗುಳ್ ನಕ್ಕ ಲೋಕೇಶ ಕೂಡಲೇ ಮುಂದುವರೆದ,

'ಯಸ್, ಕಾಶ್ಮೀರದ ಆ ಜಾಗದ ಹೆಸರು ಕಾಲುಬಾರ್. ಎತ್ತರದ ಬೆಟ್ಟದ ಮೇಲೆ ಪಾಕಿಸ್ತಾನಿ ಸೈನಿಕರು ಸೇರಿಕೊಂಡಿದ್ದಾರೆ.. 24 ವರ್ಷದ ಕ್ಯಾಪ್ಶನ್ ಮನೋಜ್ಗೆ ತನ್ನ ಮೇಲಧಿಕಾರಿಗಳಿಂದ ಸ್ಥಳವನ್ನು ವಶಪಡಿಸಿಕೊಳ್ಳಲು ಸಂದೇಶ ಬಂದಿತು. ಇದಕ್ಕಿಂತ ಮೊದಲು ಹೋದ 19 ಜನ ಸೈನಿಕರು ಅಲ್ಲಿಂದ ವಾಪಸ್ ಬಂದಿರಲೇ ಇಲ್ಲ! ಕಾರಣ ವೈರಿ ಸೈನಿಕರು ಕೂತಿರುವುದು ಬಹಳ ಎತ್ತರದ ಆಯಕಟ್ಟಿನ ಜಾಗದಲ್ಲಿ. ಅದು ಹೇಗೆ ಹೋದರೂ ಸಹ ಮೈಮೇಲೆ ಗುಂಡಿನ ಸುರಿಮಳೆಯಾಗುತ್ತದೆ. ಇಂತಹ ಸಾವಿನ ದವಡೆಗೆ ಹೋಗುವುದು ಹುಡುಗಾಟಿಕೆಯ ಮಾತಾಗಿರಲಿಲ್ಲ. ಆದರೂ ತನ್ನ ತಂಡವನ್ನು ಹುರಿದುಂಬಿಸಿ ಮನೋಜ್ ತೆರಳಲು ಅಣಿಯಾದ. ಕಾರ್ಯಾಚರಣೆಯನ್ನು ರಾತ್ರಿಯೇ ಮಾಡೋಣವೆಂದು ನಿರ್ಧರಿಸಿ ಕಾಯತೊಡಗಿದ.

ಕೊನೆಗೂ ಆ ಸಮಯ ಬಂದಿತು. ಇಮ್ಯಾಜಿನ್ ಮಾಡ್ಕೊಳಿ. ಎತ್ತರವಾದ ಗುಡ್ಡ. ಅದರ ತುದಿಯಲ್ಲಿ ರಾಶಿಗಟ್ಟಲೆ ಮದ್ದುಗುಂಡುಗಳೊಟ್ಟಿಗೆ ಕೂತಿರುವ ವೈರಿಪಡೆ. ಗುಡ್ಡದ ತುದಿಗೆ ಏರಲು ಅದರ ಎರಡೂ ಕಡೆಗೂ ಒಂದೊಂದು ಬದುಗಳು ಬಿಟ್ಟರೆ ಬೇರೇನೂ ಇಲ್ಲ. ಬಿದ್ದರೆ ಆಳವಾದ ಪ್ರಪಾತ.. ಆ ಬದುವಿನ ಮೇಲೆ ನಾಜುಕ್ಕಾಗಿ ಓಡಿ ವೈರಿಳೊಟ್ಟಿಗೆ ಕಾದಾಡಬೇಕು.

ಕೂಡಲೇ ಮೋನೋಜ್ ಉಪಾಯವೊಂದನ್ನು ಮಾಡಿದ. ಒಂದು ಬದುವಿನಲ್ಲಿ ತಾನು ಹೋಗುವುದೆಂದು ಇನ್ನೊಂದು ಬದುವಿನ ಮೇಲೆ ಇತರ ಸೈನಿಕರು ನಂತರ ಬರುವುದೆಂದು. ಕೊಡಲೇ ಉಪಾಯ ಕಾರ್ಯಗತವಾಯಿತು. ಅಂದುಕೊಂಡಂತೆ ಮನೋಜ್ ಒಂದು ಬದುವಿನ ಮೇಲೆ ಓಡಹತ್ತಿ ವೈರಿಗಳಿದ್ದ ಒಂದು ಕಂದಕಕ್ಕೆ ಹಾರಿದ. ಅಚಾನಕ್ಕಾಗಿ ಭಾರತೀಯ ಯೋಧನೊಬ್ಬ ಹೀಗೆ ಪ್ರತ್ಯಕ್ಷನಾದದನ್ನು ಕಂಡು ಕಕ್ಕಾಬಿದ್ದಿಯಾದ ಇಬ್ಬರು ವೈರಿ ಸೈನಿಕರು ಇನ್ನೇನು ತಮ್ಮ ಬಂದೂಕನ್ನು ತೆಗೆದು ಗುಂಡು ಹಾರಿಸಬೇಕೆನ್ನುವಷ್ಟರಲ್ಲಿ ತನ್ನ ಕಠಾರಿಯನ್ನು ತೆಗೆದು ಅವರನ್ನು ಅಲ್ಲಿಯೇ ನಿರ್ನಾಮ ಮಾಡಿದ ಮನೋಜ! ಆದರೂ ಆತನ ಬಲಭುಜಕ್ಕೆ ಗುಂಡೊಂದು ತಗುಲಿತು. ಯುದ್ದೋನ್ಮಾದ ಗುಂಗಿನಲ್ಲಿದ್ದ ಆತನಿಗೆ ಆ ಗುಂಡಿನ ನೋವು ಗೊತ್ತಾಗಲೇ ಇಲ್ಲ! ಕೂಡಲೇ ಪಕ್ಕದ ಕಂದಕಕ್ಕೆ ಜಿಗಿದ. ಅಲ್ಲೂ ಮತ್ತಿಬ್ಬರನ್ನು ಮುಗಿಸಿದ. ಈ ಬಾರಿ ಬಂದ ಗುಂಡೊಂದು ಆತನ ಸೊಂಟಕ್ಕೆ ತಗುಲಿತು. ಕೂಡಲೇ ‘ಚಿಲ್..’ ಎಂದು ರಕ್ತ ಒಮ್ಮೆಲೇ ಹಾರತೊಡಗಿತು. ಹುಚ್ಚನಿಗೆ ಆಗಲೂ ಸಮಾಧಾನವಾಗಲಿಲ್ಲ. ತನ್ನ ರಕ್ತವನ್ನೇ ತುಣಿದುಕೊಳುತ್ತ ನಂತರದ ಕಂದಕಕ್ಕೂ ಹೋದ. ಆದರೆ ಈ ಬಾರಿ ಜಾಗೃತರಾಗಿದ್ದ ವೈರಿಗಳು ಈತನ ವಿರುದ್ಧ ಮುಗಿಬಿದ್ದರು. ಅಲ್ಲೂ ಸಹ ಆತ ಕಾದಾಡಿದ. ದುರದೃಷ್ಟವಶಾತ್ ವೈರಿಪಡೆಯ ಗುಂಡೊಂದು ಈ ಬಾರಿ ಸೀದಾ ಈತನ ತಲೆಗೆ ಬಂದು ರಪ್ಪನೆ ಬಡಿಯಿತು.ಮೋನೋಜ ಕುಸಿದ.

ವೈರಿಗಳು ಈತನೆಡೆಗೆ ಗಮನ ಕೇಂದ್ರೀಕರಿಸಿರುವುದನ್ನು ಗಮನಿಸಿದ ನಮ್ಮ ಸೈನ್ಯದ ಇನ್ನೊಂದು ತಂಡ ಕೂಡಲೇ ಮುನ್ನುಗ್ಗಿತು. ನಿಮಿಷಮಾತ್ರದಲ್ಲಿ ವೈರಿಪಡೆಯನ್ನು ಸಂಹರಿಸಿ ಬೆಟ್ಟವನ್ನು ಹಿಂಪಡೆಯಿತು. ಆದರೆ ಕೆಚ್ಚೆದೆಯ ಹುಲಿಯಂತೆ ಒಬ್ಬಂಟಿಗನಾಗಿ ಹೋರಾಡಿದ ಮೋನೋಜನನ್ನು ಜವರಾಯನಿಂದ ಮಾತ್ರ ಹಿಂಪಡೆಯಲಾಗಲಿಲ್ಲ. ಸಾಯುವಾಗಲು ಆತ 'ಬಿಡಬೇಡಿ.. ಹೊಡೆಯಿರಿ.. ನಾವು ಗೆಲ್ಲಬೇಕು' ಎಂದು ಎನ್ನುತ್ತಲೇ ಕೊನೆಯುಸಿರೆಳೆದ. ಕೊನೆಗೂ ಆತ ಅಂದುಕೊಂಡಂತೆ 1999 ರ ಯುದ್ಧದಲ್ಲಿ ದೊರೆತ ನಾಲ್ಕು ಪರಮವೀರಚಕ್ರದಲ್ಲಿ ತನಗೂ ಒಂದನ್ನು ಗಿಟ್ಟಿಸಿಕೊಂಡ .' ಎಂದು ಹೇಳಿ ಕೆಲಕ್ಷಣ ಮೌನವಾದ ಲೋಕೇಶ.

'ಇಲ್ಲಿ ನೆರೆದಿರುವವರಲ್ಲಿ ಯಾರಿಗಾದರೂ ಅಂತಹ ಆಸೆಯಿದೆಯೆ? ದೇಶಕ್ಕಾಕಿ ಸರ್ವವನ್ನು ಅರ್ಪಿಸುವ 24 ವರ್ಷದ ಮನೋಜ್ ಕುಮಾರ್ ಪಾಂಡೆಯಂತಹ ವ್ಯಕ್ತಿಗಳು ಇಲ್ಲಿ ಯಾರಾದರೂ ಇರುವರೇ?' ಎಂದು ಕೇಳಿದ. ಅಂದುಕೊಂಡಂತೆ ಯಾವೊಂದು ಕೈಗಳು ಮೇಲೇಳಲಿಲ್ಲ. ಲೋಕೇಶ ಸ್ಟೇಜಿನೆಡೆಗೆ ತಿರುಗಿದ.

ಒಮ್ಮೆ ತಲೆಬಾಗಿ ನಗುವಂತೆ ಮಾಡಿ,

'ಸ್ಟೇಜಿನ ಮೇಲೆ ಆಸೀನರಾಗಿರುವ ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಮಹಾ ನೇತಾರರೇ ಹಾಗು ತಮ್ಮೆಲ್ಲವನ್ನು ಬಿಟ್ಟು ಇಂತಹ ಘನಕಾರ್ಯಕ್ರಮಗಳಿಗೂ ಸಮಯ ವ್ಯಹಿಸುವ ಮಹಾಜನಗಳೇ' ಎಂದು ಹೇಳಿ ಅಧಿಕೃತವಾಗಿ ತನ್ನ ಭಾಷಣವನ್ನು ಆರಂಭಿಸಿದ!

'ಹೇಳಿ. ಯಾರಿಗಾಗಿ..ಯಾವ ಸ್ವಾರ್ಥಕ್ಕಾಗಿ.. ಅದ್ಯಾವ ಸಾಧನೆಗಾಗಿ.. ಇಂತಹ ರಾಶಿ ರಾಶಿ ಹುಚ್ಚು ಜೀವಗಳು ತಮ್ಮ ಬಲಿದಾನವನ್ನು ಕೊಡುತ್ತವೆ.ಇಂದು ವ್ಯಕ್ತಿಯೊಬ್ಬ ಸಾಯುತ್ತಿದ್ದಾನೆ ಎಂದರೆ ಹನಿ ನೀರನ್ನೂ ಕೊಡದ ಜನರಲ್ಲಿ ದೇಶಕ್ಕಾಗಿ ತನ್ನ ರಕ್ತ ಮಾಂಸಗಳೊಟ್ಟಿಗೆ ಆಸೆ ಆಕಾಂಕ್ಷೆ ಜೀವನ ಸಂಸಾರವನ್ನೆಲ್ಲ ದೂರಗೊಳಿಸಿ ಅವರು ಪಡೆಯುವುದಾದರೂ ಏನು? ಏತಕ್ಕಾಗಿ ಮನೋಜ್ ಅಂದು ತನ್ನ ರಕ್ತಮಾಂಸಗಳನ್ನು ಅರ್ಪಿಸಿ ತನ್ನ ಜೀವನವನ್ನು ತ್ಯಾಗ ಮಾಡಿದ? ರಿಸೆರ್ವಶನ್ಗಾಗಿಯೋ? ಬ್ರಷ್ಟಾಚಾರಕ್ಕಾಗಿಯೋ? ಸರ್ಕಾರ ಬೀಳಿಸಿ ಹೊಸ ಚುನಾವಣೆ ಎಂದು ಮತ್ತದೇ ಕೋಟಿ ಕೋಟಿ ಹಣವನ್ನು ವ್ಯಹಿಸುವುದಕ್ಕೋ? ಮೋಸ ವಂಚನೆಗಾಗಿಯೋ ಅಥವಾ ನಮ್ಮೆಲ್ಲರ ಪ್ರೀತಿಯ ಸಾಲಮನ್ನಾಕ್ಕಾಗಿಯೋ? ಅಂತಹ ಮಹಾನ್ ವ್ಯಕ್ತಿಗಳು ಗಳಿಸಿಕೊಟ್ಟಿರುವ ನಮ್ಮ ಈ ನೆಲಜಲಗಳನ್ನು ನಾವ್ಗಳು ಬಳಸಿಕೊಳ್ತಿರೋದು ಹೇಗೆ ನೋಡಿ.
ಅವ್ರಿಗೆ ರೆಸೆರ್ವಶನ್ ಬೇಕಂತೆ. ರೆಸೆರ್ವಶನ್ ಪಡೆಯುವ ಜನರಿಗೆ ನೀನು ಸರ್ಕಾರಕ್ಕೆ ಸಮಾಜಕ್ಕೆ ಏನ್ ಮಾಡಿದ್ದೀಯಪ್ಪ ಅಂದ್ರೆ, ಏನೂ ಯಾಕೆ ಮಾಡ್ಬೇಕು? ನಾವು ಹಿಂದೆ ಉಳಿದ್ದಿದೀವಿ ಅದಕ್ಕೆ ರೆಸೆರ್ವಶನ್ ಬೇಕು ಅಂತಾರೆ. ಗಟ್ಟಿಮುಟ್ಟಾಗಿದ್ದು ದಿನಕ್ಕೆ ನಾಲ್ಕೊತ್ತು ಊಟ ಭಾರಿಸುವ ಜನ ಕುದುರೆಯಂತೆ ಓಡುತ್ತಿರುವ ಪ್ರಪಂಚದಲ್ಲಿ ಹಿಂದೆ ಉಳಿದಿರುವರಂತೆ! What a Comedy..
ಇಲ್ಯಾರೋ ಇವ್ರಿಗೆ ಸಾಲ ಮನ್ನಾ ಆಗ್ಬೇಕಂತೆ. ಸ್ವಾಮಿ, ನಮ್ಮ ಹಿರೀಕರು ಅವರ ಹಿರೀಕರೂ ಸಹ ವ್ಯವಸಾಯ, ಕೃಷಿ ಮಾಡಿಕೊಂಡೇ ಬಂದವರು. ಅವಾಗಲು ಮಳೆ ಪ್ರವಾಹ ಬೆಳೆನಾಶ ಎಲ್ಲಾವು ಆಗ್ತಾ ಇದ್ವು. ಮೇಲಾಗಿ ಆಗೆಲ್ಲ ಈಗಿನಂತೆ ಇನ್ಶೂರೆನ್ಸು, ಬೆಂಬಲ ಬೆಲೆ, ಎಪಿಎಂಸಿ ಮತ್ತೊಂದು ಮಗದೊಂದು ಅಂತ ಹತ್ತಾರು ಸವಲತ್ತುಗಳಿರಲಿಲ್ಲ. ಅಷ್ಟೆಲ್ಲ ಪ್ರತಿಕೂಲ ವಾತಾವರಣವಿದ್ದರೂ ಅವ್ರು ಕೃಷಿಯನ್ನ ಮಾಡಲಿಲ್ಲವ? ನಮ್ಮ ಅಜ್ಜ ಅಜ್ಜಿಯರನ್ನು ಹೊಟ್ಟೆ ತುಂಬಾ ತಿನ್ನಿಸಿ ಬೆಳೆಸಲಿಲ್ವ? ಅವಾಗ ಅದ್ಯಾವ ಸರ್ಕಾರ ಸಾಲ ಕೊಡ್ತಾ ಇತ್ತು. ಅದ್ಯಾವ ಬ್ಯಾಂಕು ಸಾಲ ಮನ್ನಾ ಮಾಡ್ತಾ ಇತ್ತು? ಹೇಳಿ.
ಇನ್ನು ಇವ್ರಿಗೆ ಸರ್ಕಾರನೇ ಬೇಡ್ವಂತೆ. ಇದಕ್ಕೆ ಒಂದ್ ಸಣ್ಣ ಎಕ್ಸಾಮ್ಪಲ್ ಕೊಡ್ತೀನಿ, ತಪ್ಪ್ ತಿಳ್ಕೊ ಬೇಡಿ. ಮನೇಲಿ ಮಗುವೊಂದು ಹುಟ್ಟಿ ಬುದ್ದಿ ಬಂದಮೇಲೆ ತನ್ನ ಅಪ್ಪ ಕುಡುಕ, ಸಿಡುಕ, ದಡ್ಡ ಎಂದು ಅರಿತು ಅಪ್ಪನನ್ನೇ ಚೇಂಜ್ ಮಾಡು ಅಂದ್ರೆ ಆಗುತ್ತಾ? ಇಲ್ಲ ತಾನೇ. ಹೇಗಾದ್ರು ಮಾಡಿ ಅದು ಅವನನ್ನ ತಿದ್ದೋಕ್ಕೆ ನೋಡುತ್ತೆ. ಸರಿ ಮಾಡೋಕ್ಕೆ ಪ್ರಯತ್ನಿಸುತ್ತೆ. ನಮ್ಮ ನಿಮ್ಮೆಲ್ಲರ ಈ ಸರ್ಕಾರನೂ ಮನೆಯ ತಂದೆಯ ಸಮಾನ. ಸರಿ ಇಲ್ಲ ಅಂತ ಅಪ್ಪನನ್ನೇ ಹೊರಗಟ್ಟುವುದು ಎಷ್ಟು ಸರಿ ಹೇಳಿ. ಪ್ರೆಶ್ನೆ ಮಾಡಿ. ಅರ್ಥಪೂರ್ಣವಾಗಿ ಪ್ರತಿಭಟನೆ ಮಾಡಿ. ತಪ್ಪಿದ್ರೆ ಸರಿ ಮಾಡಿಸಿ. ಯಾರಿಗ್ ಗೊತ್ತು ಹೊಸದಾಗಿ ಬರೋ ಅಪ್ಪ ಅದ್ಯಾವ್ತರದ ಕಿರಾತಕ ಆಗಿರ್ತಾನೆ ಅಂತ?’ ಎಂದ ಲೋಕೇಶ.

ಜನರ ಗುಂಪಿನಿಂದ ಒಮ್ಮೆಲೇ ಚಟಪಟ ಸದ್ದಿನ ಚಪ್ಪಾಳೆ ಹಾಗು ಒಂದೆರಡು ಜೋರಾದ ಸಿಳ್ಳೆಗಳೂ ಮೂಡಿದವು. ಹೆದರಿ ಮುದುಡಿ ನಿಂತಿದ್ದ ಆದಿಯೂ ಕೂಡ ಈಗ ಮುಂಬಂದು ಚಪ್ಪಾಳೆಯನ್ನು ಭಾರಿಸತೊಡಗಿದ. ತನ್ನ ಮುಖಕ್ಕೆ ಛಟಾರನೆ ಬಡಿದವನಂತೆ ಮಾತನಾಡಿದ ಲೊಕೇಶನನ್ನು ಗುರಾಯಿಸಿದ ಹುಲಿಯ ನಾಮಾಂಕಿತದ ರಾಜಕಾರಣಿ ಕೂಡಲೇ ಮೇಲೆದ್ದು,

'ಜನರನ್ನು ಹಿಂಸಿಸೋ ಸರ್ಕಾರ ಇದ್ರೆಷ್ಟು ಹೊದ್ರೆಷ್ಟು.. ಅಪ್ಪ, ಮನೆ ಅಂತ ಹೀಗೇನೆ ಇದ್ರೆ ನಮ್ಮನ್ನ ಕೊಳ್ಳೆ ಒಡೆಯೋದಂತೂ ಸುಳ್ಳಲ್ಲ.. ಒಮ್ಮೆ ನಮ್ಗೆ ಅವಕಾಶ ಕೊಟ್ಟು ನೋಡಿ.. ಸರ್ಕಾರ ಹೇಗೆ ನೆಡಸ್ತೀವಿ ನೋಡಿ' ಎಂದು ಅಬ್ಬರಿಸಿದ.

ಓಟಕ್ಕೆ ಗ್ರೌಂಡು ಸಿಗಲಿಲ್ಲವೆಂಬ ಸಿಟ್ಟು ಇನ್ನೇನು ತಣ್ಣಗಾಯಿತು ಎಂದು ಸ್ಟೇಜಿನಿಂದ ಇಳಿಯಬೇಕು ಎನ್ನುವಷ್ಟರಲ್ಲಿ ಅಚಾನಕ್ಕಾಗಿ ಮೂಡಿದ ರಾಜಕಾರಣಿಯ ಮಾತನ್ನು ಕೇಳಿ ಲೋಕೇಶ ಪುನ್ಹ ವಾಪಸ್ಸು ಬಂದ. ಅವನನ್ನು ಉದ್ದೇಶಿಸಿ 'ಸಾರ್ ಇನ್ನೊಂದೇ ನಿಮಿಷ.. ಕೂತ್ಕೊಳಿ' ಎಂದ. ಇವನ್ಯಾರು, ಯಾವ ಪಕ್ಷದವನಿರಬಹುದು, ನನ್ನ್ ಮೇಲೆ ಯಾಕಿಷ್ಟು ಸಿಟ್ಟು ಎಂಬ ಪ್ರೆಶ್ನೆಗಳು ರಾಜಕಾರಣಿಯ ಮನದೊಳಗೆ ಒಮ್ಮೆಲೇ ಮೂಡಿದವು. ಆತನ ಮಾತನ್ನು ಪಾಲಿಸುವ ಬಂಟನಂತೆ ತುಟಿಕ್ ಪಿಟಿಕ್ ಎನ್ನದೆ ಕುರ್ಚಿಯ ಮೇಲೆ ಸುಮ್ಮನೆ ಕೂತ. ಯಾಕೆಂದು ಆತನಿಗೂ ತಿಳಿಯಲಿಲ್ಲ.

ಲೋಕೇಶ ಕೂಡಲೇ ಜನರನ್ನು ಉದ್ದೇಶಿಸಿ 'ಇಲ್ಲಿ ಇರೋ ಜನರಲ್ಲಿ ಪರ್ಸ್ ಇರೋದು ಯಾರಾದರೊಬ್ಬರು ಮೇಲೆ ಬರ್ಬೇಕು' ಎನ್ನುತ್ತಾನೆ. ಒಂದರೆ ನಿಮಿಷ ಹೋದನಂತರ ಹದಿನೆಂಟು ಹತ್ತೊಂಬತ್ತರ ಚಿಗುರು ಮೀಸೆಯ ಹುಡುಗನೊಬ್ಬ ಹೆದರುತ್ತಲೇ ಮೇಲಕ್ಕೆ ಬಂದನು. ಬಹುಷಃ ಧೈರ್ಯ ಮಾಡಿ ಸ್ಟೇಜಿನ ಮೇಲೆ ಬಂದ ಮಾತ್ರಕ್ಕೇ ತನಗೆ ಏನಾದರು ಒಂದು ಇನಾಮನ್ನು ಕೊಡುವರೇನೋ ಎಂದುಕೊಂಡು ಆತ ಹೆಜ್ಜೆಯಿಡುತ್ತಿದ್ದ. ಲೋಕೇಶ ಆತನನ್ನು ಕರೆದು ಹೆಸರು ಕೇಳಿ ನಂತರ, 'ನನ್ಗೆ ಒಂದು ನೂರುಪಾಯಿ ನಿನ್ ಪರ್ಸಿನಿಂದ ಕೊಡು' ಎಂದು ಕೇಳಿದ. ಮೊದಲಿಗೆ ಗಾಬರಿಗೊಂಡ ಹುಡುಗ ಬಹುಷಃ ಈತ ಇದನ್ನು ಐನೂರು ರೂಪಾಯಿ ಮಾಡಿ ನನಗೆ ಹಿಂದುರಿಗಿಸಬಹುದು, ಇಲ್ಲದಿದ್ದರೂ ಇಷ್ಟು ಜನರ ಸಮ್ಮುಖದಲ್ಲಿ ಈತನೇನು ಕದ್ದು ಓಡುವುದಿಲ್ಲವೆಂಬ ಧೈರ್ಯದಲ್ಲಿ ಇದ್ದ ನೂರರ ಒಂದೇ ನೋಟನ್ನು ತನ್ನ ಪರ್ಸಿನಿಂದ ತೆಗೆದು ಲೊಕೇಶನ ಕೈಲಿತ್ತ. ಲೋಕೇಶ ನೋಟನ್ನು ಕೂಲಂಕುಷವಾಗಿ ಪರೀಕ್ಷಿಸಿ ನಂತರ ಅದನ್ನು ಮಡಚಿ ತನ್ನ ಜೇಬಿನಲ್ಲಿ ಇರಿಸಿಕೊಂಡ ಹಾಗು 'ಥ್ಯಾಂಕ್ಸ್' ಎಂದೇಳಿ ಆತನನ್ನು ಅಲ್ಲಿಂದ ತೆರಳುವಂತೆ ಹೇಳಿದ. ಮೊದಮೊದಲು ಲೋಕೇಶ ತಮಾಷೆ ಮಾಡುತ್ತಿರುವನೆಂದು ಊಹಿಸಿ ನಗಾಡಿದ ಆ ಹುಡುಗ ಯಾವಾಗ ಆತ ಹಣವನ್ನು ಕೊಡಲಿಲ್ಲವೋ ಆಗ ತುಸು ಕೋಪಿಷ್ಠನಾದ. 'ನನ್ನ್ ದುಡ್ಡ್ ಅದು .. ಯಾಕ್ರೀ ಕೊಡಲ್ಲ' ಎಂದು ದಬಾಯಿಸತೊಡಗಿದ. ಲೋಕೇಶ ಸುಮ್ಮನಿದ್ದ. ಯಾರೂ ತನ್ನ ರಕ್ಷಣೆಗೆ ಬಾರದಿದ್ದನ್ನು ಕಂಡು ಸಿಡುಕಿದ ಆ ಪೋರ ಕೂಡಲೇ ಲೊಕೇಶನ ಕೊರಳುಪಟ್ಟಿಯನ್ನು ಹಿಡಿದು 'ಕೊಡ್ತಿಯೋ ಇಲ್ವೋ..' ಎಂದು ಅರಚತೊಡಗಿದ. ಕೂಡಲೇ ನಗತೊಡಗಿದ ಲೋಕೇಶ ಆತನನ್ನು ಸಂತೈಸಿ ತನ್ನ ಜೇಬಿನಲ್ಲಿದ್ದ ನೂರರ ನೋಟನ್ನು ಆತನಿಗೆ ಕೊಟ್ಟು ಕಳುಹಿಸಿದ ಹಾಗು ಸ್ಟೇಜಿನ ಮೇಲಿದ್ದ ರಾಜಕಾರಣಿಗಳನ್ನು ನೋಡುತ್ತಾ 'ಇಷ್ಟೇ ಅಲ್ವ ಸಾರ್ .. ಸರ್ಕಾರ ನೆಡೆಸೊದು ಅಂದ್ರೆ' ಎಂದು ಸುಮ್ಮನಾದ.

'ನಮ್ಮ ದುಡ್ಡನ್ನು ನಮ್ಮಿಂದಲೇ ಪಡೆದು ವಾಪಾಸ್ ಕೊಡದೆ ಸತಾಯಿಸುವುವ ಈ ಪ್ರಕ್ರಿಯೆಯನ್ನೇ ಡೆಮಾಕ್ರಸಿ ಎನ್ನಬಹುದೇ?’ ಎಂದೇಳಿ ಜನರೆಡೆಗೆ ತಿರುಗಿ ‘ನಾವುಗಳೂ ಏನ್ ಕಡಿಮೆ ಇಲ್ಲ ಬಿಡಿ.. ಆ ಹುಡುಗ ಕೊರಳುಪಟ್ಟಿ ಹಿಡಿದು ಕೇಳಿದಂತೆ ನಾವುಗಳೂ ಸರ್ಕಾರಗಳನ್ನು ಕೇಳುವುದು ಯಾವಾಗ? ನಮ್ಮ ಅಧಿಕಾರವನ್ನು ಚಲಾಯಿಸುವುದು ಯಾವಾಗ? ನಾವುಗಳು ಎಲ್ಲಿಯವರೆಗೂ ಹೀಗೆಯೇ ಇರುತ್ತೇವೆಯೋ ಅಲ್ಲಿಯವರೆಗೂ ಇಂತಹ ಸರ್ಕಾರ ಉರುಳಿಸುವ ಕಾಲಹರಣ ಕಾರ್ಯಕ್ರಮಗಳು ನೆಡೆಯುತ್ತಲೇ ಇರುತ್ತವೆ.. ಸರ್ಕಾರ ನೆಡೆಯೋದು ಜನರಿಂದಲೇ ಹೊರತು ರಾಜಕಾರಣಿಗಳಿಂದಲ್ಲ ಎಂಬ ಕಡುಸತ್ಯವನ್ನು ಹೊರಗೆಡವಿ ನಾವುಗಳು ಎಂದಿಗೆ ಮುನ್ನಡೆಯುವುದಿಲ್ಲವೋ ಅಲ್ಲಿಯವರೆಗೂ ಏನೇನೂ ಸಾಧ್ಯವಿಲ್ಲ. ಒಮ್ಮೆ ಈ ಸತ್ಯವನ್ನು ಅರಿತರೆ ನಮಗೆ ಯಾವ ಸರ್ಕಾರವಾದರೇನು..ಅದ್ಯಾವ ಮಂತ್ರಿಯಾದ್ರೇನು, ಅಲ್ವೇ.. So, ಆಯ್ಕೆನೂ ನಮ್ಮದೇ, ಅನುಭವಿಸುವವರೂ ನಾವುಗಳೇ' ಎಂದು ತನ್ನ ಎರಡನೇ ರೌಂಡಿನ ಮಿನಿ ಭಾಷಣವನ್ನು ಮುಗಿಸಿ ಕೆಳಗಿಳಿದ. ನೆರೆದಿದ್ದ ಜನರ ಚಪ್ಪಾಳೆಯ ಸದ್ದು ಮುಗಿಲು ಮೂಡಿತು. ಕಟ್ಟಾ ಕಾರ್ಯಕರ್ತರೂ ಸಹ ಪಕ್ಷದ ವಿರುದ್ಧ ಸುಪ್ತವಾಗಿ ಅಡಗಿದ್ದ ತಮ್ಮ ಸಿಟ್ಟನ್ನು ಹೊರಹಾಕುವಂತೆ ಇನ್ನೂ ಜೋರಾಗಿಯೇ ಚಪ್ಪಾಳೆಯನ್ನು ತಟ್ಟತೊಡಗಿದರು. ಅಷ್ಟರಲ್ಲಾಗಲೇ ರಾಜಕಾರಣಿಗಳ ಕೆಂಗಣ್ಣುಗಳು ಲೊಕೇಶನನ್ನು ಗುರಾಯಿಸ ಹತ್ತಿದ್ದವು. ಹುಲಿಯ ಹೆಸರಿನ ರಾಜಕಾರಣಿ ಮೈಕಿನ ಬಳಿಗೆ ಬರಲು ಅಂಜತೊಡಗಿದ. ದೇವರ ಅನುಗ್ರಹವೆಂಬಂತೆ ನಿರೂಪಕಿಯೊಬ್ಬರು ಬಂದು ವಂದನಾ ಭಾಷಣವನ್ನು ಪ್ರಾರಂಭಿಸದರು.

ನೆರೆದಿದ್ದ ಜನರು ಬಂದು ಲೊಕೇಶನ ಕೈಕುಲುಕಿ ಅಭಿನಂದಿಸತೊಡಗಿದರು. ಕೊಡಲೇ ಬಲವಾದ ಕೈಯೊಂದು ಲೊಕೇಶನ ಭುಜದ ಮೇಲೆ ಬಿಗಿಯಾಗಿ ಬಂದೆರಗಿತು. ಹಿಡಿತ ಗಟ್ಟಿಯಾದಂತೆ ಲೊಕೇಶನ ಭುಜದ ಸ್ನಾಯುಗಳು ನೋಯತೊಡಗಿ ಆತ ಕೊಸರಾಡತೊಡಗಿದ. ಬಹುಷಃ ಆ ರಾಜಕಾರಣಿ ಕೋಪಗೊಂಡು ತನನ್ನು ಥಳಿಸಲು ಬಂದಿದ್ದಾನೆ ಎಂದಾದರೆ ಆದದ್ದು ಆಗಲಿ ಒಂದು ಕೈ ನೋಡೇ ಬಿಡುವ ಎಂದು ಹಿಂದಕ್ಕೆ ತಿರುಗಿ ನೋಡುತ್ತಾನೆ ತನ್ನ ಜಮೀನಿನ ಒಡೆಯ ಸಾಲ್ದಾನ ಜೋಸೆಫ್ ನಗುತ್ತಾ ಅಲ್ಲಿ ನಿಂತಿದ್ದಾರೆ. ಗಣ್ಯವ್ಯಕ್ತಿಯೊಬ್ಬರು ತನ್ನ ಭುಜವನ್ನು ಹೀಗೆ ಅಧುಮುತ್ತಿರುವುದು ಸಿಟ್ಟಿನಿಂದಲ್ಲ ಪ್ರಶಂಸೆಯಿಂದ ಎಂದರಿತು ಲೊಕೇಶನು ಬಾಲಸಹಜ ನಗೆಯನ್ನು ಬೀರುತ್ತಾನೆ.

'ಲೋಕೇಶ್ , What a speech man .. I appreciate it' ಎಂದು, 'ನೋಡಪ್ಪ ನೀನ್ ಮುಖಕ್ಕೆ ಹೊಡೆದ ಹಾಗೆ ಮಾತಾಡಿ ನನ್ನ ಖಾಸಾ ದೋಸ್ತ್ನ ಮುಖ ಸೆಪ್ಪೆಯಾಗುವಂತೆ ಮಾಡಿದ್ದಿ. ನೋಡ್ ಅಲ್ಲಿ ಹೇಗೆ ನಿಂತಿದ್ದಾನೆ' ಎಂದು ಹುಲಿಯ ಹೆಸರಿನ ರಾಜಕಾರಣಿಯನ್ನು ಅವರು ತೋರಿಸುತ್ತಾರೆ. ಆತ ಜಿಲ್ಲೆಯ ಇತರೆ ಹಿರಿಯ ರಾಜಕಾರಣಿಗಳು ಹೇಳುತ್ತಿದ್ದ ಬುದ್ಧಿಮಾತನ್ನು ಕೇಳುವಂತೆ ಕೈಗಟ್ಟಿಕೊಂಡು ತಲೆತಗ್ಗಿಸಿ ನಿಂತಿದ್ದಾನೆ. ಅಂದುಕೊಂಡ ಕಾರ್ಯಕ್ರಮ ಅಂದುಕೊಂಡಂತೆಯೇ ನೆಡೆಯದಿದ್ದನ್ನು ಕಂಡು ಎಲ್ಲರ ಮುಖದಲ್ಲೂ ಸೂತಕದ ಛಾಯೆಯೊಂದು ಮನೆಮಾಡಿದೆ. ಸಾಲ್ದಾನ ಜೋಸೆಫ್ ಲೋಕೇಶನಿಗೆ ಈ ಭಾಷಣ ಕಲೆಯನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಲ್ಲೆಲ್ಲ ಇದು ಸಹಾಯಕ್ಕೆ ಬರುತ್ತದೆ ಎಂದು ವಿವರಿಸತ್ತಾ ಕೊನೆಗೆ 'ನಿನ್ನ ಶುಂಠಿಗದ್ದೆಯನ್ನು ನೋಡಿ ತುಂಬಾ ದಿನ ಆಯ್ತು ಮಾರಾಯ, ಬಾ ಹೋಗಿಬರುವ' ಎಂದು ತಮ್ಮ ಜೀಪಿನಲ್ಲಿ ಲೊಕೇಶನನ್ನು ಕೂರಿಸಿಕೊಂಡು ಅಲ್ಲಿಂದ ಹೊರಟರು.

ಮನೋಜ್ ಕುಮಾರ್ ಪಾಂಡೆಯ ಬಗ್ಗೆ ಖುಷಿಗೆ ಫೋನಿನಲ್ಲಿ ವಿವರಿಸುತ್ತಾ ಆದಿ ಓಡುತ್ತಲೇ ರೂಮನ್ನು ಸೇರಿದ.

'ಇಲ್ಲ ಸಾರ್ , ಯಾಕೋ ಇವುಗಳನ್ನ ಕೀಳೋಕ್ಕೆ ಮನಸ್ಸೇ ಬರ್ತಾ ಇಲ್ಲ' ಕಂದುಬಣ್ಣಕ್ಕೆ ತಿರುಗಿದ್ದ ಶುಂಠಿಗದ್ದೆಯನ್ನು ನೋಡಿ ಯಾಕಿನ್ನು ಕಟಾವು ಮಾಡಿಲ್ಲವೆಂದು ಕೇಳಿದ ಸಾಲ್ದಾನಾ ಜೋಸೆಫ್ರಿಗೆ ಲೋಕೇಶ ಉತ್ತರಿಸಿದ.

'ವಾಟ್ ಡು ಯು ಮೀನ್ ಬೈ ಮನಸ್ಸೇ ಬರ್ತಾ ಇಲ್ಲ?! ಇವಾಗ್ ಕಿತ್ರೆ ಒಳ್ಳೆ ಮಾರ್ಕೆಟ್ ರೇಟ್ ಇದೆ ..ಶುಂಠಿ ಇಷ್ಟೇ ಬರೋದು .. ಜಾಸ್ತಿ ಗ್ರೀಡಿನೆಸ್ ಒಳ್ಳೇದಲ್ಲ ಯಂಗ್ ಮ್ಯಾನ್'

'ಹಾಗಲ್ಲ ಸಾರ್ ..' ಎಂದೇಳಿದ ಲೋಕೇಶ ನಂತರ ಏನೋ ಹೇಳಲೊಗಿ ಸುಮ್ಮನಾದ. ಅವನ ದ್ವಂದ್ವವನ್ನು ಅರಿತ ಸಾಲ್ದಾನಾ ಜೋಸೆಪ್,

'ಪರವಾಗಿಲ್ಲ ಹೇಳಪ್ಪ ..' ಎಂದು ಭುಜವನ್ನು ತಟ್ಟಿದರು.

'ಸಾರ್ ಅದು .. ನಾನ್ ಹೇಳ್ತಿನಿ, ಆದ್ರೆ ನೀವು ಬೈಬಾರ್ದು..'

'ಸರಿ ಬೈಯಲ್ಲ .. ಹೇಳು'

'ಸಾರ್ ಏನೋ ಗೊತ್ತಿಲ್ಲ. ಬಹುಶಃ ನಾನೇ ನೆಟ್ಟು ಬೆಳೆಸಿರೋದ್ರಿಂದ ಅನ್ಸುತ್ತೆ ನನಗೆ ಅವುಗಳನ್ನು ಕೀಳೋಕ್ಕೆ ಮನಸ್ಸೇ ಬರ್ತಾ ಇಲ್ಲ .. ನನ್ನ ಮಕ್ಕಳನ್ನು ನಾನೇ ಕೈಯಾರೆ ಸಾಯಿಸಿಬಿಡುತ್ತೇನೋ ಎಂಬ ಭಯವೊಂದು ನನ್ನ ಕಾಡುತ್ತೆ ಸಾರ್.. I don’t know but I can’t !!'

ಸ್ವಲ್ಪ ಹೊತ್ತು ಸುಮ್ಮನಾದ ಅವರು ಲೊಕೇಶನನ್ನು ನೋಡುತ್ತಾ ಪ್ರಶಂಸೆಯ ನಗೆಯನ್ನು ಬೀರತೊಡಗಿದರು. ಕೆಲಸಮಯದ ನಂತರ ಮೌನವಾಗಿ,

'ನೀನೊಬ್ಬ ಪರಿಪೂರ್ಣ ಕೃಷಿಕ ಆಗ್ತಾ ಇದ್ದೀಯ ಲೋಕೇಶ್.. ಯಾವಾಗ ಕೃಷಿಕನೊಬ್ಬನಿಗೆ ತನ್ನ ಹಾಗು ಪೈರಿನ ಸಂಬಂಧ ಕೇವಲ ಹಣ ಹಾಗು ಲಾಭದ ಸಂಬಂಧವಲ್ಲವೆಂಬುದು ಅರಿವಾಗುತ್ತದೆಯೋ ಆಗಲೇ ಆತ ಒಬ್ಬ ಕಂಪ್ಲೀಟ್ ಫಾರ್ಮರ್ ಅಂತಾ ಅನ್ನಿಸಿಕೊಳ್ಳೋದು. ಪ್ರಕೃತಿ ಇಲ್ಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕೊಟ್ಟಿದ್ದಾಳೆ. ಪ್ರಾಣಿಗಳಿಗೆ, ಸಸ್ಯಗಳಿಗೆ ಅದು ಗೊತ್ತು ಆದರೆ ಮನುಷ್ಯರಿಗಲ್ಲ. ಹಸಿವನ್ನು ನೀಗಿಸಲು ಸಸ್ಯಗಳ ಮೂಲಕ ಹಣ್ಣು ತರಕಾರಿಗಳನ್ನು ಕೊಟ್ಟರೂ ಮಾನವ ಲಗ್ಗೆ ಹಿಟ್ಟದ್ದು ಮಾತ್ರ ಆ ಸಸ್ಯಗಳ ಕಾಂಡ ಬೇರುಗಳಿಗೇ. ಜಗತ್ತಿನಲ್ಲಿ ಎಲ್ಲರು ಒಟ್ಟಿಗೆ ಬಾಳಿ ಎಂದು ಇತರ ಜೀವಸಂಕುಲಗಳನ್ನು ಸೃಷ್ಟಿಸಿದರೆ ಬುದ್ದಿಯಿರುವ ಮಾನವ ಅವುಗಳೊಟ್ಟಿಗೆ ಬಾಳುವುದ ಬಿಟ್ಟು ಹಸಿವು ಹಾಗಿರಲಿ ತೃಣಮಾತ್ರದ ಮೋಜಿಗೆ ಅವುಗಳ ಚರ್ಮವನ್ನು ಸುಲಿಯತೊಡದಿದ. ತಾನೇ ಸೃಷ್ಟಿಸಿದ ನೆಲವೇನೋ ಎಂಬಂತೆ ಕಾಡು ಕಡಿದು ಬೇಲಿ ಜಡಿದು ಇದು ತನ್ನದು ಎಂದು ಬೀಗತೊಡಗಿದ. ಇಲ್ಲಿ ಇರುವುದೆಲ್ಲ ಸ್ವಾರ್ಥಕ್ಕೆ ಲೋಕೇಶ್.. ಫಸ್ಟ್ ಟೈಮ್ ಇನ್ ಮೈ ಲೈಫ್ ಐಮ್ ಸೀಯಿಂಗ್ ಆ ಪರ್ಸನ್ ಲೈಕ್ ಯು .. ಡೋಂಟ್ ವರಿ .. ನಿಂಗೆ ಕಟಾವು ಮಾಡೋಕ್ಕೆ ಇಷ್ಟ ಇಲ್ಲ ಅಂದ್ರೆ ಬೇಡ .. ಮಾಡ್ಬೇಡ .. ಇನ್ನು ಸ್ವಲ್ಪ ತಿಂಗಳು ಹಾಗೆ ಬಿಟ್ರೆ ಕೊನೆಗೆ ಅದು ಬೀಜದ ಶುಂಠಿಯಾಗಿಯಾದರೂ ಮಾರ್ಪಾಡಾಗುತ್ತೆ.. ಇನ್ಫ್ಯಾಕ್ಟ್ ಈಗ ಬೀಜದ ಶುಂಠಿಗೇನೆ ಮಾರ್ಕೆಟ್ನಲ್ಲಿ ಒಳ್ಳೆ ಧಾರಣೆ ಇರುವುದು. See, ಪರಿಸರ ನಾವು ಏನ್ ಮಾಡ್ದೆ ಇದ್ರೂ ಪ್ರತಿಫಲ ಅನ್ನೋದನ್ನ ಕೊಟ್ಟೇ ಕೊಡುತ್ತೆ' ಎಂದು ನಗುತ್ತಾರೆ.

ಅವರ ಹಿತವಚನಗಳು ಲೋಕೇಶನ ಆತ್ಮವಿಶ್ವಾಸವನ್ನು ನೂರು ಪಟ್ಟು ಹೆಚ್ಚಿಸುತ್ತವೆ. ತನ್ನಂತೆಯೇ ಯೋಚಿಸುವ ವ್ಯಕ್ತಿಯೊಬ್ಬರ ಒಳಪರಿಚಯ ಆತನಿಗೆ ಸಂತೋಷವನ್ನು ಉಂಟುಮಾಡುತ್ತದೆ.

ಗದ್ದೆಯ ಮತ್ತೊಂದು ಬದುವಿನಲಿದ್ದ ಅಜ್ಜಿಯ ಗುಡಿಸಲಿಗೆ ಹೋಗಿ ಹೊಟ್ಟೆತುಂಬ ಅಂಬಲಿಯನ್ನು ಕುಡಿದು ಅವರು ವಾಪಸ್ಸಾಗುತ್ತಾರೆ.

ಸಂಜೆ ಮತ್ತೊಂದು ಸುತ್ತು ಗದ್ದೆಗೆ ಬರುತ್ತಾನೆ ಲೋಕೇಶ. ಈ ಭಾರಿ ಆತನೊಟ್ಟಿಗಿದ್ದದ್ದು ಶಶಿ. ಗದ್ದೆಯ ಬದುವಿನ ಮೇಲೆ ಜೀವನದ ಬಗೆಗಿನ ನೂರಾರು ಮಾತುಗಳನ್ನಾಡಿ ಪಡುವಣದಲ್ಲಿ ಸೂರ್ಯ ಕಣ್ಮರೆಯಾಗುವವವರೆಗೂ ಇಬ್ಬರು ಅಲ್ಲಿ ಕೂತಿದ್ದರು. ತನ್ನ ಗದ್ದೆಯ ಪಕ್ಕಕ್ಕೆ ಯಾರೋ ಒಬ್ಬರು ಸಣ್ಣದಾಗಿ ಮಾಡಿದ್ದ ಭತ್ತದ ಗದ್ದೆಯ ತಿಳಿ ಹಸಿರ ಬಣ್ಣ ಲೊಕೇಶನನ್ನು ಆಕರ್ಷಿಸಿತು. ಲೋಕೇಶ ಆ ಗದ್ದೆಯನ್ನೇ, ಅವುಗಳಲ್ಲಿದ್ದ ಭತ್ತದ ತೆನೆಗಳನ್ನೇ ದೃಷ್ಟಿಯಿಟ್ಟು ನೋಡುತ್ತಾನೆ. ಆ ಒಂದೊಂದು ತೆನೆಗಳಲ್ಲೂ ಆತನಿಗೆ ಒಂದು ಮುಖಗಳು ಗೋಚರಿಸುತ್ತವೆ.

ಅಲ್ಲೊಂದು ಅಂಗಿಯರಿದಿರುವ ಅಳುವ ಮಗುವಿದೆ, ಸಣಕಲು ದೇಹದ ನೆಲದ ಮೇಲೆ ಬಿದ್ದು ನರಳುತ್ತಿರುವ ಒಬ್ಬ ಹಿರಿಯ ವೃದ್ಧನಿದ್ದಾನೆ, ಯುದ್ಧದ ಕಾರ್ಮೋಡ ಕವಿದಿರುವ ಪ್ರದೇಶದಲ್ಲಿ ಚಾವಣಿ ಕುಸಿದಿರುವ ಮನೆಯ ಮೂಲೆಯಲ್ಲಿ ಅಪ್ಪನೊಬ್ಬ ತನ್ನ ಸಂಸಾರವನ್ನು ತಬ್ಬಿಕೊಂಡು ನಿಂತಿದ್ದಾನೆ ಹಾಗು ನಾಯಿಮರಿಯೊಂದು ಹಸಿತದ ಹೊಡೆತಕ್ಕೆ ದಿಕ್ಕೆಟ್ಟು ಅತ್ತಿಂದ್ದಿತ್ತ ಒಡಾಡುತ್ತಿದೆ.

'ನೋಡು ಶಶಿ .. ಆ ಭತ್ತದ ಗದ್ದೆ ಅದೆಷ್ಟು ಜನರ ಹಸಿವನ್ನು ನಿವಾರಿಸುತ್ತದೆ ಅಂತ. ಇಲ್ಲಿ ಹಸಿರಾಗಿ ಮುಂದೆ ಯಾರದೋ ಜೀವದಲ್ಲಿ ಜೀವವಾಗುವ ಅದು ಕಳೆದ ಜನ್ಮದಲ್ಲಿ ಯಾವುದೊ ಮಹಾನ್ ವ್ಯಕಿಯಾಗಿ ಹುಟ್ಟಿರಬೇಕು ಅದಕ್ಕೆ ಈಗ ಅದು ಹಸಿವ ನೀಗಿಸುವ ಪುಣ್ಯ ಗದ್ದೆಯಾಗಿದೆ ' ಎಂದು ಸುಮ್ಮನಾಗಿ .. 'ನಾನು ಗದ್ದೆಯನ್ನು ಕಟ್ಟಬೇಕು .. ಆ ಮೂಲಕ ಅರ್ಥಪೂರ್ಣ ಜೀವಗಳನ್ನು ಅಲ್ಲಿ ಬೆಳೆಸಬೇಕು..' ಎಂಬ ತನ್ನ ಮುಂದಿನ ಗುರಿಯ ಮಾತನಾಡುತ್ತಾನೆ.

ಶಶಿಯ ಮಂದಹಾಸದ ಮೌನ ಲೊಕೇಶನ ಮಾತುಗಳಿಗೆ ಪೂರಕವಾಗಿರುತ್ತದೆ.

Continues ...

Friday, July 17, 2020

ಪಯಣ - 12

ಅದು ಹತ್ತು ಹನ್ನೆರೆಡರ ಎಳೆಯ ವಯಸ್ಸಾದರೂ ಪ್ರೀತಿ ಪ್ರೇಮವೆಂಬ ಅಸಹಜ ಭಾವವೊಂದು ಆ ಮುಗ್ದ ಮನಸ್ಸುಗಳಲ್ಲಿ ಮನಸ್ಸುಗಳಲ್ಲಿ ಹಾಸುಹೊಕ್ಕುವ ಸಮಯವದು.

'ಲೋ .. ರಾಕಿ ಕಟ್ಟಿದ್ದೀನಿ .. ದುಡ್ಡ್ ಕೊಡೊ..' ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಅನವಶ್ಯಕವಾಗಿ ಆದಿಯ ವೈರಿಯಾಗಿದ್ದ ಹುಡುಗನ ಕೊರಳು ಪಟ್ಟಿಯನ್ನಿಡಿದು ಕೇಳತೊಡಗಿದಳು ಖುಷಿ. ಇಡೀ ಕ್ಲಾಸಿನಲ್ಲೇ ತನ್ನೊಬ್ಬನಿಗೆ ಮಾತ್ರ ರಾಕಿ ಕಟ್ಟಿಸಿಕೊಳ್ಳುವ ಅಧಿಕಾರವಿದೆಯೇನೋ ಎಂಬಂತೆ ಆತ ಬೀಗುತ್ತಿದ್ದ. ಸ್ವಲ್ಪ ಹೊತ್ತಿನಲ್ಲೇ ತರಗತಿಯ ಇತರ ಹುಡುಗಿಯರೂ ಆತನನ್ನು ಸುತ್ತುವರೆದರು ಹಾಗು ತಮ್ಮ ಜೇಬಿನಲ್ಲಿದ್ದ ಬಣ್ಣ ಬಣ್ಣದ ರಾಖಿಯನ್ನು ಹೊರತೆಗೆದು ಅವನ ಕೈ ತುಂಬೆಲ್ಲ ಕಟ್ಟತೊಡಗಿದರು.

ಅದು ಚಿತ್ತಾಕರ್ಷಕ ರಾಖಿಯ ಮೋಡಿಯೋ ಅಥವಾ ತನ್ನನು ಖುಷಿ ‘ಇಗ್ನೋರ್’ ಮಾಡಿದಳೊ ಎಂಬ ಬಾಲಸಹಜ ಕೋಪವೋ ಅಥವಾ ತನ್ನ ಮುಂದೆ ಹುಡಗಿಯರ ಮುದ್ದು ಕೃಷ್ಣನಾದ ತನಗಿಂದಲೂ ಹೆಚ್ಚು ಅಂಕಗಳನ್ನು ಪಡೆಯುವ ಹುಡುಗನ ಮೇಲೆ ಮೂಡಿದ ಅಸೂಯೆಯೋ ಏನೋ ಒಟ್ಟಿನಲ್ಲಿ ಚೀರಾಡುತ್ತಿದ ಗುಂಪಿನಿಂದ ದೂರಬಂದು ಶಾಲೆಯ ಕಟ್ಟೆಯ ಮೇಲೆ ಕೂತ ಆದಿ.

ಅದೆಷ್ಟೋ ಹೊತ್ತಿನ ನಂತರ ಕ್ಲಾಸಿನಿಂದ ಹೊರಬಂದ ಖುಷಿ ಆದಿಯನ್ನುದ್ದೇಶಿಸಿ,

'ಇಲ್ಯಾಕೋ ಕೂತಿದ್ದೀಯ' ಎಂದು ಕೇಳಿದಳು.

'ಹೋಗೆ, ನನ್ನ್ ಹತ್ರ ಮಾತಾಡ್ಬೇಡ! ಇನ್ಮೇಲೆ ನಾನ್ ನಿನ್ನೊಟ್ಟಿಗೆ ಕಲ್ಲಾಟ ಆಡಲ್ಲ .. ನಮ್ಮ್ ಮನೆ ಹತ್ರ ಈಗ ಹೊಸ ಫ್ರೆಂಡ್ ಬಂದಿದ್ದಾಳೆ, ನಾನ್ ಅವಳೊಟ್ಟಿಗೇ ಇನ್ಮುಂದೆ ಕಣ್ಣಾ ಮುಚ್ಚಾಲೆ ಆಡ್ತೀನಿ..' ಆದಿಯ ಮುಖ ರಸ್ತೆಬದಿಯ ಆಲೂಬೋಂಡದಂತೆ ಊದಿಕೊಂಡಿತ್ತು.

'ಏನಾಯಿತೋ ಆದಿ.. ಯಾರಾದ್ರು ಬೈದ್ರಾ' ತನ್ನ ಸಹಜ ಕಳವಳದ ಧ್ವನಿಯಲ್ಲಿ ಆಕೆ ಕೇಳಿದಳು.

'ನೀನ್ ಅವ್ನಿಗೆ ಮಾತ್ರ ರಾಖಿ ಕಟ್ದೆ.. ನಂಗಿಲ್ವ?'

ಆದಿಯ ಪ್ರೆಶ್ನೆಗೆ ನಗತೊಡಗಿದ ಖುಷಿ 'ನಾನ್ ನಿಂಗೆ ರಾಕಿ ಕಟ್ಟಲ್ಲ ಕಣೋ..' ಎಂದಳು.

ಆದಿಯ ಕೋಪ ಇನ್ನೂ ವಿಪರೀತವಾಯಿತು. ತನ್ನೊಟ್ಟಿಗೆ ಕಲ್ಲಾಟವನ್ನು ಆಡಲು ತಂದಿದ್ದ ಕಲ್ಲುಗಳನ್ನು ದೂರಕ್ಕೆ ಎಸೆದು ಆದಿ ತರಗತಿಯ ಒಳಗೆ ಓಡಿದ.

'ಆದಿ ನಿಲ್ಲೋ .. ನಾನು ಬರ್ತೀನೋ ಕಣ್ಣಾ ಮುಚ್ಚಾಲೆ ಆಡೋದಿಕ್ಕೆ.. ನಿಲ್ಲೋ..'

ದಶಕದ ಹಿಂದಿನ ಹಿಂದಿ ಹಾಡುಗಳನ್ನು ಹಾಕಿ ಗರಗರನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನನ್ನು ಧಿಟ್ಟಿಸುತ್ತಾ ಅಂಗಾತ ಮಲಗಿದ್ದ ಆದಿ, ಆ ಹಾಡುಗಳು ಚಿತ್ರೀಕರಣಗೊಳುತ್ತಿದ್ದ ಕಾಲದ ತನ್ನ ಹಾಗು ಖುಷಿಯ ನೆನಪುಗಳನ್ನು ಕೆದಕತೊಡಗಿದ. ಆಕೆ ತನ್ನ ಬಿಟ್ಟು ಯಾರೊಟ್ಟಿಗೂ ಮಾತಾಡಬಾರದು, ಸೇರಬಾರದು, ಆಟವಾಡಬಾರದೆಂಬ ಹಠ ಈತನದ್ದಾರೆ ಇಡೀ ಶಾಲೆಗೆ ಶಾಲೆಯೇ ಖುಷಿಯನ್ನು ಸುತ್ತುವರೆಯುತ್ತಿತ್ತು. ದೂರದಿಂದಲೇ ಆಕೆಯ ನೀಳಜಡೆಯನ್ನು ದಿಟ್ಟಿಸುತ್ತಾ ಆಕೆ ಗುಂಪಿನಿಂದ ಹೊರಬರುವುದನ್ನೇ ಆತ ಕಾಯುತ್ತಿದ್ದ ಹಾಗು ಅಕೆಗೆಂದೇ ಹತ್ತಾರು ಕಲ್ಲುಗಳನ್ನು ತನ್ನ ಚಡ್ಡಿಯ ಜೇಬಿನಲ್ಲಿ ಇರಿಸಿಕೊಂಡಿರುತ್ತಿದ್ದ. ಆ ಎಳೆಯ ವಯಸ್ಸಿನಲ್ಲೇ ಕ್ಲಾಸಿನ ಇತರ ಹುಡುಗರು ಆದಿ ಖುಷಿಯೊಟ್ಟಿಗೆ ಇರಬಯಸುತ್ತಿದ್ದದ್ದನು ಕಂಡು ಕತ್ತಿ ಮಸೆಯುತ್ತಿದ್ದರು ಹಾಗು ಸುಖಾಸುಮ್ಮನೆ ಆದಿಯೊಟ್ಟಿಗೆ ಕಾದಾಡುತ್ತಿದ್ದರು! ರಾತ್ರಿಯ ವೇಳೆ ಕೆಲವೊಮ್ಮೆ ಮನೆಯವರೆಲ್ಲ ಹೊರಗೆ ಬಂದು ಮೆಟ್ಟಿಲುಗಳ ಮೇಲೆ ಕೂತರೆ ಈತ ತಮ್ಮ ಮನೆಯ ಕಾಂಪೌಂಡಿನ ಮೇಲೆ ಕೂತು ತಿಂಗಳ ಬೆಳಕಿನ ಆ ತಂಪು ರಾತ್ರಿಯಲ್ಲಿ ಒಂದೆರಡು ಕಿಲೋಮೀಟರ್ ಗಳು ದೂರವಿದ್ದ ನಗರದ ಮಧ್ಯಭಾಗದ ತೆಂಗಿನ ಮರಗಳ ಸಾಲನ್ನೇ ಧಿಟ್ಟಿಸುತ್ತಿದ್ದ. ಖುಷಿಯ ಮನೆಯೂ ಅಲ್ಲಿಯೇ ಇದ್ದರಿಂದ ಬಹುಷಃ ಅವಳೂ ಹೀಗೆ ಹೊರಬಂದು ನನನ್ನು ನೋಡುತ್ತಿರಬಹುದೆಂಬ ಅಮಾಯಕ ಕಲ್ಪನೆಯಿಂದ! ಅದೇನಕ್ಕೋ ತಿಳಿಯದು ಆ ಒಂದು ಶುಕ್ರವಾರದಂದು ಆದಿ ಆಕೆಯಿಂದ ಎರಡು ರೂಪಾಯಿ ಪಡೆದು ಮುಂದಿನ ವಾರದ ಸೋಮವಾರದಂದು ತಂದು ಹಿಂದಿರುಗಿಸಿದ್ದ. ಅಂತೆಯೇ ಶಾಲೆಯಲ್ಲಿ ನೆಡೆಸುತ್ತಿದ್ದ ಸಂಗೀತ ಕ್ಲಾಸಿಗೆ ಸೇರಿ ಅಲ್ಲಿನ ಶಿಕ್ಷಕಿ ಖುಷಿಯ ಧ್ವನಿ ಇಡಿದಿಡಿದು ಬಿಡುತ್ತಿದೆ ಎಂದು, ನಂತರದ ದಿನಗಳಿಂದ ಆಕೆ ಕ್ಲಾಸಿಗೆ ಬಾರದೆ ಹೋದಾಗ ಈತನೂ ಆ ಕ್ಲಾಸಿಗೆ ಗುಡ್ ಬೈ ಹೇಳಿದ್ದ. ಅರೆಬರೆ ನಾಟ್ಯದ ಸ್ಟೆಪ್ಪುಗಳನ್ನೇ ಕಲಿತು ಶಾಲೆಯ ಯೂನಿಯನ್ ಡೇ ಗೆ ಚಿತ್ರ ವಿಚಿತ್ರವಾಗಿ ಕುಣಿದು ಕುಪ್ಪಳಿಸಿದ ಆ ದಿನಗಳು ಅದೆಂತೆಂಹ ಜಂಜಾಟದ ದಿನಗಳಲ್ಲೂ ಆದಿಯ ಮನಸ್ಸಿಗೆ ಒಂದು ಮಂದಹಾಸವನ್ನು ನೀಡುತ್ತಿದ್ದವು. ಮುಖದ ಮೇಲೊಂದು ಸಂತೋಷದ ಕಳೆಯನ್ನು ಹೊತ್ತಿಸುತ್ತಿದ್ದವು.

ಸೀಲಿಂಗ್ ಫ್ಯಾನು ಗರಗರನೆ ತಿರುಗುತ್ತಲಿತ್ತು. 'ನಾ ತುಮ್ ಜಾನೋ ನ ಹಮ್..' ಎಂದು ಲಕ್ಕಿ ಅಲಿ ಪದಗಳಿಗೆ ಜೀವ ತುಂಬಿ ಹಾಡುತ್ತಿದ್ದ. ಕೂಡಲೇ ಆದಿಯ ಫೋನು ಟನ್ ಟನ್.. ಎಂಬ ಸದ್ದಿನೊಂದಿಗೆ ಬೆಳಗತೊಡಗಿತು. ರಾತ್ರಿ ಹನ್ನೊಂದರ ನಂತರ ತನ್ನ ಫೋನು ಸದ್ದು ಮಾಡಿತೆಂದರೆ ಸಾಕು ಆದಿಯ ಹೃದಯ ಅಮಾನುಷವಾಗಿ ಬಡಿಯತೊಡಗುತ್ತದೆ. ಟನ್ಗುಟ್ಟ ಆ ಎರೆಡು ಮೆಸೇಜುಗಳು ಖುಷಿಯ ಮೆಸ್ಸೇಜುಗಳೇ ಎಂದು ಹೃದಯ ಹೇಳುತ್ತಿರಲು, ಅವು ಆಕೆಯ ಮೆಸೇಜುಗಳೇ ಆಗಿರಲಿ ಎಂದು ಮನಸ್ಸೂ ಸಹ ಬೇಡಿಕೊಳ್ಳುತ್ತಿತ್ತು. ವಾರಗಳ ನಂತರ ಮೊದಲ ಬಾರಿಗೆ ಬಂದಿರಬಹುದಾದ ಆಕೆಯ ಮೆಸೇಜುಗಳು ಆದಿಯ ದುಗುಡವನ್ನು ದೂರ ಮಾಡಿದ್ದವು. ಆದಿ ಸುಮ್ಮನಾದ. ಅದೆಷ್ಟು ಹೊತ್ತಿನವರೆಗೆ ತನ್ನನ್ನು ತಾನು ತಡೆದುಕೊಳ್ಳಬಲ್ಲೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಎಂದುಕೊಳ್ಳುವ ಮೊದಲೇ ಆತನ ಕೈಗಳು ಮೊಬೈಲನ್ನು ಅನ್ ಲಾಕ್ ಮಾಡಿದ್ದವು!

'Hi.. How are you..' ಎಂದು ಕಳಿಸಿದ್ದ ಆಕೆಯ ಮೆಸ್ಸೇಜುಗಳನ್ನು ನೋಡಿಯೇ ಆದಿಯ ಕಣ್ಣಂಚುಗಳು ಒದ್ದೆಯಾಗತೊಡಗಿದವು. ಕಳೆಗಟ್ಟಿದ್ದ ಫೋನಿಗೆ ಏನೋ ಒಂದು ಹೊಸತನವನ್ನು ಆ ಪದಗಳು ತಂದಿದ್ದವು. ಆದಿಯ ಮುಖದ ಮೇಲಿದ್ದ ದುಃಖದ ಸಿಕ್ಕುಗಳು ಮರೆಯಾಗಿದ್ದವು ಹಾಗು ಆಕೆಯ ಮೇಸಜಿಗೆ ಪ್ರತ್ಯುತ್ತರವಾದ ಮೆಸೇಜನ್ನು ಕಳುಹಿಸುವುದ ಬಿಟ್ಟು ಆತ ಆ ನಡುರಾತ್ರಿಯಲ್ಲಿಯೇ ಆಕೆಗೆ ಫೋನಾಯಿಸಿದ!


****

ಬೆಳ್ಳಂಬೆಳೆಗೆ ಎಲ್ಲರಿಗಿಂತ ಮೊದಲೇ ಎದ್ದು ರೆಡಿಯಾದ ಆದಿ ಲೊಕೇಶನನ್ನು ತನ್ನ ಕಾಲಿನಿಂದ ತಿವಿಯತೊಡಗಿದ. ನೆನ್ನೆ ರಾತ್ರಿಯವರೆಗೂ ಇಹಲೋಕದ ಕಲ್ಪನೆಯನ್ನೇ ಮರೆತು ಜೈಲುವಾಸಿಯಾಗಿದ್ದಂತಹ ಈತನಿಗೆ ಏನಾಗಿರಬಹುದೆಂದು ಆ ನಿದ್ದೆಗಣ್ಣಿನಲ್ಲೂ ನಾನು ಯೋಚಿಸತೊಡಗಿದೆ.

'ತತ್ ತೇರಿ .. ಏನಾ ಲೈ ನಿಂದು..!!' ಲೋಕೇಶ ಒಮ್ಮೆಲೇ ಅರಚಿದ.

'ಗುರು ಬನ್ನಿ ಜಾಗಿಂಗ್ಗೆ .. ಅದೇನೋ ಅವತ್ತು ಸೂಪರ್ ಆಗ್ ಓಡ್ತಿಯ .. ಅದು .. ಇದು ಅಂತಿದ್ರಿ..' ಮೂದಲಿಸುವ ಧ್ವನಿಯಲ್ಲಿ ಆದಿ ಹೇಳಿದ.

ಆತನ ಮಾತನ್ನು ಕೇಳಿ ಸುಮ್ಮನಾದ ಲೋಕಿ ನಿಧಾನವಾಗಿ ಮೇಲಿದ್ದು ಕಣ್ಣುಮುಚ್ಚಿಕೊಂಡೇ ಆಕಳಿಸುತ್ತಾ, ' ದೇವ್ರು ನಿಂಗೆ ಒಳ್ಳೆ ಬುದ್ದಿ ಕೊಟ್ಟಿದ್ದಾನೆ.. ಒಳ್ಳೇದಾಗ್ಲಿ.. ತಾವ್ ಈಗ ಹೋಗಿ ಜಾಗಿಂಗ್ ಮಾಡ್ತಾ ಇರಿ.. ನಾನ್ ಇನ್ ಅರ್ಧ ಗಂಟೇಲಿ ಬರ್ತೀನಿ' ಎಂದು ಆತನನ್ನು ಕಳುಹಿಸಿದ. ಆದಿ ಇನ್ನೂ ಬಾಗಿಲನ್ನು ದಾಟುವ ಮೊದಲೇ,

'ನೋಡೋ ಬಡ್ಡಿ ಮಗ್ನೆ .. ಹುಡ್ಗಿ ಅಂತ ಒಂದ್ ಇದ್ರೆ ಲೈಫಲ್ಲಿ ಏನೇನೆಲ್ಲಾ ಚೇಂಜ್ ಆಗುತ್ತೆ .. ನೀನು ಇದ್ದೀಯ .. ಆ ಟೀಚರ್ ಅಂಟಿನ ಇಟ್ಕೊಂಡು..' ಎನುತ ಮಕಾಡೆ ಬಿದ್ದು ನಿದ್ರಿಸತೊಡಗಿದ.

'ಲೋಫರ್ ನನ್ ಮಗ್ನೆ .. ರಾಧಾ ಅಂತ ಅವ್ರ್ ಹೆಸ್ರು' ಎಂದು ಆತನ ಅಂಡಿನ ಮೇಲೊಂದು ಜೋರಾಗಿ ಜಾಡಿಸಿ ಒದ್ದ ನಾನು 'ನಮ್ಮೊಳಗಿನ ಸುಖಕ್ಕೆ ಪರಜನರ ಕೊಡುಗೆ ಇಷ್ಟ್ಯಾಕೆ?' ಎಂದು ಯೋಚಿಸುತ್ತಲೇ ಬೆಳಗಿನ ಮತ್ತೊಂದು ಸುತ್ತಿನ ಗತ್ತಿನ ನಿದ್ದೆಗೆ ಜಾರಿದೆ.

ಲೋಕೇಶ ಫೀಲ್ಡ್ ನ್ನು ತಲುಪುವ ಮೊದಲೇ ಆದಿ ಮೂರ್ನಾಲ್ಕು ಸುತ್ತನ್ನು ಓಡಿ ಅರ್ವತ್ತರ ಆ ವ್ಯಕ್ತಿಯೊಟ್ಟಿಗೆ ಸಂಭಾಷಿಸುತ್ತಿದ್ದ. ಆದಿ ಹೋದವನೇ ಅವರಿಗೆ ವಂದಿಸಿ ಆದಿಯನ್ನು ಪಕ್ಕಕ್ಕೆ ಕರೆತಂದು,

'ಏನಪ್ಪಾ ಬೋಧನೆ ಮಾಡ್ತಾ ಇದ್ದ ಆ ಬುಡ್ಡ' ಎಂದು ಕೇಳಿದ.

'ಏನು ಇಲ್ಲ .. ನೀನ್ ಸೂಪರ್ ಆಗಿ ಓಡ್ತಿಯ.. ಬ್ರಿಲಿಯಂಟ್ .. ಫೆಂಟಾಸ್ಟಿಕ್..ಅಂತ ಹೇಳ್ತಾ ಇದ್ರಪ್ಪ.’

'ಬ್ರಿಲಿಯಂಟ್, ಫೆಂಟಾಸ್ಟಿಕ್… ಸೀರಿಯಸ್ಲೀ!?' ಅಣುಕಿಸುವವನಂತೆ ಲೋಕಿ ಆದಿಯನ್ನು ಕೇಳಿದ.

'ಇರ್ಬಹುದು ಗುರು .. ಯಾಕೆ ತಮ್ಗೆ ಜಲಸಿನ?'

'ತಂದೆ.. ಕೋಣ ಒಡ್ದನ್ಗೆ ಓಡಿದ್ರೆ ಅದನ್ನ ಯಾರೂ ರನ್ನಿಂಗ್ ಅನ್ನಲ್ಲ.. ಗೊತ್ತಿರ್ಲಿ .. ಅಲ್ಲೂ ಸ್ವಲ್ಪ ನ್ಯಾಕು, ಟೆಕ್ನಿಕು ಅನ್ನೊದು ಇರುತ್ತೆ.. ಆ ಬುಡ್ಡ ಅಂಕಲ್ ಇಡೀ ಲೈಫಲ್ಲಿ 5 km/hr ಗಿಂತ ಹೆಚ್ಚು ಓಡಿರೋದೇ ಇಲ್ಲ ಅಂತದ್ರಲ್ಲಿ ನೀನ್ ಒಳ್ಳೆ ಅವ್ನ್ ಮಾತ್ ಕೇಳ್ತಾ ಇದ್ದೀಯಲ್ಲ .. ಫ್ಯಾಕ್ಟ್ ಹೇಳ್ತಿನಿ ಕೇಳು.. ಫಸ್ಟ್ ಆಫ್ ಆಲ್ ನಿನ್ ರನ್ನಿಂಗ್ ರನ್ನಿಂಗೇ ಅಲ್ಲ, ಓಕೇ?.. You have to go a long way ahead .. Morever, 400 ಮೀಟರ್ ರನ್ನಿಂಗ್ ಅಲ್ಲಿ ಡಿಸ್ಟ್ರಿಕ್ ಲೆವೆಲ್ ರೆಕಾರ್ಡ್ 44 ಸೆಕೆಂಡ್ಸ್.. So, ಸದ್ಯಕ್ಕೆ ನಿನ್ ಟಾರ್ಗೆಟ್ ಅದನ್ನ ಬೀಟ್ ಮಾಡೋದು.. ಮೊನ್ನೆ ನೀನು ಓಡ್ತಾ ಇದ್ದಾಗ, according to my calculation it was approximately 54 Seconds.. You still got to to improve 10 Seconds.. mind it!'

ಲೊಕೇಶನ ಮಾತನ್ನು ಕೇಳಿ ಕೊಂಚ ಮುನಿಸಿಕೊಂಡವನಂತಾದ ಆದಿ ಬೇರೆ ದಾರಿ ಕಾಣೆದೆ ತಲೆಯನ್ನು ಅಲ್ಲಾಡಿಸಿದ ಹಾಗು ಇಂದೇ ಎಲ್ಲ ರೆಕಾರ್ಡ್ಗಳನ್ನು ಮುರಿಯುವವನಂತೆ ಪುನ್ಹ ನಾಲ್ಕು ಸುತ್ತನ್ನು ಜೀವ ಬಿಟ್ಟು ಓಡಿದ.

ಈ ಬಾರಿ ಲೋಕೇಶನ ಟೈಮರ್ನ ಸಮಯ 52.5 ಸೆಕೆಂಡ್ಗಳೆಂದು ತೋರಿಸುತ್ತಿತ್ತು.


****


ಕಾರಿಡಾರಿನ ಆ ಕಡೆಯಿಂದ ರಾಧಾ ಬರುತಿರಲು.. ನನ್ನ ಸುತ್ತಲಿನ ಪ್ರಪಂಚ ಒಮ್ಮೆಲೇ ಸ್ತಬ್ದವಾದಂತಾಗಲು...ನಾಗರಹಾವು ಚಿತ್ರದ ‘ಬಾರೆ ಬಾರೆ..’ ಹಾಡಿನ ಸ್ಲೋ ಮೋಶನ್ ಫ್ರೆಮ್ಗಳು ನನ್ನ ಕಣ್ಣ ಮುಂದೆ ಒಂದೊಂದಾಗಿಯೇ ಬರತೊಡಗಿದವು.

ಜೇನಿನ ನೆಡೆಯಂತೆ ರಾಧಾ ನನ್ನ ಹತ್ತಿರಕ್ಕೆ ಬಂದರು.

'What the fuck you guys think about youself, uh?' ಎಲ್ಲಿಲ್ಲದ ಆವೇಶದಲ್ಲಿ ಆಕೆ ಸಿಡಿಲಬ್ಬರಿಸಿದಂತೆ ಕೂಗತೊಡಗಿದವು. ತಣ್ಣನೆಯ ಗಾಳಿ ಅವರ ಮುಂಗುದಲೆರಡನ್ನು ತೋಯ್ಸಿ ಅವರ ಕೋಪಭಾವದ ಅಂದವನ್ನು ದುಪ್ಪಟ್ಟಾಗಿಸಿತ್ತು. 'ಕಮ್ ಟು ಟೆರೇಸ್..' ಎಂದು ನನ್ನನ್ನು ಇಲ್ಲಿ ಕಾಯಲೇಳಿ ಅದಾಗಲೇ ಅರ್ಧ ತಾಸೇ ಸಂದಿದ್ದವು.

'ಸಮಾಧಾನ.. ಕೂಲ್.. ಏನಾಯಿತು ಅಂತ ನಿಧಾನಕ್ಕೆ ಹೇಳಿ' ನಾನೆಂದೆ.

'ಎಲ್ಲಿ ಆ ನಿನ್ ರೂಮೇಟ್ ಲೋಕೇಶ ..ಈಡಿಯಟ್.. '

'ಹಲೋ .. Mind your language.. He is not just my roomate .. he is like my brother..'

'So, ಬ್ರದರ್ ಆದ್ ಮಾತ್ರಕ್ಕೆ ಸಿಕ್ ಸಿಕ್ದವರ್ನ ಸೋಶಿಯಲ್ ಮೀಡಿಯಾದಲ್ಲಿ ಮಾನ ಹಾರಾಜ್ ಹಾಕ್ ಬಹುದಾ ಅವ್ನು?'

'ಸೋಶಿಯಲ್ ಮೀಡಿಯಾನ?!'

'ಹೌದು ಸಾರ್ .. To be precise it’s called Orkut’

'ಏನ್ ಮಾಡ್ದ ಅಂತ ಸರಿಯಾಗಿ ಹೇಳಿ ರಾಧಾ .. don't drag it unnecessarily' ನಾನು ಬೇಕಂತಲೇ ಗೊತ್ತಿರದವಂತೆ ನಟಿಸಿದೆ.

'Nothing unnecessary here..ಏನ್ ದೊಡ್ಡ್ ಸೋಶಿಯಲ್ ರಿಫಾರ್ಮೆರ ಅವ್ನು ..’ ಎಂದು ಕೆಲಕ್ಷಣ ನನ್ನನು ತೀಕ್ಷ್ಣವಾಗಿ ನೋಡಿ 'ಮಾಲಲ್ಲಿ ತಿಂದು ಬಾಡಿ ಅಲ್ದೆ ಬುದ್ಧಿನೂ ಕೊಬ್ಬಿದೆ, New Generation Hypocrisy ಅಂತ ಏನೇನೋ ಬಾಯಿಗೆ ಬಂದಾಗೇ ಬರ್ದು ಜನರ ಫೋಟೋ ಟ್ಯಾಗ್ ಮಾಡಿ ಮಾನ ಹರಾಜ್ ಮಾಡ್ತಾನಲ್ಲ ಅವ್ನ್ ಏನು ಬಾರಿ ಸಾಚಾನಾ.. ಅಲ್ಲ ಅವ ಯಾವಾಗ ಕಾಲೇಜಲ್ಲಿ ಕೂತಿರೋದನ್ನ ನೋಡಿದ್ದೀವಿ ಹೇಳು..ಯಾವಾಗ್ ನೋಡಿದ್ರು ಗದ್ದೆ ಶುಠಿ ಅಂತ .. Is he even called as a student first of all ..ಫುಡ್ ಬಗ್ಗೆ ಬರೀತಾನೆ ಲೋಫರ್..'

'ರೀ.. ಅವ್ನ್ ಏನ್ ಮಾಡ್ಬಾರ್ದನ್ನು ಮಾಡ್ತಾ ಇಲ್ಲ .. ಕೃಷಿ ಮಾಡೋದೂ ಒಂದ್ ಕಲೆ.. ಅಪ್ಪನ್ ದುಡ್ಡ್ ಇದೆ ಅಂತ ಮೇಲಿಂದ ಕೆಳಕ್ಕೂ ಅದ್ರಲ್ಲೇ ಸ್ನಾನ ಮಾಡೋರ್ ಮದ್ಯೆ he is earning his own.. ಅವ ಮನ್ಸ್ ಮಾಡಿದ್ರೆ ಕ್ಲಾಸಲ್ಲಿ ಕೂತು ಓದದೇನೆ ಕಾಲೇಜಿಗೆ ಟಾಪ್ ಬರಬಲ್ಲ.. Don’t underestimate him.. ಮಕ್ಕಳಿಗಿಂತ ಕಡೆಯಾಗಿ ತಿಂದು ಪ್ರಾಣಿಗಳ ತರ ಗಬ್ಬೆಬ್ಬಿಸಿ ಒಬ್ಬ ಕ್ಲೀನರ್ ಬಾಯನ್ನು ಕ್ಲೀನಿಂಗ್ ಮಷೀನ್ ತರ ನೋಡೋ ಜನಗಳಿಗೆ ಆತರ ಮಾಡಿದ್ರೆ ತಪ್ಪೇನಿದೆ..' ತೀಕ್ಷ್ಣವಾಗಿಯೇ ನಾನು ಪ್ರತಿಕ್ರಿಯಿಸಿದೆ.

'ಇಡೀ ಕ್ಲಾಸ್ ರೂಮಲ್ಲಿ ಟೀಚರ್ಸ್ನ ಟೀಸ್ ಮಾಡ್ತಿರ್ಬೇಕಾದ್ರೆ ಎಲ್ಲಿ ಹೋಗಿತ್ತು ಇವ್ನ ಈ ಫಿಲೋಸಫರ್ ಟೀಚಿಂಗ್ಸು? ಇವ್ನ್ ತಪ್ಪ್ ಮಾಡಿದ್ರೆ ಎಲ್ಲ ಓಕೆ. ಬೇರೆಯವರ್ ಮಾಡಿದ್ರೆ ಮಾತ್ರ ಸಮಾಜ ಸೇವಕ ಆಗ್ತಾನ? Listen, ಇಂಟರ್ನೆಟ್ ಇದೆ ಅಂತ ಸಿಕ್ ಸಿಕ್ದವ್ರ ಮಾನ ಹಾರಾಜ್ ಹಾಕಿದ್ರೆ ಹುಷಾರ್.. ನಿನ್ ಬ್ರದರ್ಗೆ ಹೇಳು.. ಡಿಫೆಮೇಷನ್ ಕೇಸ್ ಹಾಕಿದ್ರೆ ಮುಂದೆ ಏನ್ ಆಗುತ್ತೆ ಅಂತಾನೂ ಗೊತ್ತಿರ್ಲಿ'

ಕೊಬ್ಬಿ ಕೂತಿರುವ ಆ ದೇಹಗಳಿಗೆ ಫೇಮ್ ಎಂಬ ಪದದ ಕಲ್ಪನೆಯೇ ಇದ್ದಂತೆ ನನಗೆ ಕಾಣಲಿಲ್ಲ. ನಗುವನ್ನು ನಾನು ತಡೆದುಕೊಂಡೆ.

'ಏನ್ರಿ ಒಳ್ಳೆ ಕೊಲೆ ಮಾಡಿರೋ ರೀತಿ ಹೇಳ್ತಾ ಇದ್ದೀರಾ..'

'ಯಸ್ ಅದು ಒಂದ್ ರೀತಿಲಿ ಕೊಲೆನೆ.. ಕ್ಯಾರೆಕ್ಟರ್ ಮರ್ಡರಿಂಗ್ ಇನ್ ಸೋಶಿಯಲ್ ಮೀಡಿಯಾ!'

'ರೀ..ಹೋಗ್ಲಿ ಬಿಡ್ರಿ ...ಯಾರ್ದೋ ಬಗ್ಗೆ ಯಾರ್ ಏನೋ ಬರ್ದ್ರು ಅಂತ ನೀವ್ಯಾಕೆ ಅಷ್ಟ್ ಫ್ರಸ್ಟ್ಟ್ರೇಟ್ ಆಗ್ತೀರಾ ..'

'ಯಾರ್ ಬಗ್ಗೆ ಆದ್ರೂ ಅಷ್ಟೇ .. Being a citizen of the country it’s my responsibility! Moreover ನಿನ್ ಬ್ರದರ್ ಟ್ಯಾಗ್ ಮಾಡಿದ್ದು ಬೇರೆ ಯಾರನ್ನು ಅಲ್ಲ ನನ್ನ ಅಣ್ಣ ಮತ್ತು ಅತ್ಗೆನ, ನೆನ್ಪ್ ಇರ್ಲಿ!'

ಅವರ ಕೊನೆಯ ಮಾತನ್ನು ಕೇಳಿ ನನ್ನ ಗಂಟಲು ಮರುಭೂಮಿಯ ಬರ ನೆಲದಂತಾಯಿತು. ಪದಗಳೇ ಮೂಡದ ನನ್ನಲ್ಲಿ.'ಒಹ್..' ಎಂದಷ್ಟೇ ಹೇಳಲು ಶಕ್ತನಾಗುವಷ್ಟು ಮಾತ್ರ ಶಕ್ತಿ ಉಳಿಯಿತು. ಭೇಟೆಗಾರ ಕುದ್ದು ತನ್ನ ಭೇಟೆಗೇ ಸಿಲುಕಿಗೊಂಡ ಪರಿಸ್ಥಿತಿ. ಲೊಕೇಶನ ಪರವಾಗಿ ವಾದಿಸಿದರಿಂದಲೋ ಅಥವ ಅಂದು ಆಕೆಗೆ ‘ದಿ ಕಿಸ್..’ ಕೊಡಲಿಲ್ಲವೆಂಬ ಕೋಪದಿಂದಲೋ ಅಥವ ಇತ್ತೀಚೆಗೆ ಬೇಕಂತಲೇ ನಾನು ಆಕೆಯನ್ನು ಅವಾಯ್ಡ್ ಮಾಡುತ್ತಿದ್ದೇನೆಂಬ ಸಂಶಯದಿಂದಲೋ ಏನೋ ಆಕೆ ಮತ್ತಷ್ಟು ಉದ್ವಿಗ್ನಗೊಂಡವಳಂತೆ ಸಿಡಿಮಿಡಿಗೊಳ್ಳುತ್ತಾ ಅಲ್ಲಿಂದ ಹೊರಟಳು.

ಹಿತವಾಗಿ ಬೀಸುವ ಗಾಳಿಯನ್ನು ಬಡಿದು ಓಡಿಸುವಂತೆ ಆಡುತ್ತಿದ್ದ ಆಕೆಯ ಕೋಪಿಷ್ಠ ಕೂದಲನ್ನೇ ನಾನು ತದೇಕಚಿತ್ತದಿಂದ ನೋಡುತ್ತಾ ನಿಂತೆ.



****





'ಒಹ್ ಶಿಟ್ .. ಏನೋ ಇದು..?!' ಕೈಗಳೆರಡನ್ನು ತನ್ನ ಹಿಂತಲೆಗೆ ಹೊತ್ತುಕೊಟ್ಟು ಬೆಳ್ಳಂಬೆಳೆಗೆ ಡಿಸ್ಟ್ರಿಕ್ಟ್ ಫೀಲ್ಡನ ಸ್ಟೇಜ್ನ ಮೇಲೆ ನೆಡೆಯುತ್ತಿದ್ದ ಯಾವುದೊ ಸಾರ್ವಜನಿಕ ಸಮಾರಂಭವನ್ನು ಆತಂಕದಿಂದ ನೋಡುತ್ತಾ ಹೇಳಿದ ಲೋಕೇಶ. ಅಲ್ಲಿಗೆ ಬರುವವರೆಗೂ ಲವಲವಿಕೆಯಿಂದಿದ್ದ ಆತ, ರನ್ನಿಂಗ್ ಟ್ರ್ಯಾಕನ್ನೂ ದಾಟಿ ನೆರೆದಿದ್ದ ಜನಸಮೂಹವನ್ನು ಕಂಡು ಹತಾಶನಾದ. ಆತನ ಹಿಂದೆಯೇ ಬಂದ ಓಟಗಾರ ಆದಿ ತನ್ನ ಓಟಕ್ಕೆ ಸಾಸಿವೆಕಾಳಿನಷ್ಟೂ ಸಂಬಂಧವಿರದ ಮಾರ್ಕ್ ಟೈಸನ್ನ ಬಾಕ್ಸಿಂಗ್ ಪಂಚ್ಗಳನ್ನು ಗಾಳಿಯಲ್ಲಿ ತೇಲಿಬಿಡುತ್ತಾ, ಪ್ರತಿ ಅರೆಕ್ಷಣಕ್ಕೂ 'ಡುಫ್ .. ಡುಫ್' ಎಂಬ ಸದ್ದಿನೊಟ್ಟಿಗೆ ಜಿಗಿದು ಜಂಪ್ ಮಾಡುತ್ತ ನಿಂತಿದ್ದ. ಅದು ಖುಷಿಯ ಖುಷಿಯೋ ಅಥವಾ ಓಟದ ಖುಷಿಯೋ ತಿಳಿಯದು. ಲೋಕೇಶ ತನ್ನ ತಲೆಯ ಮೇಲೆ ಕೈಹೊತ್ತು ನಿಂತಿದ್ದನ್ನೂ ಸಹ ಆತ ಲೆಕ್ಕಿಸಲಿಲ್ಲ. 'ಯಾ .. ಹೂ .. ಡುಫ್..' ಎಂದು ಸದ್ದು ಮಾಡುತ್ತಾ ಕೊನೆಗೆ ಬ್ರುಸ್ಲಿ ಮಹಾಶಯನನ್ನೂ ನಡುವಿನಲ್ಲಿ ತಂದು ಕುಣಿಯುತ್ತಿದ್ದ. ಅದೆಷ್ಟೋ ನಿಮಿಷಗಳವರೆಗೂ ಲೋಕೇಶ ಮುಂದುವರೆಯದನ್ನು ಕೊನೆಗೂ ಗ್ರಹಿಸಿದ ಆತ,

'Any problems buddy?!' ಎಂದು ತನ್ನ ಮುಷ್ಟಿಯನ್ನು ಮುಖದ ಮುಂದಿನ ನಿರ್ವಾತ ಪ್ರದೇಶದಲ್ಲಿ ಯಾವುದೊ ಕಾಲ್ಪನಿಕ ಬಿಂದುವಿನೆಡೆಗೆ ಗುರಿಮಾಡಿ ಒಂದೇ ಸಮನೆ ಬಡಿಯ ತೊಡಗಿದ.

'ಏನಲೇ ನಿಂದು .. ಥು.. ಮುಚ್ಕೊಂಡ್ ಒಂದ್ ಸೆಕೆಂಡ್ ನಿಂತು ಆಕಡೆ ನೋಡು' ಎನುತ ಸಾರ್ವಜನಿಕರನ್ನು ಉದ್ದೇಶಿಸಿ ಅರಚುತಿದ್ದ ರಾಜಕಾರಣಿಗಳ ಸ್ಟೇಜನ್ನು ತೋರಿಸಿದ ಲೋಕೇಶ. .

'ಅರ್ರೆ, ಏನೋ ಇದು .. ಬೆಳ್ ಬೆಳ್ಗೆ. ಇವ್ರಿಗೆ ಮಾಡೋಕ್ ಬೇರೆ ಏನ್ ಕೆಲ್ಸ ಇಲ್ವ..' ಕೊನೆಗೂ ಇಹಲೋಕಕ್ಕೆ ಬಂದವನಂತೆ ಆದಿ ನುಡಿದ.

'ಅವ್ರಿಗೆ ಕೆಲ್ಸ ಇಲ್ಲ ಆದ್ರೆ ಇವ್ರಿಗ್ ಏನಾಗಿದ್ಯಪ್ಪ ..’ ಎಂದು ಅಲ್ಲಿ ನೆರೆದಿದ್ದ ಜನಸಮೂಹನ್ನು ನೋಡಿ ‘ವಾಕಿಂಗೆ ತುಂಬಾ ಜನ ಬರ್ತಾರೆ ಅಂತಾನೆ ಇಲ್ಲೇ ಪ್ರೋಗ್ರಾಮ್ ಹಾಕೊಂಡಿರೋದು ಕರ್ಮದವ್ರು' ಎಂದ.

'ಹೋಗ್ಲಿ ಬಿಡ್ ಮಚಿ .. ಒಂದ್ ದಿನ ತಾನೇ .. ರನ್ನಿಂಗ್ ನಾಳೆ ಕಂಟಿನ್ಯೂ ಮಾಡಿದ್ರೆ ಆಯ್ತು..' ಎಂದು ಆದಿ ಹೊರಡಲು ಅಣಿಯಾದ.

'ಇಟ್ಸ್ ನಾಟ್ ಅಬೌಟ್ ದಟ್ ' ಎಂದು ಸುಮ್ಮನಾದ ಲೋಕೇಶ 'ಬಾ..' ಎಂದು ಆದಿಯೊಟ್ಟಿಗೊಡಗೂಡಿ ಸ್ಟೇಜಿನ ಬಳಿಗೆ ನೆಡೆದ.

ಒಲ್ಲದ ಮನಸ್ಸಿನಲ್ಲಿಯೇ ಆದಿ ಆತನನ್ನು ಹಿಂಬಾಲಿಸಿದ.

ಅಮೆರಿಕಾದವರು ಇನ್ನೇನು ಬಂದು ಅಣುಬಾಂಬನ್ನು ಸುರಿದುಬಿಡುವರೋ ಎಂದರಿತು ಮಾಡುವ ಎಮರ್ಜೆನ್ಸಿ ಮೀಟಿಂಗ್ನಂತೆ ಜಿಲ್ಲೆಯ ಹೆಚ್ಚು ಕಡಿಮೆ ಅಷ್ಟೂ ರಾಜಕೀಯ ತಲೆಗಳು ಆ ವಿಶಾಲ ಸ್ಟೇಜಿನ ಮೇಲೆ ರಾರಾಜಿಸಿದ್ದವು. ಇಡೀ ಸಿಟಿಯ ಶಾಂತ ಮುಂಜಾವಿನ ಪರಿಸರವನ್ನು ತನ್ನ ಕರ್ಕಶ ಶಬ್ದದಿಂದ ಹಾಳುಗೆಡವುವಂತೆ ಧ್ವನಿವರ್ಧಕವು ಶಕ್ತಿಮೀರಿ ಅರಚುತಿತ್ತು. ಸ್ಟೇಜಿನ ಕೆಳಗ್ಗೆ ನಿಂತಿದ್ದ ಪಕ್ಷದ ಕಟ್ಟಾ ಕಾರ್ಯಕರ್ತರು ಮೇಲೆ ನೆಡೆಯುತ್ತಿದ್ದ ಭಾಷಣವೊಂದನ್ನು ಆಲಿಸುವುದ ಬಿಟ್ಟು ಸಾಧ್ಯವಾದ ಬೇರೆಲ್ಲ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 'ರಂಗಣ್ಣ .. ನೆನ್ನೆ ಬಾಟ್ಲಿಗೆ 200, ಇವತ್ತ್ ಬೆಳಗ್ಗೆ ಬಿರಿಯಾನಿ ಊಟಕ್ಕೆ 250, ಬಸ್ ಚಾರ್ಜು 50 ಅಂತ ಒಟ್ಟ್ 500 ರೂಪಾಯಿ ಪೀಕಿದ್ರಲ್ಲ, ಎಲ್ಲಿ, ನೆಟ್ಟಗೆ 10 ಜನಾನು ಇಲ್ವಲ್ರಿ?' ಎಂಬ ಸಂಭಾಷಣೆಗಳೇ ಅಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದವು.

'ಪ್ರಿಯ ಜನರೇ .. ಇದು ನೆಡೆಯಲ್ಲ .. ಇಂತ ಗೊತ್ತು ಗುರಿ ಇಲ್ಲದ ಸರ್ಕಾರ ಯಾರಿಗೆ ತಾನೇ ಬೇಕು .. ನಾವೆಲ್ಲಾ ಒಗ್ಗಟ್ಟಾಗಿ ಇಂದು ಸರ್ಕಾರದ ವಿರುದ್ಧ ಸಮರ ಸಾರ್ಬೇಕು..ಇಲ್ಲ ಅಂದ್ರೆ ನಮ್ಗೆ ಉಳಿಗಾಲವಿಲ್ಲ..' ಎಂದು ಒಬ್ಬ ರಾಜಕಾರಣಿ ತನ್ನ ಗಂಟಲು ಹರಿಯುವಂತೆ ಚೀರತೊಡಗಿದ. ಆತ ಇತರೆ ರಾಜ್ಯಗಳ ಹೋಲಿಕೆಯನ್ನು ನೀಡುತ್ತಾ ಅಲ್ಲಿ ಅಷ್ಟು ಸಾಲ ಮನ್ನವಾಗಿದೆ, ಇಲ್ಲಿ ಇಷ್ಟಾಗಿದೆ ಎಂದು ಕೊನೆಗೆ ತಮ್ಮ ರಾಜ್ಯದ 'ಶೂನ್ಯ ಸಾಧನೆ'ಯನ್ನು ಹೀಯಾಳಿಸುತ್ತ ಆತ ತನ್ನ ಭಾಷಣವನ್ನು ಮುಂದುವರೆಯುತ್ತಾನೆ. ಸರ್ಕಾರ ಬಿದ್ದರೆ ಜಾತಿ ಕೋಟದ ಮೇಲೆ ಹೈ ಪ್ರೊಫೈಲ್ ಮಿನಿಸ್ಟರ್ಗಿರಿಯನ್ನು ತನ್ನದಾಗಿಸಿಕೊಳ್ಳುವ ಆತನ ಆಸೆಯ ಹೊಳಪು ಬಲ್ಲವರಿಗೆ ಮಾತ್ರ ತಿಳಿದಿತ್ತು.

'ನಿಮ್ಮ ಎದೆ ಮುಟ್ಕೊಂಡ್ ಹೇಳಿ .. ನಿಮ್ಗೆ ಇಂತ ಸರ್ಕಾರ ಬೇಕಾ.. ಬಡವರ ರಕ್ತ ಹೀರೊ ಇಂತ ನಾಯಕರು ಬೇಕಾ' ಶಾಲಾ ಮಕ್ಕಳಿಗೆ ನಿಮ್ಗೆ ಭಾನುವಾರ ತರಗತಿಗಳು ಬೇಕಾ ಎಂಬಂತೆ ಆತ ನೆರೆದಿದ್ದ ಅಷ್ಟೂ ತಲೆಗಳನ್ನು ಉದ್ದೇಶಿಸಿ ಆತ ಕೇಳಿದ.

'ಬೇಡ .. ಬೇಡ .. ಬೇಡ ಆನ್ರೋ..' ಕಾರ್ಯಕರ್ತರು ತಮ್ ತಮ್ಮ ಜನರ ಗುಂಪಿನೆಡೆಗೆ ಮೊಗಮಾಡಿ ಜೋರಾಗಿ ಪಿಸುಗುಡತೊಡಗಿದರು. ಆದರೆ ಅದು ರಾತ್ರಿಯ ಗುಂಡಿನ ಮತ್ತೊ ಅಥವ ಇನ್ನು ಸ್ವಲ್ಪ ಸಮಯದಲ್ಲಿ ಸವಿಯಬಹುದಾದ ಬಿರಿಯಾನಿಯ ಕನಸೋ ಅಥವಾ ಭಾಷಣ ಘೋಷಣೆಗಳೆಂದರೆ ಸಹಜವಾಗಿ ಮೂಡುವ ಹಿಂಜರಿಕೆಯ ಸ್ವಭಾವವೊ ಏನೊ ಗುಂಪಿನಿಂದ ಒಂದೆರೆಡು ಧ್ವನಿಗಳು ಬಿಟ್ಟರೆ ಬೇರ್ಯಾರು ತುಟಿಕ್ ಪಿಟಿಕ್ ಅನ್ನಲಿಲ್ಲ. ಮೇಲಾಗಿ ವಾಕಿಂಗೆ ಬರುವ ಭಾಗಶಃ ಸಿಟಿಯ ಪ್ರಜ್ಞಾವಂತ ನಾಗರಿಕರೂ ಸಹ ಅದಾಗಲೇ ಬಂದ ದಾರಿಗೆ ಸುಂಕವಿಲ್ಲವೆಂದು ಗೊಣಗಿಕೊಳ್ಳುತ್ತ ಅಲ್ಲಿಂದ ಜಾಗ ಕಿತ್ತಿದ್ದರಿಂದಲೂ ಮೂಡಬೇಕಿದ್ದ ಸಹಜ ಸದ್ದು ಅಲ್ಲಿ ಮೂಡಲಿಲ್ಲವೆನ್ನಬಹುದು.

'ನಿಮ್ಗೆ ಇಂತ ಸರ್ಕಾರ ಬೇಕ ಮಹಾಜನರೇ ?' ಎಂದು ಮತ್ತೊಮ್ಮೆ ಅರಚಿದ ರಾಜಕಾರಣಿ ತನ್ನ ಸಿಟ್ಟಿನ ಕಣ್ಣುಗಳಿಂದ ಕಾರ್ಯಕರ್ತರನ್ನು ನೋಡತೊಡಗಿದ.

'ಯಸ್ ಮೈ ಲೀಡರ್ .. ಸರ್ಕಾರ ಬೇಕು .. ಬೇಕೇ ಬೇಕು .. ಕೋಟಿ ಕೋಟಿ ಖರ್ಚ್ ಮಾಡಿ ಎಲೆಕ್ಟ್ ಮಾಡಿರೋದು ಮೂರ್ ದಿನಕ್ಕೆ ಗಂಟು ಮೂಟೆ ಕಟ್ಸಿ ಮೂಲೆಗೆ ಹಾಕೋಕಲ್ಲ!'

ಗುಂಪಿನ ಮಧ್ಯದಿಂದ ಮೂಡಿದ ಈ ಅಚಾನಕ್ ಉತ್ತರಕ್ಕೆ ಕಕ್ಕಾಬಿಕ್ಕಿಯಾದ ರಾಜಕಾರಣಿ ಸದ್ದು ಬಂದೆಡೆಯೇ ನೋಡತೊಡಗಿದ. ಸ್ಟೇಜಿನ ಮೇಲಿದ್ದ ಇತರರ ದೃಷ್ಟಿಯೂ ಅತ್ತ ಕಡೆಗೇ ತಿರುಗಿತು. ದಷ್ಟಪುಷ್ಟವಾದ ಕೈಯೊಂದು ಜನರ ಗುಂಪಿನ ಮದ್ಯೆ ಮೇಲೆದ್ದು ನಿಂತಿತ್ತು. ಕಾರ್ಯಕರ್ತರು ಇನ್ನೇನು ಧಿಕ್ಕಾಪಾಲಾಗಿ ಓಡುವುದೊಂದೇ ಬಾಕಿ. ಆದಿ ತನ್ನ ಪಕ್ಕಕ್ಕೆ ತಿರುಗಿ ರಾಜಕಾರಣಿಯ ಮುಖಕ್ಕೆ ಒಡೆದವನಂತೆ ಉತ್ತರಿಸಿದ ಲೋಕೇಶನನ್ನು ಕಂಡು ಚೇಳು ಕಡಿದವರಂತೆ ಚಂಗನೆ ನೆಗೆದು ಪಕ್ಕದ ಗುಂಪಿನಲ್ಲಿ ಮರೆಯಾದ ಹಾಗು 'ಲೋಕಿ .. ಬೇಡ .. ಸುಮ್ನಿರೋ ..' ಎಂದು ಅಲ್ಲಿಂದಲೇ ಪಿಸುಗುಡತೊಡಗಿದ.

'ಯಂಗ್ ಮ್ಯಾನ್ .. ನಿಮ್ಗೆ ಇವೆಲ್ಲ ಅರ್ಥ ಆಗಲ್ಲ ಅನ್ಸುತ್ತೆ...ನಾವ್ ಹೇಳ್ತಾ ಇರೋದು ಜನಗಳ ಒಳಿತಿಗೇ'

'ನಾನ್ ಹೇಳ್ತಾ ಇರೋದು ಜನಗಳ ಒಳಿತಿಗೇನೆ ಸಾರ್..' ರಪ್ಪನೆ ಲೊಕೇಶನೂ ಉತ್ತರಿಸಿದ.

'ಒಹ್ ಇಸ್ ಇಟ್ .. ಬನ್ನಿ ಹಾಗಾದ್ರೆ .. ಇಲ್ ಬಂದು ಮಾತಾಡಿ .. ಬಂದು ವಿವರಿಸಿ.. ದಿಸ್ ಸ್ಟೇಜ್ ಇಸ್ ಫಾರ್ ಯು' ಎಂದ ರಾಜಕಾರಣಿ ಬಹುಶಃ ಬೊಗಳುವ ನಾಯಿ ಕಚ್ಚುವುದಿಲ್ಲವೆಂಬ ಲೆಕ್ಕಾಚಾರದಲ್ಲಿ ಸ್ಟೇಜಿನ ಕೊಂಚ ಹಿಂದೆ ಸರಿದು ನಿಂತಂತೆ ನಟಿಸಿದ. ಪಕ್ಕದಲ್ಲಿ ಆಸೀನರಾಗಿದ್ದಂತಹ ಇತರೆ ರಾಜಕಾರಣಿಗಳು ಪ್ರೋಗ್ರಮಿನ ಪ್ರೊಟೋಕಾಲನ್ನು ಮುರಿದ ಆತನನ್ನು ದುರುಗುಟ್ಟು ನೋಡುತ್ತಾ ಮನದೊಳಗೆ ಗುಸು ಗುಸು ಬೈಯತೊಡಗಿದರು. ಯುವಜನರ ಹುಲಿಯೆಂಬ ನಾಮಾಂಕಿತದ ಆತ ಇತರೆ ರಾಜಕಾರಣಿಗಳಿಗೆ ತನ್ನ ಕಣ್ಣಿನಲ್ಲೇ ಏನೂ ಆಗಲಿಲ್ಲವೆಂಬ ಸಮಜಾಯಿಷಿಯನ್ನು ನೀಡಿ ಇನ್ನೇನು ಮೈಕಿನೆಡೆಗೆ ಪುನಃ ಬರಬೇಕು ಅನ್ನುವಷ್ಟರಲ್ಲಿಯೇ ಲೋಕೇಶ ಅಲ್ಲಿಗೆ ಬಂದು 'ಒಂದೂರಿನಲ್ಲಿ ಒಬ್ಬ ಯುವಕನಿದ್ದ..' ಎಂದು ಯಾರಿಗೆ ಯಾವುದೇ ಗೌರವಸೂಚಕಗಳಿಲ್ಲದೆಯೇ ತನ್ನ ಭಾಷಣವನ್ನು ಮುಂದುವರೆಸಿದ!

Continues..

Saturday, July 11, 2020

ಪಯಣ - 11

ರಾತ್ರಿ ತಡರಾತ್ರಿಯವರೆಗೂ ಮೊಬೈಲ್ ಚಾಟ್ ಹಿಸ್ಟರಿಯನ್ನು ಚಾಚೂತಪ್ಪದೆ ರಿವೈಸ್ ಮಾಡಿದ ಆದಿಗೆ ಬೆಳ್ಳಂಬೆಳಗೆ ಆತನ ಅಮ್ಮನ ಫೋನ್ ಕಾಲು ಬಡಿದೆಬ್ಬಿಸಿತು . ಕಟ್ ಮಾಡಿದಷ್ಟೂ ಪುನ್ಹ ರಿಂಗುಡುತಿದ್ದ ಫೋನನ್ನು ಕಡೆಗೂ ಕಿವಿಯ ಮೇಲಿಟ್ಟ ಆತ ಸಿಟ್ಟಿನಿಂದ 'ಏನ್ ಆಯ್ತ್ ಇವತ್ತು ಬೆಳ್ ಬೆಳ್ಗೆ?!' ಎನುತ ಅರಚಿದ. ಅತ್ತ ಕಡೆಯಿಂದ ಅಮ್ಮ ಅದೇನೋ ವಿಷಯದ ಬಗ್ಗೆ ಏರು ಧ್ವನಿಯಲ್ಲಿ ಹೇಳುತ್ತಾ ಹೋದಂತೆ ಅದಕ್ಕೆ ತಾಳವೇನೋ ಎಂಬಂತೆ ಅಪ್ಪನೂ ಜೋರಾಗಿ ಚೀರತೊಡಗಿದ. ಮೊಬೈಲ್ನಿಂದ ಬರುತ್ತಿದ್ದ ಅರಚಾಟದ ಸದ್ದು ಹೆಚ್ಚಾದಂತೆ ಆದಿ ಎದ್ದು ರೂಮಿನ ಹೊರಗೆ ಬಂದ. ಕೈ ಮೀರಿರುವ ಘಳಿಗೆಯಲ್ಲಿ ತಾನೂ ಬೆಂಕಿಯ ಕಿಡಿಯಾದರೆ ಏನು ಗತಿ ಎಂದುಕೊಂಡು ಎಂದಿನಂತೆಯೇ ಅವರಿಬ್ಬರನ್ನು ಸಂತೈಸಲು ಆತ ಪ್ರಯತ್ನಿಸತೊಡಗಿದ. ಸಿಟ್ಟಿನ ಅಲೆ ಮನದೊಳಗೆ ಏರಿಳಿಯುತ್ತಿರಲು, ಆದಿ ಶಾಂತಿದೂತನಂತೆ ಪೋಷಕರ ಸಿಲ್ಲಿ ವಿಷಯಗಳಿಗೆ ಶಾಂತ ಸ್ವರದಲ್ಲಿ ಸಾಂತ್ವನವನ್ನು ಹೇಳುತ್ತಿರಲು, ಆತನ ಸಹನೆಯ ಕಟ್ಟೆ ಹೊಡೆಯಿತು. ಆದರೆ ಆತ ಅವರೊಟ್ಟಿಗೆ ಚೀರಾಡದೆ ತನ್ನ ಫೋನನ್ನೇ ಬಾಲ್ಕನಿಯ ನೆಲದ ಮೇಲೆ ಜೋರಾಗಿ ಎಸೆದು ಆವೇಶದಿಂದ ಒಂದೇ ಸಮನೆ ಏದುಸಿರು ಬಿಡುತ್ತ ನಿಂತ. ದೇವರಿಗೆ ಒಡೆಯುವ ಕಾಯಿಯಂತೆ ಛಿದ್ರ ವಿಛಿದ್ರವಾಗಿ ಫೋನು ಮುರುಟಿ ಬಿದ್ದಿತು. ಸಿಟ್ಟಿನಿಂದ ಏದುಸಿರು ಬಿಡುತ್ತಿದ್ದ ಆದಿಗೆ ಛಿದ್ರಗೊಂಡ ಮೊಬೈಲನ್ನು ಧಿಟ್ಟಿಸುತ್ತ ಇಂತಹ ಪೋಷಕರಿಂದ ಖುಷಿ ದೂರವಿದ್ದರೇ ಒಳ್ಳೆಯೆದು ಎಂಬ ಯೋಚನೆ ಮೂಡಿತು. ಇವರ ಕಿತ್ತಾಟ, ಅಪ್ರಬುದ್ದತೆ, ಅರಚಾಟ ಎಲ್ಲವೂ ಎಂಥವರಿಗೂ ಸಹಿಸಲಾಗದ ವಿಷಯಗಳಾಗುತ್ತವೆ ಎಂದನಿಸಿತು.

ಲೋಕೇಶ ಎದ್ದು ಜಾಗಿಂಗ್ ಗೆ ರೆಡಿಯಾಗತೊಳಗಿದ. ತಲೆಯಲ್ಲಿ ಸಾವಿರ ಯೋಚನೆಗಳ ಆಗರವನ್ನು ಸೃಷ್ಟಿಸಿಕೊಂಡಿದ್ದ ಆದಿಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಒಡೆದ ತೆಂಗಿನಕಾಯಿಯ ಚೂರುಗಳಾಗಿದ್ದ ಫೋನಿನ ಭಾಗಗಳನ್ನು ಎತ್ತಿ ಒಂದೊಂದಾಗಿಯೇ ಜೋಡಿಸತೊಡಗಿದ. ಲೋಕೇಶ ಏನೋ ಹೇಳಿದ್ದನ್ನೂ ಅಷ್ಟಾಗಿ ಕೇಳಿಸಿಕೊಳ್ಳದೆ ತನ್ನ ವ್ಯರ್ಥ ಕೆಲಸದಲ್ಲಿಯೇ ಮಗ್ನನಾದ ಆತ. ಲೋಕೇಶ ತನ್ನ ಸ್ಪೋರ್ಟ್ಸ್ ಶೂ ಅನ್ನು ತೊಟ್ಟು ಜಾಗಿಂಗ್ಗೆ ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿ ಆದಿ ಲೋಕೇಶನಿಗೆ ನಿಲ್ಲುವಂತೆ ಹೇಳುತ್ತಾನೆ. ತೊಟ್ಟ ಚಡ್ಡಿಯಲ್ಲಿಯೇ ತೆಳುವಾದ ಟಿ ಶರ್ಟ್ ಹಾಗು ಶೂ ಅನ್ನು ತೊಟ್ಟು ತಾನೂ ಜಾಗಿಂಗ್ ಗೆ ಬರುವುದಾಗಿ ಹೇಳುತ್ತಾನೆ.

ಗಹಗಹನೇ ನಕ್ಕ ಲೊಕೇಶನನ್ನು ಆದಿಯ ತೀಕ್ಷ್ಣ ದೃಷ್ಟಿಗೆ ಮಾತು ಬಾರದಂತಾಗುತ್ತಾನೆ. ಆದಿಯ ಕಣ್ಣುಗಳು ಕೆಂಡದಂತೆ ಹೊಳೆಯುತ್ತಿದ್ದವು

'ಸರಿ ಬಾರಪ್ಪ .. ನಿನ್ ಇಷ್ಟ' ಎಂದು ಲೋಕೇಶ ಆತನನ್ನು ಡಿಸ್ಟ್ರಿಕ್ಟ್ ಫೀಲ್ಡ್ ಗೆ ಓಡಿಸಿಕೊಂಡೆ ಕರೆದೊಯ್ಯುತ್ತಾನೆ.

**

ಕಾಡು ನಾಡಾಗಿ ನಾಡು ಪಟ್ಟಣಗಳಾಗಿ ಈಗ ಪಟ್ಟಣಗಳು ಸ್ಮಾರ್ಟ್ ಸಿಟಿಗಳಾಗುತ್ತಿರುವ ಕಾಲದಲ್ಲಿ ಬೊಜ್ಜು ತುಂಬಿದ ದೇಹಗಳೇ ಎಲ್ಲೆಂದರಲ್ಲಿ. ದಿನದ ಹನ್ನೆರೆಡು ಘಂಟೆಗಳ ಕಾಲ ಲ್ಯಾಪ್ಟಾಪಿನ ಮುಂದೆಯೇ ಕೂತು ದಿನ ಕಳೆಯುವ ಪ್ರಸ್ತುತ ಕೆಲಸಗಳ ಕಾಲದಲ್ಲಿ ಇಂತಹ ಬೊಜ್ಜುದೇಹಗಳಿಗೆ ನಗರದ ಪಾರ್ಕು ಹಾಗು ಆಟದ ಫೀಲ್ಡ್ಗಳೇ ಒಂತರ ಸಾಮೂಹಿಕ ನೈಸರ್ಗಿಕ ಓಪನ್ ಜಿಮ್ಗಳಾಗಿಬಿಟ್ಟಿವೆ. ಬೆಳಗಾದರೆ ಸಾಕು ಹುಡುಗ ಹುಡುಗಿಯರು, ಆಂಟಿ ಅಂಕಲ್ ಗಳಲ್ಲದೆ ಅಜ್ಜ ಅಜ್ಜಿಯರವರೆಗೂ ಜನ ಇಲ್ಲಿ ಬಂದು ನೆರೆಯುತ್ತಾರೆ. ಕೆಲವರು ವಿಚಿತ್ರವಾಗಿ ಗುಂಪುಗಟ್ಟಿಕೊಂಡು ಗಹಗಹನೇ ನಗತೊಡಗಿದರೆ ಕೆಲವರು ಇವರ ಆ ವಿಚಿತ್ರ ವರ್ತನೆಯನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾ ನೆಡೆಯುವರು. ಮತ್ತೆ ಕೆಲವರು ಮಿಲ್ಕಾ ಸಿಂಗ್ ಗಳಂತೆ ಮುಂದೆ ಸಿಕ್ಕವರನ್ನು ತುಳಿದು ತಿವಿದೇ ಬಿಡುವಂತೆ ಓಡತೊಡಗಿದರೆ ಇನ್ನು ಕೆಲವರು ಓಡುವುದಕ್ಕಿಂತ ಜಾಸ್ತಿ ಜ್ಯೂಸು, ಬಿಸ್ಕತ್ತು ಹಾಗು ಹಣ್ಣುಗಳನ್ನು ತಿಂದು ಸಾಂತ್ವನ ತಂದುಕೊಳ್ಳುವರು. ಇನ್ನು ಮಕ್ಕಳು ಯುವಕರಂತೂ ಇಡೀ ಫೀಲ್ಡ್ನ ತುಂಬೆಲ್ಲ ಪಸರಿಸಿಕೊಂಡು ಕ್ರಿಕೆಟ್ ಆಡುವ ಮೋಜು. ಯಾವ ಆಟಗಾರ ಅದ್ಯಾವ ಮ್ಯಾಚಿನವನೋ ಅದೊಂದು ಬಗೆಯ ಚಿದಂಬರ ರಹಸ್ಯವೇ ಹಲವರಿಗೆ. ಇನ್ನು ಕೆಲವರು ತಾವು ವಾಕ್ ಮಾಡಲು ಬಂದಿರುವುದೋ ಅಥವಾ ತಮ್ಮ ಅತಿ ಧುಬಾರಿ ನಾಯಿಯನ್ನು ಪ್ರದರ್ಶನಕ್ಕೆ ತಂದಿರುವರೋ ಹೇಳುವುದು ಕಷ್ಟ. ಕಿವಿಗೆ ಇಯರ್ ಫೋನನ್ನು ತೂರಿಸಿಕೊಂಡು ಹಜ್ಜೆಗೊಂದು ಹೆಜ್ಜೆಯನ್ನು ಪೋಣಿಸುತ್ತಾ ನೆಡೆದರೆ ಆ ಧುಬಾರಿ ನಾಯಿ ತನ್ನ ಅಗ್ಗದ ನಾಯಿ ಬುದ್ದಿಯನ್ನು ಬಿಡಬೇಕೆ? ಕುತ್ತಿಗೆಗೆ ಹಾಕಿರುವ ಸರಪಳಿಯೇ ತುಂಡಾಗುವಂತೆ ಗಬ್ಬು ವಾಸನೆ ಬರುವೆಡೆಯೊ ಅಥವಾ ಮತ್ಯಾವಾವುದೋ ಅನ್ಯ ಲಿಂಗಿ ನಾಯಿಯ ಸೆಳೆತಕ್ಕೊ ಒಳಗಾಗಿ ಓಟ ಕೀಳುವುದು. ಆಗ ಮಾತ್ರ ಬಹುಷಃ ಆ ನಾಯಿಯೊಟ್ಟಿಗೆ ವಾಕಿಂಗ್ ಬಂದಿರುವವರು ಜಾಗಿಂಗ್ ಮಾಡುವುದು! ಸುಪ್ತವಾಗಿದ್ದ ನಾಯಿಯ ನಾಯಿಬುದ್ಧಿಯನ್ನು ಕೂಡಲೇ ಶಮನಮಾಡುವುದು ಅಷ್ಟು ಸುಲಭವಲ್ಲ ಎಂದೆನಿಸಿ ಏದುಸಿರು ಬಿಡುತ್ತಾ ಕೊನೆಗೂ ಅದನ್ನು ಅದರ ಪಾಡಿಗೆ ಬಿಟ್ಟು ಕಲ್ಲು ಬೆಂಚಿನ ಮೇಲೆ ಕೂತು ನಿಟ್ಟುಸಿರು ಬಿಡುವರು.

ಲೋಕೇಶ ಅದೇನೇ ಬಡಬಡಿಸಿದರೂ ಆದಿ ಒಂದಿನಿತೂ ಪ್ರತಿಕ್ರಿಯೆ ನೀಡದೆಯೆ ಫೀಲ್ಡ್ನವರೆಗೂ ಓಡುತ್ತಲೇ ಬಂದ. ಆತನೊಳಗೆ ಈಗ ಅಪ್ಪ, ಅಮ್ಮ, ಖುಷಿ ಎಂಬ ಮೂರು ಪಾತ್ರಗಳು ಪ್ರೀತಿಯೆಂಬ ನಾಲ್ಕನೇ ಪಾತ್ರವನು ಸೃಷ್ಟಿಸಲು ಆವಣಿಸುತ್ತಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಕಾರಣ ತನ್ನ ಪೋಷಕರೇ ಎಂದು ಆತ ಅಂದುಕೊಳ್ಳುತ್ತಾನೆ. ಕೋಪ ಇನ್ನೂ ವಿಪರೀತವಾಯಿತು. ಲೊಕೇಶನೊಟ್ಟಿಗೆ ಓಡೋಡಿಕೊಂಡೆ ಇಲ್ಲಿಯವರೆಗೂ ಬಂದ ಆದಿ ಒಂದಿನಿತೂ ಸುಸ್ತಾದವನಂತೆ ಕಾಣಲಿಲ್ಲ. ಲೋಕೇಶನೇ ಖುದ್ದಾಗಿ 'ಸ್ವಲ್ಪ ಹೊತ್ತು ಕೂತು ಆಮೇಲೆ ಜಾಗಿಂಗ್ ಮಾಡುವ' ಎಂದರೂ ಕೇಳದ ಆದಿ ಕ್ರೀಡಾಂಗಣದ ಸುತ್ತ ಓಡತೊಡಗುತ್ತಾನೆ. ತಲೆಯ ತುಂಬೆಲ್ಲ ಚಿತ್ತವನ್ನು ಹರಿದು ತಿನ್ನುವ ವಿಷಯಗಳೇ ತುಂಬಿರುವಾಗ ಬಹುಷಃ ಆತನಿಗೆ ತಾನು ಇಲ್ಲಿಗೆ ಬಂದಿರುವದೇ ಗೊತ್ತಿಲ್ಲದಿರಬಹುದು. ಆತ ಓಡುತ್ತಲೇ ಹೋದ. ಓಟ ತೀವ್ರವಾಯಿತು. ಮುಂದೆ ಸಿಕ್ಕ ಬೊಜ್ಜು ತುಂಬಿದ ದೇಹಗಳು ಈತನ ಓಟದ ರಭಸಕ್ಕೆ ಸರ್ರನೆ ದಾರಿ ಸರಿದು ಬದಿಗೆ ನಿಂತವು. ದುಭಾರಿ ನಾಯಿಯೊಂದು ತನ್ನ ಮಾಲೀಕನಿಂದ ಸರಪಣಿ ಸಮೇತ ಬೇರ್ಪಟ್ಟು ಆದಿಯೊಟ್ಟಿಗೆ ಓಡತೊಡಗಿತು.

ಅಷ್ಟು ದೊಡ್ಡ ಕ್ರೀಡಾಂಗಣದ ಎರಡನೇ ಸುತ್ತನ್ನು ಮುಗಿಸಿದ ಆದಿಯನ್ನು ಲೋಕೇಶ ಜೋರಾಗಿ ಕೂಗಿ ನಿಲ್ಲುವಂತೆ ಹೇಳುತ್ತಾನೆ. ಆದಿಗೆ ಆತನ ಕೂಗಿನ ಸದ್ದೂ ಕಿವಿಯ ಮೇಲೆ ಬೀಳಲಿಲ್ಲ. ಓಟ ಮುಂದುವರೆಯಿತು. ಆತನ ಓಟವನ್ನು ನೋಡಿದ ಲೋಕೇಶನಿಗೆ ಈಗ ಅಕ್ಷರ ಸಹ ದಿಗ್ಬ್ರಮೆಯಾಗತೊಡಗಿತು. ಆತ ತನ್ನ ಮೊಬೈಲನ್ನು ಹೊರತೆಗೆದ. ಮೂರನೇ ಸುತ್ತನ್ನು ಮುಗಿಸುವಷ್ಟರಲ್ಲಿ ವಾಕಿಂಗ್ ಗೆ ಬಂದಿದ್ದ ಹಲವರು ಟ್ರ್ಯಾಕ್ ನ ಉದ್ದಕ್ಕೂ ಈತನಿಗೆ ದಾರಿ ಬಿಡುವಂತೆ ಪಕ್ಕಕೆ ಸರಿದು ನಿಂತಿದ್ದರೆ, ಗಹಗಹನೇ ನಗುತ್ತಿದ್ದ ಹಿರಿಯರ ಗುಂಪೂ ಮೊದಲ ಬಾರಿಗೆ ಎಂಬಂತೆ ಅಷ್ಟು ದೊಡ್ಡ ಕ್ರೀಡಾಂಗವನ್ನು ಒಂದೇ ವೇಗದಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಯುವಕನನ್ನು ಬಾಯ್ಬಿಟ್ಟುಕೊಂಡೇ ನೋಡತೊಡಗಿತು. ನಾಲ್ಕನೇ ಸುತ್ತನ್ನು ತನ್ನ ಮೊಬೈಲಿನ ಟೈಮರ್ ನಲ್ಲಿ ಲೆಕ್ಕ ಹಾಕಿದ ಲೋಕೇಶನಿಗೆ ಆದಿಯ ವೇಗವನ್ನು ಕಂಡು ನಂಬಲೇ ಆಗಲಿಲ್ಲ.

'ಆದಿ...! ಕಮ್ ಆನ್ ಮ್ಯಾನ್ .. ಸ್ಟಾಪ್ ಇಟ್ ನೌ..' ನಾಲ್ಕನೇ ಸುತ್ತನ್ನು ಮುಗಿಸಿದ ಆದಿಯನ್ನು ಉದ್ದೇಶಿಸಿ ಈ ಬಾರಿ ತನ್ನ ಶಕ್ತಿಯನ್ನು ಮೀರಿ ಕೂಗಿದ.

ಆದಿ ನಿಲ್ಲಲಿಲ್ಲ.

ಆದರೆ ಈ ಬಾರಿ ಲೋಕೇಶ ಸುಮ್ಮನಿರದೆ ಆತನೂ ಆದಿಯ ಹಿಂದೆ ಓಡುತ್ತಾ ಒದ್ದೆಯಾಗಿದ್ದ ಆತನ ಶರ್ಟ್ನ ಕುತ್ತಿಗೆಯನ್ನು ಹಿಡಿದು ಜಗ್ಗತೊಡಗಿದ. ದುಃಖಭರಿತ ಸಿಟ್ಟಿನಲ್ಲಿ ಕೂಗುತ್ತಾ ಆದಿ ಲೊಕೇಶನ ಕೈಯನ್ನು ದೂರಕ್ಕೆ ತಳ್ಳುತ್ತಾನೆ. ಆದರೆ ಲೋಕೇಶ ಸುಮ್ಮನಾಗುವುದಿಲ್ಲ. ಆತನ ಕೈಯನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸತೊಡಗುತ್ತಾನೆ. ಕೆಲ ಕ್ಷಣ ಕೊಸರಾಡಿದಂತೆ ಆಡಿದ ಆದಿ ಕೊನೆಗೆ ಶಾಂತವಾಗುತ್ತಾನೆ. ಆತನ ಕಣ್ಣುಗಳು ರಕ್ತ ಕಾರುವಂತೆ ಕೆಂಪಾಗಿದ್ದವು. ಲೋಕೇಶ ಆತನಿಗೆ ಕುಡಿಯಲು ನೀರನ್ನು ಕೊಟ್ಟರು ಒಂದು ಗುಟುಕು ಕುಡಿಯದ ಆತ ಕೂಡಲೇ ಅಲ್ಲಿಂದ ರೂಮಿನೆಡೆಗೆ ಓಡುತ್ತಾನೆ. ಲೋಕೇಶ ಆಶ್ಚರ್ಯದಿಂದ ಆತ ಓಡಿದ ದಿಕ್ಕನೇ ನೋಡುತ್ತಾ ನಿಲ್ಲುತ್ತಾನೆ.

'ಏನಪ್ಪಾ ಆತ ನಿನ್ ಫ್ರೆಂಡ' ಹಿಂದಿನಿಂದ ಬಂದ ಅರ್ವತ್ತರ ವ್ಯಕ್ತಿಯೊಬ್ಬರು ಕೇಳಿದರು.

'ಹೌದು ಸಾರ್.. ಏಕೆ?'

'ನೋಡು, ನಾನ್ ಇಲ್ಲಿ ಕಳೆದ ಮೂವತ್ತು ವರ್ಷದಿಂದ ವಾಕಿಂಗ್ ಗೆ ಬರ್ತಾ ಇದ್ದೀನಿ .. ಆದ್ರೆ ಈ ರೀತಿ ನಾಲ್ಕ್ ರೌಂಡ್ ರನ್ನಿಂಗ್ ನ ಇಷ್ಟ್ ಫಾಸ್ಟಾಗಿ ಓಡಿರೋದ್ನ ಯಾರನ್ನೂ ನೋಡಿಲ್ಲ.. ಅವ್ರು ನ್ಯಾಷನಲ್ ಲೆವೆಲ್ ರನ್ನರ?' ಎಂದು ಕೇಳುತ್ತಾರೆ.

ಅವರ ಪ್ರೆಶ್ನೆಗೆ ನಕ್ಕ ಲೋಕೇಶ ತನ್ನ ಫೋನಿನ ಟೈಮರ್ ಅನ್ನು ತೆಗೆದು ನೋಡುತ್ತಾ,

'ಸದ್ಯಕ್ಕೆ ಒಬ್ಬ ಟ್ರೂ ಲವರ್ ಅಷ್ಟೇ ಸರ್ .. ಇನ್ ಸ್ವಲ್ಪ ದಿನದಲ್ಲಿ ನೋಡಿ ಹಿ ವಿಲ್ ಬಿ ಆ ಡ್ಯಾಶಿಂಗ್ ರನ್ನರ್..' ಎನ್ನುತ್ತಾನೆ.

**

ಸುಪ್ತವಾಗಿದ್ದ ಆದಿಯ ಆ ಅದ್ಭುತ ಓಟ ಲೋಕೇಶನಲ್ಲಿ ಹಲವಾರು ಪ್ರೆಶ್ನೆಗಳನ್ನು ಹುಟ್ಟು ಹಾಕಿದ್ದವು. ವರ್ಷಗಳಿಂದ ಓಡುತ್ತಿರುವ ತಾನೇ ಮನಸ್ಸು ಮಾಡಿ ಓಡಿದರೂ ಹೆಚ್ಚೆಂದರೆ ಎರಡು ಸುತ್ತುಗಳನ್ನು ಓಡಬಹುದಾದ ಟ್ರ್ಯಾಕ್ ಅನ್ನು ಆದಿ ಅದೇಗೆ ಒಮ್ಮೆಲೇ ನಾಲ್ಕು ಸುತ್ತನ್ನು ಓಡಿದ ಎಂದು ದಿಗ್ಭ್ರಮೆಯಾಯಿತು. ಒಟ್ಟಿಗೆ ಒಂದು ಹೊಸ ಆಲೋಚನೆಯೂ ಮೂಡಿತು.

ಜಾಗಿಂಗ್ ಮುಗಿಸಿ ಅಲ್ಲಿಂದ ಸೀದಾ ತನ್ನ ಶುಂಠಿ ಗದ್ದೆಗೆ ಹೋಗಿ ಅಜ್ಜಿಯೊಟ್ಟಿಗೆ ಜೀವನದ ಬಗೆಗಿನ ಅರೆಪಕ್ವಗೊಂಡ ಕೆಲವು ವಿಚಾರಗಳನ್ನು ಚರ್ಚಿಸಿ ರೂಮಿಗೆ ಬಂದ ಲೋಕೇಶ ಎಂದಿನಂತೆ ಕೈಕಾಲುಗಳನ್ನು ತೊಳೆಯದೆ ರೂಮಿನೊಳಗೆ ಬಂದು ಮಲಗಿದ್ದ ನನ್ನ ಮೇಲೆ ದೊಪ್ಪನೆ ಬಿದ್ದ. ಕನಸ್ಸಿನ ಲೋಕದಲ್ಲಿ ಆರಾಮಾಗಿ ವಿಶ್ರಮಿಸುತ್ತಿದ್ದ ನನಗೆ ದೊಡ್ಡ ಬಂಡೆಯೊಂದು ಮೈಮೇಲೆ ಕುಸಿದು ಬಿದ್ದಂತಹ ಅನುಭವವಾಯಿತು. ಎದ್ದು ವಾಸ್ತವವನ್ನು ಅರಿತು , ಲೊಕೇಶನ ಅಂಡಿನ ಮೇಲೆ ಎರಡು ಬಾರಿ ಜಾಡಿಸಿ ಒದೆದ ಮೇಲೆಯೇ ನನ್ನ ಕೋಪ ಕೊಂಚ ಶಮನವಾದದ್ದು. ನಾನು ಶಕ್ತಿ ಮೀರಿ ಕೊಟ್ಟ ಏಟನ್ನೂ ಅಷ್ಟಾಗಿ ಲೆಕ್ಕಕ್ಕೆ ತೆಗೆದುಕೊಳ್ಳದೆ ಆತ,

'ಮಚಿ.. ಇವತ್ತಿಂದ ಇನ್ ಆರ್ ತಿಂಗಳ್ಲಲಿ ನಮ್ಮಲ್ಲಿ ಒಬ್ಬ ಯೂನಿವರ್ಸಿಟಿ ಚಾಂಪಿಯನ್ ಆಗ್ತಾನೆ.. ದಿ ರನ್ನಿಂಗ್ ಚಾಂಪಿಯನ್'. ಎಂದು ಆತ ಹೇಳಿದ. ಬಾಯ್ಬಿಟ್ಟರೆ ಆಕಾಶಕ್ಕೆ ಹಾರುವ ಮಾತಾಡುವ ಆತನ ಮಾತನ್ನು ನಾನು ಕೇಳಿಯೂ ಕೇಳದವನಂತೆ ಸುಮ್ಮನಾದೆ. ಆದರೂ ಯಾಕೋ ಕೇಳಬೇಕೆಂದ್ದಾಗಿ,

'ಯಾರಪ್ಪ ಅದು ಮಹಾತ್ಮಾ' ಎಂದು ಹೊದೆದುಕೊಂಡಿದ್ದ ರಗ್ಗನ್ನು ಮುಖ ಮುಚ್ಚುವಂತೆ ಮೇಲಕ್ಕೆ ಎಳೆದುಕೊಂಡೆ.

'ಆದಿ..' ಎಂದಷ್ಟೇ ಹೇಳಿದ ಆತ ಸುಮ್ಮನಾದ. ಓದುವ ಕಾಲದಲ್ಲಿ ಶುಂಠಿ ಬಿಸಿನೆಸ್ನಂತ ಅಡ್ಡ ಕಸುಬನ್ನು ಹಿಡಿದಿರುವ ಈ ಅಡ್ಡಕಸುಬಿ ಇನ್ನು ಆ ಅಮಾಯಕ ಆದಿಶೇಷನನ್ನು ಮುಗಿಸಿಬಿಡುವನೋ ಎಂದು ಕೂಡಲೇ ಎದ್ದು ಕೂತೆ.

'ವ್ಹಾಟ್ ?! ಮಗ್ನೆ ನೀನು ಫೇಲ್ ಆಗೋದಲ್ದೆ ಅವನ್ನೂ ಜೊತೆಗೆ ಕೂರ್ಸ್ಕೊಬೇಕು ಅನ್ಕೊಂಡಿದ್ದೀಯ?! ಪಾಪ ಅವ್ನ್ ಏನ್ ಮಾಡ್ದ ಅಂತ ಈಗ ರನ್ನಿಂಗು'

'ಏನ್ ಮಾಡಿದಾನ.. ನೋಡಿಲ್ಲಿ' ಎಂದು ತನ್ನ ಜೇಬಿನಲ್ಲಿದ್ದ ಮೊಬೈಲನ್ನು ಹೊರಗೆಳೆದು ತೋರಿಸುತ್ತಾ 'ರೆಕಾರ್ಡ್ ಬ್ರೇಕಿಂಗ್ ಸ್ಪೀಡಲ್ಲಿ ಓಡ್ತಾನೇ ಕಾಣಪ್ಪಾ ಈ ಮಹಾಶಯ.. ನಂಗಂತೂ ಅಷ್ಟ್ ಓಡೋಕೆ ಸಾಧ್ಯನೇ ಇಲ್ಲ ಬಿಡು .. ಅದ್ ಯಾರನ್ನ ಓಡಿಸ್ಕೊಂಡ್ ಹೋಗ್ತಾ ಇದ್ನೋ ಗೊತ್ತಿಲ್ಲ' ಎಂದು ನಗತೊಡಗಿದ.

'ಲೋಕಿ ಬೇಡ್ವೊ .. ಅವ್ನ್ ಏನಾದ್ರೂ ಫೇಲ್ ಆದ್ರೆ ನಮ್ ಕತೇನೂ ಅಷ್ಟೇ.. ಅವ್ನ್ ಪಾಡಿಗೆ ಅವ್ನ ಓದೋಕ್ಕೆ ಬಿಡು' ನಾನೆಂದೆ.

'ನೋ ವೇಸ್.. ನೀನ್ ಸುಮ್ನಿರಪ್ಪಾ, ನಾನೇನ್ ಅವ್ನ ಮಾರ್ಸಿಗೂ ಅಥವಾ ಮತ್ತೊಂದು ಗ್ರಹಕ್ಕೋ ಕಳ್ಸ್ತಾ ಇಲ್ಲ..ಏನ್ ದಿನಕ್ಕೆ ಒಂದ್ ಘಂಟೆ ಖರ್ಚ್ ಮಾಡಿದ್ರೆ ಸಾಕು' ಎನ್ನುತ್ತಾನೆ. ಅಷ್ಟರಲ್ಲಿ ಸ್ನಾನಕ್ಕೆ ಹೋಗಿದ್ದ ಆದಿ ಹೊರಬರುತ್ತಾನೆ. ಎಂದಿನಂತೆ ಯಾರೊಟ್ಟಿಗೂ ಮಾತನಾಡದೆ ಸೆಪ್ಪೆಮೋರೆಯನ್ನು ಹಾಕಿಕೊಂಡೆ ಕಾಲೇಜಿಗೆ ರೆಡಿಯಾಗತೊಡಗುತ್ತಾನೆ.

'ಆದಿ, ದಾರೀಲಿ ಪ್ರಿನ್ಸಿಪಲ್ ಸಿಕ್ಕಿದ್ರು' ಲೋಕೇಶ ಹೇಳಿದ.

'ಒಹ್, ಏನಂತೆ'

'ಅವ್ರ್ ಮಗಳಿಗೆ ಒಬ್ಬ ಬಾಯ್ ಫ್ರೆಂಡ್ ಬೇಕಂತೆ..' ಎಂದ ಆತ ಗೊಳ್ಳನೆ ನಗತೊಡಗಿದ. ಒಮ್ಮೆಲೇ ಮೂಡಿದ ಆ ಪ್ರತಿಕ್ರಿಯೆಗೆ ನನಗೂ ನಗುವನ್ನು ತಡೆಯಲಾಗಲಿಲ್ಲ.

ಆದಿ ಸುಮ್ಮನಿದ್ದ.

ಕೂಡಲೇ ಲೋಕೇಶ ಆತನ ಬಳಿಗೋಗಿ 'ಮಚಿ, ನೀನ್ ಈ ಪಾಟಿ ಓಡಿರೋದನ್ನ ನಾನು ನೋಡಿರಲೇ ಇಲ್ಲ. ಏನ್ ಅಂತ ಬ್ರಿಲಿಯಂಟ್ ರನ್ನಿಂಗ್ ಅಲ್ದೆ ಇದ್ರೂ ಇಟ್ಸ್ ಪ್ರಾಮಿಸಿಂಗ್. ಡೈಲಿ ಇದೆ ರೀತಿ ಪ್ರಾಕ್ಟೀಸ್ ಮಾಡಿದ್ರೆ ಯೂನಿವರ್ಸಿಟಿ ಚಾಂಪಿಯನ್ಶಿಪ್ಗೆ ಟ್ರೈ ಮಾಡಬಹುದು..' ಎಂದು ಸುಮ್ಮನಾದ.

'ನನ್ನ್ ಲೈಫೇ ಒಂದು ಚಾಂಪಿಯನ್ ಶಿಪ್ ಆಗಿದೆ ಇವಾಗ .. ಮೊದ್ಲು ಅದನ್ನ ಗೆದ್ರೆ ದೊಡ್ಡ್ ವಿಷ್ಯ..' ಎಂದ ಆದಿ ಮತ್ತೇನೂ ಮಾತನಾಡದೆ ಬಿರಬಿರನೆ ರೂಮಿನಿಂದ ಹೊರನೆಡೆದ.

ಲೋಕೇಶನಿಗೆ ಏನೇಳಬೇಕೆಂದು ತೋಚದೆ ನನ್ನೆಡೆಗೆ ನೋಡತೊಡಗಿದ.



****



ಮದ್ಯಾಹ್ನದ ಊಟಕೆಂದು ಬರ್ಗರ್ ತಿನ್ನಲು ಕಾಲೇಜಿನ ಹತ್ತಿರದ ಮಾಲಿಗೆ ಬಂದು ಕೂತಿರುವಾಗ ಪಕ್ಕದ ಟೇಬಲ್ಲಿನ ತಿಂದು ಬಿಟ್ಟ ಪ್ಲೇಟ್ಗಳನ್ನು ತೆಗೆಯಲಿಲ್ಲವೆಂದು ಬೊಜ್ಜುಗಟ್ಟಿದ್ದ ದೇಹಗಳೆರೆಡು ಅಲ್ಲಿನ ಕ್ಲೀನರನ್ನು ಕರೆದು ಒಂದೇ ಬೈಯತೊಡಗಿದವು. ಬಿರಬಿರನೆ ವಾನರರಂತೆ ಅರೆಬರೆ ತಿಂದು ಬಿಸುಟು ಹೋಗಿದ್ದ ಆಹಾರವನ್ನು ಆತ 'ಸಾರಿ ಸಾರ್ , ಸಾರಿ ಮೇಡಂ' ಏನುತಾ ಎತ್ತಿ ಪ್ಲೇಟ್ ಒಂದಕ್ಕೆ ಸುರಿದು ಅದನ್ನು ಪಕ್ಕದ ಡಸ್ಟ್ ಬಿನ್ನಿಗೆ ಹಾಕಿ ಬಂದು, ಸ್ಪ್ರೇಯ ನೀರನ್ನು ಟೇಬಲ್ಲಿನ ಮೇಲೆಲ್ಲಾ ಚುಮುಕಿಸಿ ಬಟ್ಟೆಯೊಂದನ್ನು ತೆಗೆದು ನೀಟಾಗಿ ಒರೆಸಿ ಅವರನ್ನು ಕೂರುವಂತೆ ಹೇಳುತ್ತಾನೆ.

'ಹ್ಯುಮಾನಿಟಿ ಅನ್ನೋ ಪದಕ್ಕೆ ಅರ್ಥ ಹೋಗಿರೋದೇ ಇಂತವರಿಂದ..' ಸಂಕಟದ ಅಲೆಯೊಂದು ಲೋಕೇಶನ ಮುಖದ ಮೇಲೆ ಮೂಡಿ ಮರೆಯಾಯಿತು.

'ಅಲ್ ನೋಡ್ ಮಚಿ ಆ ಕಾಗೆಗಳನ್ನ.. ತಿನ್ನೋಕ್ಕೆ ಒಂಚೂರು ಊಟ ಸಿಕ್ರು ಸಾಕು ಹೇಗೆ ಕೂಗಿ ತನ್ನವರೆಲ್ಲರನ್ನು ಕರೆಯುತ್ತೆ..ಅಲ್ಲಿ ವರ್ಣ, ಜಾತಿ, ಮೇಲು ಕೀಳು ಅನ್ನೋ ಒಂಚೂರೂ ತಾರತಮ್ಯ ಇಲ್ಲ. ಹಸಿದಾಗ ಮಾತ್ರ ಆಹಾರ ಇಲ್ಲವರಾದರೆ ವಿರಾಳವಾದ ವಿಹಾರ. ಇಂತಹ ಮುಗ್ದ ಪ್ರಾಣಿಗಳ ನಡುವೆ ಮಾನವ ಅದೇಗೆ ಜನ್ಮ ತಾಳಿದ ಅನ್ನೋದೇ ತಿಳಿಯೋಲ್ಲ . ಅದೆಷ್ಟು ಕೆಟಗರಿಯ ಮಾನವರು ಇದ್ದಾರೆ ಇಲ್ಲಿ. ದೇಶ, ಭಾಷೆ, ಜಾತಿ, ವರ್ಣದಿಂದಿಡು ಪ್ರಗತಿಪರ, ದೇಶದ್ರೋಹಿ, ಅತ್ಯಾಚಾರಿ.. ಥು.. ನಮ್ದು ಒಂದು ಜೀವ್ನಾನ..' ಲೋಕೇಶನ ಸದ್ದು ನಾವು ಕೂತಿದ್ದ ಮೂರು ಟೇಬಲ್ಲಿನ ಆಚೆಗೂ ಕೇಳಿ ಕೆಲವರು ನಮ್ಮೆಡೆಗೆ ತಿರುಗುವಂತೆ ಮಾಡಿತು.

'ಹೊಟ್ಟೆ ತುಂಬಿದಾಗ ಮಾತ್ರ ಕೊಡ್ಬೇಕು ಅನ್ಸೋದು ..ಇಲ್ಲ ಅಂದ್ರೆ ಪ್ರಾಣಿಗಳಿಂತ ಕೀಳು.. ಆ ಕಣ್ಣುಗಳನ್ನು ನೋಡು ಮಚಿ .. ಬರಿ ನಾನು , ನನಗೆ , ನನ್ನದು ಅನ್ನೋದೇ ತುಂಬಿ ಕೊಬ್ಬಿ ಹೋಗಿದೆ..’

'ಗುರು.. ತಿಂದ್ ಆಯ್ತಾ.. ಫಸ್ಟ್ ಪಿರಿಯಡ್ ನಿಮ್ ಕುಂಬಕರ್ಣಿ ಅತ್ತೆದು.. ಬರ್ತೀಯೋ ಇಲ್ಲ ಇಲ್ಲೇ ಕೊಬ್ಬಿರೋ ಕಣ್ಣ್ಗಳನ್ನ ನೋಡ್ತಾ ಕೂರ್ತಿಯೋ ' ಎಂದು ಆತನ ಮಾತಿಗೆ ಕಿಂಚಿತ್ತು ಬೆಲೆಕೊಡದಂತೆ ಆತನಿಗೆ ನೆನಪಿಸಿದೆ.

ಆದಿ ಒಂದು ಮುಗುಳ್ನಕ್ಕ. ಆತನ ಮುಖದ ಮೇಲೆ ಇತ್ತೀಚಿಗೆ ನಗುವೆಂಬುದನ್ನು ಕಂಡು ತಿಂಗಳುಗಳೇ ಆಗಿವೆ.

'ಹಲೋ.. ಮಿಸ್ಟರ್!!' ಎಂದು ಜೋರಾಗಿ ಅರಚಿದ ಲೋಕಿ. ತುಸು ಮೊದಲು ತಾವೇ ಪರಮಪಾವನರಂತೆ ಟೇಬಲನ್ನು ಕ್ಲೀನರೊಬ್ಬನಿಂದ ಶುಚಿಗೊಳಿಸಿ ಈಗ ಬೇಕಾದ ಬೇಡವಾದ ಎಲ್ಲವನ್ನು ಆರ್ಡರ್ ಕೊಟ್ಟು ತಂದು, ರಕ್ಕಸರಂತೆ ತಿಂದು, ಫ್ರೆಂಚ್ ಫ್ರೈ ಹಾಗು ಕೆಚಪ್ಪಿನ ಒಡೆದ ಪ್ಯಾಕನ್ನು ಟೇಬಲ್ಲಿನ ಮೇಲೆಲ್ಲಾ ಚೆಲ್ಲಿ, ಬರ್ಗರ್ನ ಸುತ್ತಿ ಕೊಡುವ ಪೇಪರ್ ಹಾಗು ಟಿಶ್ಯೂವನ್ನು ಉಂಡೆಗಟ್ಟಿ ಕಸದ ತೊಟ್ಟಿಯಲ್ಲಿ ಬಿಸಾಡುವಂತೆ ಎಸೆದು ಗೊರ್ರನೆ ತೇಗುತ್ತಾ ಎದ್ದು ನೆಡೆಯತೊಡಗಿದ ಆ ಜೋಡಿಗೆ ಲೊಕೇಶನ ಗದರಿಸುವ ಸದ್ದು ಇತ್ತ ಕಡೆ ತಿರುಗುವಂತೆ ಮಾಡಿತು.

'ಯೆ..ಸ್..' ಅಮೇರಿಕ ಅಧ್ಯಕ್ಷನ ಹೆಂಡತಿಯಂತೆ ಧಿಮಾಕಿನ ಧ್ವನಿಯಲ್ಲಿ ನುಡಿದಳು ಆತನೊಟ್ಟಿಗಿದ್ದ ಆಕೆ.

'ಟೇಬಲನ್ನು ಅಷ್ಟ್ ಕ್ಲೀನ್ ಆಗಿ ಯಾಕ್ರೀ ಬಿಟ್ ಹೋಗ್ತಾ ಇದ್ದೀರಾ.. ಇನ್ನೂ ಸ್ವಲ್ಪ ಗಲೀಜ್ ಮಾಡಿ.. ಕ್ಲೀನರ್ ಬಾಯ್ ಅನ್ನೋ ಪ್ರಾಣಿ ಕಮ್ ಮಷೀನ್ ಇದ್ಯಲ್ಲ .. ಕ್ಲೀನ್ ಮಾಡುತ್ತೆ..’ ಅವರನ್ನೇ ದುರುಗುಟ್ಟಿ ನೋಡುತ್ತಾ ಹೇಳಿದ ಲೋಕೇಶ.

'Excuse me .. Mind your own Business!!'

‘I’m midning my own business Ma’m.. Now will you be kind enough to clean the table & leave..?' ತನ್ನ ಸಿಟ್ಟನ್ನು ಬಿಟ್ಟೂ ಬಿಡದವನಂತೆ ಹೇಳತೊಡಗಿದ ಲೋಕೇಶ.

‘Fuck off..’ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಆಕೆ ತನ್ನೊಟ್ಟಿಗೆ ಬಂದ ಯುವಕನ ಕೈ ಹಿಡಿದು ಎಳೆದುಕೊಂಡು ಹೊರಡತೊಡಗಿದಳು.

ಕೂಡಲೇ ಅಲ್ಲಿಗೆ ಬಂದ ಕ್ಲೀನರ್ ಹುಡುಗನನ್ನು ಕಣ್ ಸನ್ನೆಯಲ್ಲೇ ಶುಚಿಗೊಳಿಸದಂತೆ ಹೇಳಿದ ಲೋಕೇಶ,

'ಕ್ಲೀನ್ ಮಾಡೇ ಹೋಗ್ಬೇಕು.. ಇಲ್ಲ ಅಂದ್ರೆ ಇದೆ ಫೋಟೋನ ನ್ಯೂಸ್ ಪೇಪರ್ಸ್ ಗೆ ಹಾಕಿ ಮಾನ ತೆಗಿಬೇಕಾಗುತ್ತೆ..' ಎಂದು ಆತ ಅವರಿಬ್ಬರು ಕೂತು ತಿನ್ನುತ್ತಿದ್ದ ಹಾಗು ತಿಂದ ನಂತರದಲ್ಲಿ ಸೆರೆಹಿಡಿದಿದ್ದ ಫೋಟೋವನ್ನು ಕಾಣುವಂತೆ ತನ್ನ ಮೊಬೈಲಿನಲ್ಲಿ ಅವರಿಗೆ ತೋರಿಸುತ್ತಾನೆ. ಫೋಟೋವನ್ನು ಯಾವಾಗ ಅವರುಗಳು ಕಂಡರೋ ಕೊಂಚ ಹೊತ್ತು ಯೋಚಿಸುವಂತೆ ಮಾಡಿ ತಮ್ಮೆಲ್ಲ ಅಟ್ಟಿಟ್ಯೂಡನ್ನು ಬದಿಗಿಟ್ಟವರಂತೆ ಸಿಡುಕು ಮೊರೆಯಲ್ಲಿಯೇ ತಿಂದ ಅಷ್ಟೂ ವೆಸ್ಟನ್ನು ಪ್ಲೇಟ್ನ ಮೇಲಿರಿಸಿ ಅದನ್ನು ಪಕ್ಕದ ಡಸ್ಟ್ ಬಿನ್ನಿಗೆ ಸುರಿದು ಗೊಣಗಿಗೊಳ್ಳುತ್ತಾ ಅಲ್ಲಿಂದ ಜಾಗ ಕಿತ್ತರು.

ಅಲ್ಲಿಯವರೆಗೂ ನೆರೆದಿದ್ದ ಎಲ್ಲರೂ ಇತ್ತಕಡೆಯೇ ನೋಡುತ್ತಿದ್ದರು ಹಾಗು ಊಟವಾದ ನಂತರ ತಮ್ಮ್ ತಮ್ಮ ಪ್ಲೇಟಿನಲ್ಲಿದ್ದ ಮಿಕ್ಕ ಊಟವನ್ನು ಖುದ್ದು ತಾವಾಗಿಯೇ ಎತ್ತಿ ಕಸದ ಬುಟ್ಟಿಗೆ ಸುರಿದು ಬರತೊಡಗಿದರು.

'ನೋಡ್ದ ಮಚಿ.. ಎಲ್ಲದಕ್ಕೂ ಒಂದ್ ಟ್ರಿಕ್ ಇರುತ್ತೆ' ಎಂದ ಲೋಕೇಶ ನಮತ್ತ ನೋಡುತ್ತಾ ನಗತೊಡಗಿದ.

'ಏನೋ ಬಿಡಪ್ಪ.. ಆದ್ರೆ ನಿನ್ ಈ ಸೋಶಿಯಲ್ ರಿಫಾರ್ಮ್ ಅಲ್ಲಿ ಆ ಅಮಾಯಕ ಕ್ಲೀನರ್ ಬಾಯ್ ಕೆಲ್ಸ ಹೋಗ್ಬಾರ್ದು ಅಷ್ಟೇ' ಎಂದೇ ನಾನು.

'ಹಾಗೇನಾದ್ರೂ ಆದ್ರೆ ಇವ್ನ್ ಅಂಗಡಿ ಮುಚ್ಚ್ಸಲ್ವ..'

'ಹೌದು ಬಾರಪ್ಪ ರೌಡಿ ರಂಗಣ್ಣ.. ಬಿಟ್ರೆ ನೀನು ಕಾಲೇಜನ್ನೂ ಮುಚ್ಚುಸ್ತಿಯ' ಎಂದ ನಾನು ಹೊರಡಲು ಅಣಿಯಾದೆ.

ಎಲ್ಲಿ ತಮ್ಮ ಫೋಟೋವನ್ನೂ ನ್ಯೂಸ್ ಪೇಪರ್ಸ್ ಗೆ ಹಾಕಿ ಮಾನವನ್ನು ಹರಾಜು ಹಾಕುವನೋ ಎಂಬಂತೆ ಆದಿ ನಮ್ಮೆಲ್ಲರ ಪ್ಲೇಟ್ಗಳನ್ನೂ ಎತ್ತಿ ಬದಿಗಿಟ್ಟು ಟೇಬಲನ್ನು ಶುಚಿಗೊಳಿಸಿದ.

ಲೋಕೇಶ ಏನೋ ಮೊಬೈಲ್ನಲ್ಲಿ ಟೈಪ್ ಮಾಡುವಂತೆ ಮಾಡಿ ದೊಡ್ಡದಾದ ಮಂದಹಾಸವನ್ನು ಬೀರತೊಡಗಿದ.

'ಈಗ್ ಏನಾಯಿತೋ ತಂದೆ?' ನಾನು ಕೇಳಿದೆ.

'ಏನಿಲ್ಲ.. ಆ ಧಡೂತಿ ಜೋಡಿ ಫೋಟೋನ ಆರ್ಕುಟ್ ನಲ್ಲಿ ಅಪ್ಲೋಡ್ ಮಾಡ್ದೆ ಅಷ್ಟೇ'

'ಎಂಥ ಕುಟ್ಟು??' ಮೊದಲಬಾರಿಗೆ ಎಂಬಂತೆ ಕೇಳಿದ ವಿಚಿತ್ರ ಪದವನ್ನು ಮಗದೊಮ್ಮೆ ಕೇಳಿದೆ.

'ಒಂದು ಸೋಶಿಯಲ್ ನೆಟ್ವರ್ಕಿಂಗ್ ಸೈಟ್ .. ಅಲ್ಲಿ ನೂರಾರ್ ಜನ ಫ್ರೆಂಡ್ಸ್ ಗ್ರೂಪ್ಸ್ ಇರುತ್ತೆ .. ಕೆಲವ್ ತಿಂಗಳ ಮೊದಲಷ್ಟೇ ಲಾಂಚ್ ಆಗಿದ್ದು .. ನಮ್ ಕಾಲೇಜ್ ಗ್ರೂಪು ಅದ್ರಲ್ಲಿದೆ.. ಅದೇ ಒಂದು ಗ್ರೂಪಿಗೆ ಈ ಫೋಟೋ ಹಾಕಿ ಕಾಮೆಂಟ್ಸ್ ಬರ್ದಿದ್ದೀನಿ ..'

'ಲೋ ಯಾಕೋ ಇದೆಲ್ಲ.. ಅವ್ರ್ ಕ್ಲೀನ್ ಮಾಡಿ ಹೋದ್ರಲ್ಲ '

'ಹೌದು ಗುರು .. ಆದ್ರೆ ಏನ್ ಮಾಡೋದು, Fuck off ಅಂತ ಬೈದ್ಲಲ್ಲ ' ಎಂದ ಲೋಕೇಶ ವ್ಯಂಗ್ಯಭರಿತ ನಗುವನ್ನು ಬೀರಿದ.

Continues..